'ಗುಮ್ಮಡಿ ನರಸಯ್ಯ' ಬಯೋಪಿಕ್ನಲ್ಲಿ ಶಿವಣ್ಣ; ಯಾರೀ ನರಸಯ್ಯ, ಇವರ ಹಿನ್ನೆಲೆ ಏನು?
ಬಾಲಿವುಡ್ಗೆ ಹೋಲಿಸಿದರೆ ದಕ್ಷಿಣದಲ್ಲಿ ಬಯೋಪಿಕ್ ಸಿನಿಮಾಗಳು ಕಮ್ಮಿ. ಕನ್ನಡದಲ್ಲಿ ಅಪರೂಪಕ್ಕೆ ಸಾಧಕರ ಜೀವನಚರಿತ್ರೆಯನ್ನು ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಾರೆ. ಕನ್ನಡದ ಸ್ಟಾರ್ ನಟರು ಯಾರೋ ಈ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಾರೆ. ಪಾತ್ರಗಳ ವಿಚಾರದಲ್ಲಿ ಸದಾ ಪ್ರಯೋಗ ಮಾಡುವ ಶಿವಣ್ಣ ಈಗ ಬಯೋಪಿಕ್ ಚಿತ್ರ ಒಪ್ಪಿಕೊಂಡಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಶಿವರಾಜ್ಕುಮಾರ್ ನಟನೆಯ ಹೊಸ ಸಿನಿಮಾ ಘೋಷಣೆಯಾಗಿದೆ. ಫಸ್ಟ್ ಲುಕ್ ಪೋಸ್ಟರ್ ಸಮೇತ 'ಗುಮ್ಮಡಿ ನರಸಯ್ಯ' ಸಿನಿಮಾ ಘೋಷಣೆಯಾಗಿದೆ. ಚಿತ್ರದಲ್ಲಿ ಶಿವಣ್ಣ ಟೈಟಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. ತೆಲಂಗಾಣದ ಕಮ್ಮಂ ಜಿಲ್ಲೆಯ ಯೆಲ್ಲಂಡು ವಿಧಾನಸಭಾ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದವರು ಗುಮ್ಮಡಿ ನರಸಯ್ಯ.

5 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರೂ ಸರಳ ಸಜ್ಜನ ಜೀವನ ನಡೆಸಿ ಎಲ್ಲರಿಗೂ ಮಾದರಿ ಎನಿಸಿಕೊಂಡವರು ಗುಮ್ಮಡಿ ನರಸಯ್ಯ. ಶಾಸಕರಾಗಿದ್ದಾಗಲೂ ಸೈಕಲ್ನಲ್ಲಿ ಓಡಾಡುತ್ತಾ ಬಸ್ನಲ್ಲಿ ಪ್ರಯಾಣಿಸುತ್ತಾ ಎಲ್ಲರ ಗಮನ ಸೆಳೆದಿದ್ದರು. ಈಗ ತಮಗೆ ಬರುವ ಪೆನ್ಷನ್ ಹಣವನ್ನು ಕೂಡ ತಮ್ಮ ಪಕ್ಷಕ್ಕೆ ಕೊಡುತ್ತಿದ್ದಾರೆ. ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಅವರು 5ನೇ ತರಗತಿವರೆಗೆ ಮಾತ್ರ ಓದಿದ್ದಾರೆ.
ಚಿಕ್ಕಂದಿನಿಂದಲೂ ತನ್ನ ಊರಿಗೆ ತನ್ನವರಿಗೆ ಏನಾದರೂ ಸೇವೆ ಮಾಡಬೇಕು ಎಂದು ಗುಮ್ಮಡಿ ನರಸಯ್ಯ ಕನಸು ಕಂಡಿದ್ದರು. 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು. ಬಳಿಕ ಹೆಚ್ಚು ಕಮ್ಮಿ ಸತತ 25 ವರ್ಷ ಸಿಪಿಐ ಪಕ್ಷದಿಂದ ಶಾಸಕರಾಗಿ ಚುನಾಯಿತರಾಗಿದ್ದರು. ರಾಜಕಾರಣ ಅಂದ್ರೆ ದುಡ್ಡು ಮಾಡುವುದು, ಕೋಟಿ ಕೋಟಿ ಬಾಚುವುದು ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ನರಸಯ್ಯ 5 ಬಾರಿ ಶಾಸಕರಾಗಿದ್ದರೂ ಯಾವುದೇ ಬಂಗಲೆ ಕಟ್ಟಲಿಲ್ಲ, ಕಾರ್ ಏರಿ ಓಡಾಡಲಿಲ್ಲ.
