"ನಿಮಗೂ ತಾಯಿ, ತಂಗಿ ಇರ್ತಾರೆ, ಭಾಷೆ ಮೇಲೆ ಹಿಡಿತವಿರಲಿ": ಶಿವಣ್ಣ ಹೀಗಂದಿದ್ಯಾಕೆ?
ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಸಿನಿಮಾ ಈ ವಾರ ತೆರೆಗೆ ಬಂದಿದೆ. ಶಿವರಾಜ್ಕುಮಾರ್- ಪ್ರಭುದೇವ ನಟನೆಯ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವರಾತ್ರಿ ಹಬ್ಬದ ವೀಕೆಂಡ್ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.
ನೀರಿನ ಸಮಸ್ಯೆ ಸುತ್ತಾ 'ಕರಟಕ ದಮನಕ' ಕಥೆ ಸುತ್ತುತ್ತದೆ. ಶಿವಣ್ಣ- ಪ್ರಭುದೇವ ಜೊತೆಗೆ ಯೋಗರಾಜ್ ಭಟ್ ಸೇರಿದ್ದಾರೆ ಅಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದ್ದು ಸುಳ್ಳಲ್ಲ. ಆರ್ಮುಗ ರವಿಶಂಕರ್, ರಂಗಯಣ ರಘು, ರಾಕ್ಲೈನ್ ವೆಂಕಟೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಮಿಂಚಿದ್ದಾರೆ.

'ಕರಟಕ ದಮನಕ' ಸಿನಿಮಾ ರಿಲೀಸ್ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದೆ. ನೀರಿನ ಸಮಸ್ಯೆ ಕುರಿತು ಸಿನಿಮಾ ಮಾಡಿರುವುದು ಈಗ ನಿಜವಾಗಿಯೂ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿರುವುದು ಕಾಕತಾಳೀಯ ಎನಿಸುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಪ್ರೇಕ್ಷಕರಿಂದ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮಾತನಾಡಿದ್ದಾರೆ. "ನಾನು ಕೂಡ ಸಿನಿಮಾ ಬಿಡುಗಡೆ ಆದ ಬಳಿಕ ಜನ ಪ್ರತಿಕ್ರಿಯೆ ನೋಡುತ್ತಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಗಮನಿಸಿದ್ದೇನೆ. ಎಲ್ಲರೂ ಚೆನ್ನಾಗಿದೆ, ಬೊಂಬಾಟ್ ಎನ್ನುತ್ತಿದ್ದಾರೆ. ಆದರೆ ಕೆಲವರು ಇನ್ನು ಚೆನ್ನಾಗಿ ಮಾಡಬಹುದಿತ್ತು ಎನ್ನುತ್ತಿದ್ದಾರೆ. 100%ರಷ್ಟು ಎಲ್ಲರನ್ನು ರಂಜಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ನಾವು ದೇವರಾಗಿ ಬಿಡ್ತೀವಿ. ನಾವು ಮನುಷ್ಯರಾಗಿಯೇ ಇರಬೇಕು" ಎಂದಿದ್ದಾರೆ.

ಮಾತು ಮುಂದುವರೆಸಿದ ಶಿವಣ್ಣ "ನಾನು ಯಾಕೆ ಸೋಶಿಯಲ್ ಮೀಡಿಯಾ ರೆಸ್ಪಾನ್ಸ್ ಬಗ್ಗೆ ಹೇಳ್ತೀನಿ ಅಂದ್ರೆ, ಬರೀ ಪಾಸಿಟಿವ್ ಅಲ್ಲ. ಕೆಲವರು ಬಳಸುವ ಭಾಷೆ ಬಹಳ ಮುಖ್ಯ. ಅಭಿಪ್ರಾಯ ಹೇಳುವಾಗ ಕೆಲವರ ಭಾಷೆ ನೋಡಿ ಬೇಸರವಾಯಿತು. ಭಾಷೆಯ ಮೇಲೆ ಹಿಡಿತ ಇರಬೇಕು. ಯಾವ ಭಾಷೆ ಬಳಸುತ್ತೀವಿ, ಯಾರು ನೋಡುತ್ತಾರೆ ಎನ್ನುವುದು ಮುಖ್ಯ"
"ನಿಮಗೂ ತಾಯಿ ಇದ್ದಾರೆ. ತಂಗಿ ಇದ್ದಾರೆ. ನನಗೆ ಅದನ್ನು ನೋಡಿ ಸ್ವಲ್ಪ ದುಃಖ ಆಯಿತು. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚೆನ್ನಾಗಿಲ್ಲ ಎಂದು ಹೇಳಿ. ಆದರೆ ಭಾಷೆ ಬಳಸುವಾಗ ಯೋಚಿಸಿ. ಯಾಕಂದ್ರೆ ಅದು ಟಿವಿಯಲ್ಲಿ ಬರುತ್ತಿರುತ್ತದೆ. ಎಲ್ಲರೂ ನೋಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಅಂದಾಕ್ಷಣ ಏನೇನೊ ಮಾತನಾಡಲು ಸಾಧ್ಯವಿಲ್ಲ. ಭಾಷೆ ಮುಖ್ಯ. ನಿಮಗೂ ತಂದೆ ತಾಯಿ ಹೆಂಡತಿ ಮಕ್ಕಳು ಎಲ್ಲಾ ಇರುತ್ತಾರೆ. ನಾಳೆ ಅದನ್ನು ಅವರು ನೋಡಿದರೆ ಚೆನ್ನಾಗಿರಲ್ಲ. ಆ ಪದಗಳು ಏನು ಅಂತ ಬೇಡ. ನನ್ನ ಬಾಯಲ್ಲಿ ಅದು ಬರಲ್ಲ. ಅದನ್ನು ಬಿಟ್ಟರೆ ಪ್ರೇಕ್ಷಕರು ಪ್ರತಿಕ್ರಿಯೆ ನನಗೆ ತೃಪ್ತಿ ತಂದಿದೆ" ಎಂದಿದ್ದಾರೆ.
ಸದ್ಯ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45', ನರ್ತನ್ ಸಾರಥ್ಯದ 'ಬೈರತಿ ರಣಗಲ್' ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಲು ಉತ್ಸುಕರಾಗಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್' ಬಳಿಕ ತಮಿಳು ಕಥೆಗಳನ್ನು ಕೇಳಿದ್ದಾರೆ. ಹೀರೊ ಆಗಿ ನಟಿಸುವ ಬಗ್ಗೆಯೂ ಚರ್ಚೆ ನಡೀತಿದೆ.
ತೆಲುಗಿನಲ್ಲಿ ರಾಮ್ಚರಣ್ ಮುಂದಿನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಅತಿಥಿ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಜೊತೆ ನರಸಿಂಹ ಆಗಿ ಶಿವಣ್ಣ ಆರ್ಭಟ ನೋಡಿ RC16 ಚಿತ್ರದಲ್ಲಿ ಪವರ್ಫುಲ್ ಪಾತ್ರವನ್ನು ಡಿಸೈನ್ ಮಾಡಿದ್ದಾರೆ ಎನ್ನಲಾಗ್ತಿದೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ.


Click it and Unblock the Notifications











