'ಯುವ' ಸೆಟ್ಗೆ ಶಿವಣ್ಣ- ಗೀತಕ್ಕ ಭೇಟಿ; ಟ್ಯಾಬ್ನಲ್ಲಿ ದೊಡ್ಡಪ್ಪನಿಗೆ ಯುವ ರಾಜ್ಕುಮಾರ್ ತೋರಿಸಿದ್ದೇನು?
ದೊಡ್ಮನೆಯ ಮತ್ತೊಂದು ಕುಡಿ ಸಿನಿ ಆರಂಗೇಟ್ರಂಗೆ ವೇದಿಕೆ ಸಿದ್ಧವಾಗಿದೆ. ಯುವ ರಾಜ್ಕುಮಾರ್ ಚೊಚ್ಚಲ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಗಿತ್ತು. ಮಾರ್ಚ್ 28ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಸೆಟ್ಗೆ ಶಿವಣ್ಣ ಭೇಟಿ ಕೊಟ್ಟಿದ್ದ ವಿಡಿಯೀ ವೈರಲ್ ಆಗ್ತಿದೆ.
ಸಂತೋಷ್ ಆನಂದ್ರಾಮ್ ನಿರ್ದೇಶನದ 'ಯುವ' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯ ಚಿತ್ರೀಕರಣ ಮುಗಿದಿದ್ದು ಪ್ರಮೋಷನ್ ಶುರುವಾಗಬೇಕಿದೆ. ತೆರೆಮೇಲೆ 'ಯುವ' ಆರ್ಭಟ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ದೊಡ್ಡಮಟ್ಟದಲ್ಲಿ ಪ್ರಮೋಷನ್, ರಿಲೀಸ್ ಸಿದ್ಧತೆಗಳು ನಡೀತಿದೆ.

ಈಗಾಗಲೇ ದೊಡ್ಮನೆಯ 3ನೇ ತಲೆಮಾರಿನ ಕಲಾವಿದರು ಚಿತ್ರರಂಗಕ್ಕೆ ಬಂದಿದ್ದಾರೆ. ರಾಘಣ್ಣನ ಮಗ ವಿನಯ್ ರಾಜ್ಕುಮಾರ್, ಪೂರ್ಣಿಮಾ ಮಕ್ಕಳಾದ ಧನ್ಯಾ, ಧೀರೇನ್ ತೆರೆಮೇಲೆ ಬಂದಾಗಿದೆ. ಇದೀಗ ಯುವ ರಾಜ್ಕುಮಾರ್ ಸರದಿ. ಶಿವಣ್ಣ ನಟಿಸಿದ 'ಓಂ' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬಾಲನಟರಾಗಿ ಯುವ ಸಣ್ಣ ಝಲಕ್ನಲ್ಲಿ ಕಾಣಿಸಿಕೊಂಡಿದ್ದರು. 3 ವರ್ಷಗಳ ಹಿಂದೆ ಹೀರೊ ಆಗಿ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದರು. 'ಯುವ ರಣಧೀರ ಕಂಠೀರವ' ಎನ್ನು ಕಾಸ್ಟ್ಯೂಮ್ ಡ್ರಾಮಾದಲ್ಲಿ ನಟಿಸಬೇಕಿತ್ತು. ಟೀಸರ್ ಶೂಟ್ ಆಗಿ ರಿಲೀಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು.
ಬಳಿಕ ಯುವ ಲಾಂಚಿಂಗ್ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೈಗೆತ್ತಿಕೊಂಡಿತ್ತು. ಇದೀಗ ಚಿತ್ರೀಕರಣ ಮುಗಿದಿದೆ. ಇನ್ನು 'ಯುವ' ಸಿನಿಮಾ ಸೆಟ್ಗೆ ಕೆಲ ದಿನಗಳ ಹಿಂದೆ ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಭೇಟಿ ನೀಡಿದ್ದರು. ಕೆಲವೊತ್ತು ಸೆಟ್ನಲ್ಲಿ ಕಾಲ ಕಳೆದಿದ್ದರು. ಈ ವೇಳೆ ಟ್ಯಾಬ್ನಲ್ಲಿ ಯುವ ರಾಜ್ಕುಮಾರ್ ಚಿತ್ರದ ಒಂದಷ್ಟು ರಶಸ್ ತೋರಿಸಿದ್ದಾರೆ. ಯುವ ಪರ್ಫಾರ್ಮನ್ಸ್ ನೋಡಿ ಶಿವಣ್ಣ ಖುಷಿಯಾಗಿ ಬೆನ್ನುತಟ್ಟಿ ತಬ್ಬಿಕೊಂಡಿದ್ದಾರೆ.

ಹೊಸ ಕಲಾವಿದರನ್ನು, ತಂತ್ರಜ್ಞರನ್ನು ಶಿವಣ್ಣ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಇನ್ನು ತಾವು ಎತ್ತಾಡಿಸಿದ ತಮ್ಮನ ಮಗ ಯುವ ರಾಜ್ಕುಮಾರ್ ಸಿನಿಮಾ ಅಂದ್ರೆ ಹೆಚ್ಚಿನ ಒಲವು ಇದ್ದೇ ಇರುತ್ತದೆ. ಚಿತ್ರದ ಒಂದಷ್ಟು ಝಲಕ್ ನೋಡಿರುವ ಸೆಂಚುರಿ ಸ್ಟಾರ್ ಯುವ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಇಡೀ 'ಯುವ' ತಂಡಕ್ಕೆ ಶುಭ ಹಾರೈಸಿದ್ದಾರೆ. ಶಿವಣ್ಣ ಹಾಗೂ ಯುವ ಸಿನಿಮಾಗಳು 20 ದಿನಗಳ ಅಂತರದಲ್ಲಿ ತೆರೆಗೆ ಬರುತ್ತಿರುವುದು ವಿಶೇಷ.
ಶಿವಣ್ಣ- ಪ್ರಭುದೇವಾ ನಟನೆಯ 'ಕರಟಕ ದಮನಕ' ಸಿನಿಮಾ ಮಾರ್ಚ್ 8ಕ್ಕೆ ತೆರೆಗೆ ಬರಲಿದೆ. ಯೋಗರಾಜ್ ಭಟ್ ನಿರ್ಮಾಣದ ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮಾರ್ಚ್ 28ಕ್ಕೆ 'ಯುವ' ಸಿನಿಮಾ ರಿಲೀಸ್ ಆಗಲಿದೆ.
ರಾಜ್ಯದ 4 ಜಿಲ್ಲೆಗಳಲ್ಲಿ ಅದ್ಧೂರಿ ಈವೆಂಟ್ ನಡೆಸಿ 'ಯುವ' ಸಿನಿಮಾ ಪ್ರಚಾರ ಮಾಡುತ್ತಾರೆ ಎನ್ನಲಾಗುತ್ತಿದೆ. ಚಾಮರಾಜನಗರದಲ್ಲಿ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. ಇನ್ನು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. 'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಚಿತ್ರದ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಇದೊಂದು ಆಕ್ಷನ್ ಎಂಟರ್ಟೈನರ್ ಸಿನಿಮಾ ಅನ್ನೋದು ಗೊತ್ತಾಗುತ್ತಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಯುವ ರಾಜ್ಕುಮಾರ್ ಡ್ಯಾನ್ಸ್ ಹಾಗೂ ಸ್ಟಂಟ್ಸ್ ಬಗ್ಗೆ ಅಭಿಮಾನಿಳಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಿದೆ.


Click it and Unblock the Notifications











