ನಟ ಶಿವಣ್ಣನಿಗೆ ಇಂದು ಸರ್ಜರಿ; ಅಭಿಮಾನಿಗಳು, ಆಪ್ತರಿಂದ ಪೂಜೆ ನೆರವೇರಿಸಿ ಪ್ರಾರ್ಥನೆ
ನಟ ಶಿವರಾಜ್ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಿದೇಶದಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ. ಇಂದು ಚಿಕಿತ್ಸೆಯ ಮಹತ್ವದ ಘಟ್ಟ. ಶಿವಣ್ಣನಿಗೆ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್ನಲ್ಲಿ ಸರ್ಜರಿ ನಡೆಯಲಿದೆ. ಅಭಿಮಾನಿಗಳು ಹಾಗೂ ಆಪ್ತರು ಬೇಗ ಶಿವಣ್ಣ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
'ಭೈರತಿ ರಣಗಲ್' ಸಿನಿಮಾ ಪ್ರಚಾರದ ಸಮಯದಲ್ಲಿ ನಟ ಶಿವರಾಜ್ಕುಮಾರ್ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಈಗಾಗಲೇ ವಿವಿಧ ಹಂತಗಳಲ್ಲಿ ಚಿಕಿತ್ಸೆ ನಡೀತಿದೆ ಎಂದಿದ್ದರು. ಕೊನೆಗೆ ಅಮೆರಿಕಾದಲ್ಲಿ ಸರ್ಜರಿ ನಡೆದರೆ ಸಮಸ್ಯೆ ಬಗೆಹರಿಯುತ್ತದೆ ಎಂದಿದ್ದರು. ಡಿಸೆಂಬರ್ 18ರಂದು ಶಿವಣ್ಣ ಪತ್ನಿ ಗೀತಾ ಹಾಗೂ ಮಗಳು ನಿವೇದಿತಾ ಜೊತೆ ಅಮೆರಿಕಾಗೆ ಹೊರಟರು.

ಬರೋಬ್ಬರಿ 35 ದಿನಗಳ ಕಾಲ ಶಿವರಾಜ್ಕುಮಾರ್ ಅಮೆರಿಕಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ 25ರಂದು ಮತ್ತೆ ತಾಯ್ನಾಡಿಗೆ ಮರಳಿ ಬರುತ್ತಾರೆ. ಅಲ್ಲಿಯವರೆಗೆ ಚಿಕಿತ್ಸೆ ಮುಂದುವರೆಯಲಿದೆ. ಆದರೆ ಇವತ್ತು ಚಿಕಿತ್ಸೆಯ ಬಹುಮುಖ್ಯ ಪ್ರಕ್ರಿಯೆ ನಡೆಯಲಿದೆ. ಅಭಿಮಾನಿಗಳು ನೆಚ್ಚಿನ ನಟ ಬೇಗ ಚೇತರಿಸಿಕೊಳ್ಳಲಿ ಎಂದು ದೇವರ ಮೊರೆ ಹೋಗಿದ್ದಾರೆ.
ಗೋವಿಂದಣ್ಣ ಎಂಬುವವರು ಕಳೆದ 32 ವರ್ಷಗಳಿಂದ ನಟ ಶಿವರಾಜ್ಕುಮಾರ್ ಕಾರ್ ಡ್ರೈವರ್ ಆಗಿದ್ದಾರೆ. ಮಲ್ಲೇಶ್ವರಂನಲ್ಲಿರೋ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ನಿನ್ನೆ ಇಡೀ ದಿನ ಗೋವಿಂದಣ್ಣ ದಂಪತಿ ವಿಶೇಷ ಪೂಜೆಗಳು ಹಾಗೂ ಹೋಮ ನಡೆಸಿದರು. ಇನ್ನು ಶಿವಣ್ಣ ಮನೆಯಲ್ಲಿ ಪೂಜೆ ಮಾಡುವ ಗಂಗಾಧರ ಸ್ವಾಮಿಗಳಿಂದ ಈ ಹೋಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯವಾಗಿ ಗೋವಿಂದಣ್ಣ ದಂಪತಿ ಗಣಪತಿ ಪೂಜೆ ಹಾಗೂ ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ ಹಾಗೂ ಹೋಮ, ಸುದರ್ಶನ ಪೂಜೆ ಮತ್ತು ಹೋಮವನ್ನು ನೆರವೇರಿಸಿದ್ದಾರೆ. ಇಂದು ಕೂಡ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನ ಹೆಸರಿನಲ್ಲಿ ಪೂಜೆ ಮಾಡಿಸಿ ಪ್ರಾರ್ಥಿಸುತ್ತಿದ್ದಾರೆ.

ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಡಾ. ಮುರುಗೇಶ್ ಅವರಿಂದ ಇಂದು ನಟ ಶಿವರಾಜ್ ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಯಾವುದೇ ಆತಂಕ ಇಲ್ಲ, ಬಹಳ ಧೈರ್ಯವಾಗಿಯೇ ಇದ್ದೀನಿ. ಆದರೂ 45 ದಿನಗಳ ಕಾಲ ಮನೆ, ದೇಶ ಬಿಟ್ಟು ಅಮೆರಿಕಾಗೆ ಹೋಗಿ ಇರುವುದು ಬೇಸರ ಮೂಡಿಸಿದೆ. ಅದರಲ್ಲಿ ಚಿಕಿತ್ಸೆ ಎನ್ನುವ ಕಾರಣಕ್ಕೆ ಕೊಂಚ ಆತಂಕ ಇದೆ ಎಂದು ಸ್ವತಃ ಶಿವರಾಜ್ಕುಮಾರ್ ಅಮೆರಿಕಾಗೆ ಹೊರಡುವ ಮುನ್ನ ಹೇಳಿದ್ದರು.
ಡಿಸೆಂಬರ್ 18ರಂದು ಪತ್ನಿ ಹಾಗೂ ಮಗಳ ಜೊತೆ ಶಿವಣ್ಣ ಅಮೆರಿಕಾ ಫ್ಲೈಟ್ ಏರಿದ್ದರು. ವಿಮಾನ ನಿಲ್ದಾಣದಲ್ಲಿ ಕೂಡ ಸೆಂಚುರಿ ಸ್ಟಾರ್ ಅಭಿಮಾನಿಗಳ ಕಡೆ ಕೈ ಬೀಸಿ ಹೋಗಿದ್ದರು. ಇಂದು ಸರ್ಜರಿ ಹಿನ್ನೆಲೆ ಅವರ ಭಾವ ಮಧು ಬಂಗಾರಪ್ಪ ಕೂಡ ಅಮೆರಿಕಾಗೆ ತೆರಳಲಿದ್ದಾರೆ. ಜನವರಿ 25ರಂದು ಶಿವಣ್ಣ ತಾಯ್ನಾಡಿಗೆ ವಾಪಸ್ ಬರಲಿದ್ದಾರೆ.
ಶಿವಣ್ಣ ಅಮೆರಿಕಾಗೆ ತೆರಳುವ ದಿನ ಆಪ್ತರು ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದರು. ನಟರಾದ ಕಿಚ್ಚ ಸುದೀಪ್, ವಿನೋದ್ ರಾಜ್, ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಮಾಜಿ ಸಚಿವರಾದ ಬಿ. ಸಿ ಪಾಟೀಲ್ ಅಂದು ಶ್ರೀಮುತ್ತು ನಿವಾಸಕ್ಕೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು.


Click it and Unblock the Notifications











