ಸುದೀಪ್ 'ಮಾರ್ಕ್' ಸಿನಿಮಾ ನಿರ್ಮಾಪಕರ ಜೊತೆ ಶಿವಣ್ಣನ ಮುಂದಿನ ಪ್ರಾಜೆಕ್ಟ್ ಕನ್ಫರ್ಮ್
ಕನ್ನಡ ಚಿತ್ರರಂಗದಲ್ಲಿ ವರ್ಷವಿಡೀ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ಕುಮಾರ್. ಸದಾ ಶಿವಣ್ಣ ಕೈಯಲ್ಲಿ ನಾಲ್ಕೈದು ಸಿನಿಮಾಗಳು ಇರುತ್ತವೆ. ಕ್ಯಾನ್ಸರ್ ಸಮಸ್ಯೆಯಿಂದ ಚಿಕಿತ್ಸೆ ಪಡೆದು ಬಂದು ಒಂದೆರಡು ತಿಂಗಳು ವಿಶ್ರಾಂತಿ ಪಡೆದ ಶಿವಣ್ಣ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಅಷ್ಟರಮಟ್ಟಿಗೆ ಅವರಿಗೆ ಸಿನಿಮಾ ಮೇಲೆ ಪ್ರೀತಿ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಬಣ್ಣ ಹಚ್ಚಿದ್ದಾರೆ.
125 ಸಿನಿಮಾಗಳನ್ನು ಕಂಪ್ಲೀಟ್ ಮಾಡಿ ಶಿವಣ್ಣ ಮುನ್ನುಗ್ಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ರಾಮ್ಚರಣ್ ನಟನೆಯ 'ಪೆದ್ದಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಶಿವರಾಜ್ಕುಮಾರ್ ನಟಿಸಿದ್ದಾರೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಬಳಿಕ ರಜನಿಕಾಂತ್ ನಟನೆಯ 'ಜೈಲರ್'-2 ಸಿನಿಮಾ ಬಿಡುಗಡೆ ಆಗಲಿದೆ. ಮತ್ತೊಮ್ಮೆ ನರಸಿಂಹನಾಗಿ ಜೈಲರ್ ಮುತ್ತುವೇಲ್ ಪಾಂಡಿಯನ್ ಬೆಂಬಲಕ್ಕೆ ನಿಂತಿದ್ದಾರೆ.

ಧನಂಜಯ್ ಜೊತೆ ನಟಿಸುತ್ತಿರುವ 'ಉತ್ತರಕಾಂಡ' ಸಿನಿಮಾ ಕಾರಣಾಂತರಗಳಿಂದ ನಿಂತು ಹೋಗಿದೆ. 'ಡ್ಯಾಡ್' ಎಂಬ ಮತ್ತೊಂದು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ತೆಲುಗಿನ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹೇಮಂತ್ ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಶ್ರೀನಿ ನಿರ್ದೇಶನದಲ್ಲಿ 'ಎ ಫಾರ್ ಆನಂದ್' ಎಂಬ ಚಿತ್ರ ಕೂಡ ಸೆಟ್ಟೇರಿದೆ.
ಹೀಗೆ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿರುವ ಶಿವಣ್ಣ ಮತ್ತೊಂದು ಸಿನಿಮಾ ಘೋಷಣೆಗೆ ಸಿದ್ಧತೆ ನಡೆದಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸೆಂಚುರಿ ಸ್ಟಾರ್ ನಟಿಸಲಿದ್ದಾರೆ. ಚಿತ್ರಕ್ಕೆ ತಮಿಳು ನಿರ್ದೇಶಕ ಶರವಣನ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಬಗ್ಗೆ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಹಿಂದೆ ಇದೇ ಸಂಸ್ಥೆ ನಿರ್ಮಾಣದ 'ಆರ್ಡಿಎಕ್ಸ್' ಎಂಬ ಚಿತ್ರದಲ್ಲಿ ಶಿವಣ್ಣ ನಟಿಸಬೇಕಿತ್ತು. ಚಿತ್ರದ ಮುಹೂರ್ತ ಕೂಡ ನೆರವೇರಿತ್ತು. ರವಿ ಅರಸು ನಿರ್ದೇಶನದ ಆ ಸಿನಿಮಾ ಕಥೆ ಬಳಿಕ ಏನಾಯ್ತು ಎನ್ನುವುದು ಗೊತ್ತಿಲ್ಲ.
ಇದೀಗ ಮತ್ತೆ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಶಿವಣ್ಣ ಕಾಲ್ಶೀಟ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಟೈಟಲ್ ಸಮೇತ ಸಿನಿಮಾ ಘೋಷಣೆ ಆಗಿ ಸೆಟ್ಟೇರಲಿದೆ. ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರೊಟ್ಟಿಗೆ ಹೊಸ ಸಿನಿಮಾ ಘೋಷಿಸಲು ಸಂತಸವಾಗುತ್ತಿದೆ. ಶರವಣನ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ತಮಿಳಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ನಿರ್ಮಿಸಿದೆ. ಅಜಿತ್ ನಟನೆಯ 'ವಿವೇಗಂ', 'ವಿಶ್ವಾಸಂ' ಧನುಷ್ ನಟನೆಯ 'ಪಟಾಸ್' ಹಾಗೂ 'ಮಾರನ್' ಹೀಗೆ ಹೈ ಬಜೆಟ್ ಚಿತ್ರಗಳನ್ನು ಸಂಸ್ಥೆ ನಿರ್ಮಾಣ ಮಾಡಿ ಸಕ್ಸಸ್ ಕಂಡಿದೆ. ಎರಡು ವರ್ಷಗಳ ಹಿಂದೆ 'ಕ್ಯಾಪ್ಟನ್ ಮಿಲ್ಲರ್' ಎಂಬ ಚಿತ್ರವನ್ನು ನಿರ್ಮಿಸಿದ್ದರು. ಧನುಷ್ ಜೊತೆ ಶಿವಣ್ಣ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇನ್ನು ಕಳೆದ ವರ್ಷ ಸುದೀಪ್ ನಟಿಸಿದ 'ಮಾರ್ಕ್' ಚಿತ್ರ ನಿರ್ಮಿಸಿ ಸಂಸ್ಥೆ ಗೆದ್ದಿತ್ತು.
ಕನ್ನಡ ಹಾಗೂ ತಮಿಳಿನಲ್ಲಿ 'ಮಾರ್ಕ್' ಸಿನಿಮಾ ತೆರೆಗೆ ಬಂದಿತ್ತು. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇದೀಗ ಶಿವಣ್ಣನ ಜೊತೆ ಸಿನಿಮಾ ಮಾಡಲು ಸತ್ಯಜ್ಯೋತಿ ಮುಂದಾಗಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರಾ? ಕನ್ನಡ ಸಿನಿಮಾನಾ? ತಮಿಳು ಸಿನಿಮಾನಾ? ಎನ್ನುವ ಕುತೂಹಲ ಮೂಡಿದೆ. ನೇರವಾಗಿ ತಮಿಳು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುವ ಬಗ್ಗೆ ಶಿವಣ್ಣ ಆಸಕ್ತಿ ತೋರಿಸುತ್ತಿದ್ದಾರೆ. 'ಜೈಲರ್' ಬಳಿಕ ಅಂತಹ ಸಾಕಷ್ಟು ಅವಕಾಶಗಳು ಅರಸಿ ಬಂದಿದೆ.


Click it and Unblock the Notifications