5ನೇ ಬಾರಿ ಚುನಾವಣೆಗೆ ನಿಂತಾಗ 4 ಲಕ್ಷ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಆದರೆ 5 ಲಕ್ಷ ರೂ. ಸಾಲ ಕೂಡ ಇತ್ತು. ಜನಸೇವೆಯನ್ನೇ ಈಶ ಸೇವೆ ಎಂದು ನಂಬಿದ್ವರು ನರಸಯ್ಯ. ಬುಡಕಟ್ಟು ಜನಾಂಗದವರು ಹಾಗೂ ಬಡವರ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಕೈಗೊಂಡಿದ್ದರು. ಹಣದ ರಾಜಕಾರಣ ಶುರುವಾದ ಬಳಿಕ ನರಸಯ್ಯ ಚುನಾವಣೆಯಲ್ಲಿ ಗೆಲ್ಲಲಿಲ್ಲ. 2009 ಹಾಗೂ 2014ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.
ಇವತ್ತಿಗೂ ಸರ್ಕಾರಿ ಬಸ್ ಏರಿ ನರಸಯ್ಯ ದೂರದ ಊರುಗಳಿಗೆ ಓಡಾಡುತ್ತಾರೆ. ರಸ್ತೆ ಬದಿಯಲ್ಲೇ ಊಟ ಮಾಡುತ್ತಾರೆ. ಸದ್ಯ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರ ಜೀವನವನ್ನಾಧರಿಸಿ ಪರಮೇಶ್ವರ್ ಹಿವ್ರಾಲೆ ಎಂಬುವವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಎನ್. ಸುರೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ.
ಸತೀಶ್ ಮುತ್ಯಾಲ ಛಾಯಾಗ್ರಹಣ, ಸುರೇಶ್ ಬೊಬ್ಬಿಲಿ ಸಂಗೀತ ಚಿತ್ರಕ್ಕಿದೆ. ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದೆ. ಕಚ್ಚೆ ಪಂಚೆ, ಉದ್ದ ತೋಳಿನ ಕುರ್ತಾ ಧರಿಸಿ ಕಣ್ಣಿಗೆ ಕನ್ನಡಕ ಹಾಕಿಕೊಂಡು ಆಂಧ್ರಪ್ರದೇಶದ ಅಸೆಂಬ್ಲಿ ಕಟ್ಟಡದ ಮುಂದೆ ಸೈಕಲ್ ಹಿಡಿದು ನರಸಯ್ಯನವರ ಅವತಾರದಲ್ಲಿ ಶಿವಣ್ಣ ದರ್ಶನ ಕೊಟ್ಟಿದ್ದಾರೆ.
1978ರಲ್ಲಿ ತೆಕುಲಪಲ್ಲಿ ಗ್ರಾಮದ ಪಂಚಾಯ್ತಿ ಸದಸ್ಯರಾಗಿ ನರಸಯ್ಯ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಬುಡಕಟ್ಟು ಜನರ ಮೇಲಿನ ಕ್ರೂರ ವರ್ತನೆಯನ್ನು ಮನಗಂಡು ಜನಸೇವೆಗೆ ಅವರು ಮನಸ್ಸು ಮಾಡಿದ್ದರು. ತಮ್ಮ ಸಂಕಲ್ಪದಂತೆ ಸಾಧ್ಯವಾದಷ್ಟು ಸೇವೆ ಮಾಡಿದ್ದರು. ಈಗಾಗಲೇ 'ಪೆದ್ದಿ' ಸಿನಿಮಾ ಮೂಲಕ ಶಿವಣ್ಣ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











