ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ
Recommended Video

ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಚೊಚ್ಚಲ ಸಿನಿಮಾ 'ನಾಗರಹಾವು' ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆಯಾಗಿರುವುದು ಸ್ಯಾಂಡಲ್ ವುಡ್ ನಲ್ಲಿ ಹಬ್ಬದ ವಾತಾವರಣ ಉಂಟು ಮಾಡಿದೆ.
ಅಭಿಮಾನಿಗಳೆಲ್ಲರೂ ಚಿತ್ರವನ್ನ ನೋಡಿ ಖುಷಿ ಪಡುತ್ತಿದ್ದಾರೆ. ಅಭಿಮಾನಿಗಳ ಜೊತೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ 'ನಾಗರಹಾವು' ಸಿನಿಮಾವನ್ನ ಇಷ್ಟಪಟ್ಟು ನೋಡುತ್ತಿದ್ದಾರೆ.
ಹೀಗೆ, 'ನಾಗರಹಾವು' ಸಂಭ್ರಮದಲ್ಲಿ ತೇಲಾಡುತ್ತಿರುವ ವಿಷ್ಣು ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ನೀಡಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿ 'ನಾಗರಹಾವು' ನೋಡಿದ ಶಿವಣ್ಣ, ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್, ಈಶ್ವರಿ ಪ್ರೊಡಕ್ಷನ್ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇದರ ಮಧ್ಯೆ ಡಾ ವಿಷ್ಣು ಸ್ಮಾರಕದ ಬಗ್ಗೆಯೂ ಸೆಂಚುರಿಸ್ಟಾರ್ ಮಾತನಾಡಿದರು. ''ವಿಷ್ಣು ಸರ್ ಸ್ಮಾರಕ ಖಂಡಿತಾ ಆಗ್ಬೇಕು, ಅದು ಆಗುತ್ತೆ. ಅದಕ್ಕೆ ಒಂದು ಸರಿಯಾದ ಮಾರ್ಗದಲ್ಲಿ ಹೋಗಬೇಕಿದೆ. ನನಗೆ ಅಪ್ಪಾಜಿಗೆ ಎಷ್ಟು ಗೌರವ ಕೊಡ್ತಿನೋ ವಿಷ್ಣು ಸರ್ ಗೂ ಅಷ್ಟೇ ಗೌರವ ಕೊಡ್ತೀನಿ. ನಾನು ವಿಷ್ಣು ಸರ್ ಅವರ ಜೊತೆಯಲ್ಲಿ ಅವರ ಕೈಹಿಡಿದುಕೊಂಡು ಹಲವು ಕಾರ್ಯಕ್ರಮಕ್ಕೆ ಹೋಗಿದ್ದೀನಿ. ಅವರ ಸ್ಮಾರಕ ನಿರ್ಮಾಣ ಮಾಡಬೇಕು, ಖಂಡಿತಾ ನಾವೇ ಬಂದು ಮುಂದೆ ನಿಲ್ಲುತ್ತೇವೆ, ಅದರ ಬಗ್ಗೆ ಯೋಚನೆ ಮಾಡಬೇಕಾಗಿಲ್ಲ'' ಎಂದರು.
ಇನ್ನು ಎಚ್ ಡಿ ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಆದ ಬಳಿಕ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಸಿಎಂ ಅವರನ್ನ ಈ ವಿಚಾರವಾಗಿ ಭೇಟಿ ನೀಡಿ ಮನವಿ ಮಾಡಿದ್ದರು. ನಂತರ ಎಚ್ಡಿಕೆ ಕೂಡ ಭಾರತಿ ಅವರೊಂದಿಗೆ ಹಾಗೂ ಅವರ ಅಭಿಮಾನಿಗಳೊಂದಿಗೆ ಚರ್ಚೆ ಮಾಡಿ, ಆದಷ್ಟೂ ಬೇಗ ಸ್ಮಾರಕ ನಿರ್ಮಾಣ ಮಾಡ್ತೀವಿ ಎಂದಿದ್ದರು.

ಸೆಪ್ಟಂಬರ್ 18 ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಿದೆ. ಆ ಸಂತೋಷದ ದಿನಕ್ಕೆ ಸರ್ಕಾರ ಹಾಗೂ ವಿಷ್ಣು ಕುಟುಂಬದಿಂದ ಸಿಹಿ ಸುದ್ದಿ ಸಿಗುತ್ತೆ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯ್ತಿದ್ದಾರೆ.


Click it and Unblock the Notifications











