25 ದಿನ ಪೂರೈಸಿದ 'ಭೈರತಿ ರಣಗಲ್'; ಬಾಕ್ಸಾಫೀಸ್ ಗಳಿಕೆ ಎಷ್ಟು?
ಶಿವರಾಜ್ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ರೋಣಾಪುರದ 'ರಣಗಲ್' ದರ್ಬಾರ್ ಜೋರಾಗಿದೆ. 4ನೇ ವಾರ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಬಾಕ್ಸಾಫಿಸ್ ಗಳಿಕೆ ಕೂಡ ಚೆನ್ನಾಗಿದೆ.
ಸೂಪರ್ ಹಿಟ್ 'ಮಫ್ತಿ' ಸೀಕ್ವೆಲ್ ಅನ್ನು ನರ್ತನ್ ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದರು. ನವೆಂಬರ್ 15ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. ಕನ್ನಡದ 'ಭೈರತಿ ರಣಗಲ್' ಜೊತೆ ಸೂರ್ಯ ನಟನೆಯ 'ಕಂಗುವ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಆದರೆ ರಣಗಲ್ ಆರ್ಭಟಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿತ್ತು.

ಸ್ವತಃ ಶಿವರಾಜ್ಕುಮಾರ್ ತಮ್ಮದೇ ಬ್ಯಾನರ್ನಲ್ಲಿ 'ಭೈರತಿ ರಣಗಲ್' ಸಿನಿಮಾ ನಿರ್ಮಿಸಿ ಗೆದ್ದಿದ್ದಾರೆ. ಇತ್ತೀಚೆಗೆ ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ಸಿನಿಮಾ ಒಟ್ಟಾರೆ ಬ್ಯುಸಿನೆಸ್ ಕೂಡ ಚೆನ್ನಾಗಿದೆ. ಟಿವಿ, ಡಿಜಿಟಲ್, ಥ್ರಿಯೇಟ್ರಿಕಲ್ ರೈಟ್ಸ್ ಒಳ್ಳೆ ಬೆಲೆಗೆ ಮಾರಾಟವಾಗಿತ್ತು. ಡಬ್ಬಿಂಗ್ ರೈಟ್ಸ್ಗೂ ಒಳ್ಳೆ ಹಣ ಸಿಕ್ಕಿತ್ತು.
ಈ ವರ್ಷದ ದ್ವಿತಿಯಾರ್ಧದಲ್ಲಿ ಕನ್ನಡ ಚಿತ್ರರಂಗ ಭರ್ಜರಿ ಕಂಬ್ಯಾಕ್ ಮಾಡಿದೆ. ಗಣೇಶ್ ನಟನೆಯ 'ಕೃಷ್ಣಂ ಪ್ರಣಯಸಖಿ', ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ 'ಭೀಮ' ಹಾಗೂ ಶ್ರೀಮುರಳಿ ನಟನೆಯ 'ಬಘಿರ' ಚಿತ್ರಗಳು ಭರ್ಜರಿ ಗೆಲುವು ಕಂಡಿದೆ. ಈ ಸಾಲಿಗೆ 'ಭೈರತಿ ರಣಗಲ್' ಕೂಡ ಸೇರಿಕೊಂಡಿದ್ದು ಬಾಕ್ಸಾಫೀಸ್ನಲ್ಲಿ ಭರ್ಜರಿ ಗೆಲುವು ಕಂಡಿದೆ.
ನಟ ಶಿವರಾಜ್ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನೋವಿನ ನಡುವೆಯೂ 'ಭೈರತಿ ರಣಗಲ್' ಸಿನಿಮಾ ಮುಗಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲ, ಚಿತ್ರಕ್ಕೆ ಪ್ರೇಕ್ಷಕರ ನೀಡಿದ ಪ್ರೀತಿಗೆ ಧನ್ಯವಾದ ತಿಳಿಸಿದರು. ವಿವಿಧ ಜಿಲ್ಲೆಗಳಿಗೆ ವಿಜಯಯಾತ್ರೆ ಕೈಗೊಂಡಿದ್ದರು. ಸೆಂಚುರಿ ಸ್ಟಾರ್ ಹೋದ ಕಡೆಯೆಲ್ಲಾ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು.
ಮೈಸೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳ ಚಿತ್ರಮಂದಿರಗಳಿಗೆ 'ಭೈರತಿ ರಣಗಲ್' ಚಿತ್ರತಂಡ ಭೇಟಿ ನೀಡಿತ್ತು. ಇನ್ನು ಶೀಘ್ರದಲ್ಲೇ ಸಿನಿಮಾ ಹಿಂದಿ ಹಾಗೂ ಮಲಯಾಳಮ ಭಾಷೆಗಳಿಗೂ ಡಬ್ ಆಗಲಿದೆ. ಒಟ್ಟು 5 ಭಾಷೆಗಳಲ್ಲಿ ಓಟಿಟಿ ಸ್ಟ್ರೀಮಿಂಗ್ಗೆ ಸಜ್ಜಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಸಿನಿಮಾ ಜೀ-5ನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ.
ಬಾಕ್ಸಾಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಸಿನಿಮಾ 25 ದಿನಕ್ಕೆ ಅಂದಾಜು 24 ಕೋಟಿ ರೂ. ಗಳಿಕೆ ಕಂಡಿದೆ. ಒಟ್ಟು 12 ಕೋಟಿ ರೂ.ಗೆ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಹಿಂದಿ ಡಿಜಿಟಲ್ ರೈಟ್ಸ್, ಡಬ್ಬಿಂಗ್ ರೈಟ್ಸ್ ಅದೇರೀತಿ ತೆಲುಗು, ತಮಿಳು ಡಬ್ಬಿಂಗ್ ರೈಟ್ಸ್ ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದೆ.
'ಭೈರತಿ ರಣಗಲ್' ಸಕ್ಸಸ್ನಿಂದ ಗೀತಾ ಪಿಕ್ಚರ್ಸ್ ಸಂಸ್ಥೆ ಖುಷಿಯಾಗಿದೆ. ಈಗಾಗಲೇ ಇದೇ ಬ್ಯಾನರ್ನಲ್ಲಿ ಮತ್ತೆರಡು ಸಿನಿಮಾಗಳು ಘೋಷಣೆ ಆಗಿದೆ. 'A ಫಾರ್ ಆನಂದ್' ಚಿತ್ರವನ್ನು ಶ್ರೀನಿ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಶಾಲಾ ಶಿಕ್ಷಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಧೀರೇನ್ ರಾಮ್ಕುಮಾರ್ ನಟನೆಯ ಚಿತ್ರವನ್ನು ಸಂಸ್ಥೆ ಕೈಗೆತ್ತಿಕೊಂಡಿದೆ. ಸಂದೀಪ್ ಸುಂಕದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
'ಭೈರತಿ ರಣಗಲ್' ಕತೆಯನ್ನು ಮುಂದುವರೆಸಲು ಶಿವಣ್ಣ ಉತ್ಸುಕರಾಗಿದ್ದಾರೆ. ಈಗಾಗಲೇ ಅದಕ್ಕಾಗಿ ನರ್ತನ್ ಒಂದು ಸ್ಟೋರಿಲೈನ್ ಹೇಳಿದ್ದು ಮೆಚ್ಚುಗೆ ಆಗಿದೆ. ಇದೇ ಬ್ಯಾನರ್ನಲ್ಲಿ ಸಿನಿಮಾ ಮೂಡಿ ಬರಲಿದೆ. ಮತ್ತೊಮ್ಮೆ ಶಿವಣ್ಣ-ಶ್ರೀಮುರಳಿ ಒಟ್ಟಿಗೆ ನಟಿಸಲಿದ್ದಾರೆ. 2 ವರ್ಷಗಳ ಬಳಿಕ ಆ ಸಿನಿಮಾ ಶುರುವಾಗಲಿದೆ.


Click it and Unblock the Notifications











