'ಕೆಜಿಎಫ್' ನೋಡಿ 'ಭೈರತಿ ರಣಗಲ್' ಕಾಪಿ ಮಾಡಿಲ್ಲ ಗುರೂ, ಅಸಲಿ ಮ್ಯಾಟ್ರು ಗೊತ್ತಾ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 'ಭೈರತಿ ರಣಗಲ್' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೊಮ್ಮೆ ಶಿವಣ್ಣನ್ನು ರಣಗಲ್ ಆಗಿ ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಟೀಸರ್ನಿಂದಲೇ ಸಿನಿಮಾ ಸಖತ್ ಕುತೂಹಲ ಮೂಡಿಸಿದೆ. 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದಾಗಿದ್ದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
7 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪೊಲೀಸ್ ಆಫೀಸರ್ ಗಣ ಆಗಿ ಶ್ರೀಮುರಳಿ ಅಬ್ಬರಿಸಿದ್ದರು. ಆದರೆ ಸೆಕೆಂಡ್ ಹಾಫ್ನಲ್ಲಿ ಭೈರತಿ ರಣಗಲ್ ಆಗಿ ಬಂದು ಶಿವಣ್ಣ ಗೆದ್ದುಬಿಟ್ಟಿದ್ದರು. ಹೆಚ್ಚು ಡೈಲಾಗ್ ಇಲ್ಲದೇ ಕಣ್ಣಲ್ಲೇ ಅದ್ಭುತವಾಗಿ ನಟಿಸಿ ಮೋಡಿ ಮಾಡಿದ್ದರು. ಆ ಸಮಯದಲ್ಲೇ ರಣಗಲ್ ಯಾರು? ಆತನ ಹಿನ್ನೆಲೆ ಏನು? ನೋಡೋಕೆ ಒಳ್ಳೆಯವನಂತೆ ಕಾಣುವ ಆತ ಡಾನ್ ಆಗಿದ್ದು ಯಾಕೆ? ಇದಕ್ಕೆಲ್ಲಾ ಉತ್ತರ ಎನ್ನುವಂತೆ ಆತನ ಹಿಂದಿನ ಕಥೆ ಹೇಳಬೇಕು ಎಂದು ಚರ್ಚೆ ನಡೆದಿತ್ತು.

ಕೊಂಚ ತಡಡವಾಗಿ 'ಭೈರತಿ ರಣಗಲ್' ಸಿನಿಮಾ ಬರ್ತಿದೆ. ಮತ್ತೊಮ್ಮೆ ನರ್ತನ್- ಶಿವಣ್ಣ ಕಾಂಬೋ ನಿರೀಕ್ಷೆ ಹುಟ್ಟಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಇದೀಗ ಕೊಂಚ ತಡವಾಗಿ ಸೆಪ್ಟೆಂಬರ್ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಟೀಸರ್ನಲ್ಲಿ ಘೋಷಿಸಿದ್ದಾರೆ. ಇನ್ನು ಟೀಸರ್ ಸಖತ್ ಕಿಕ್ ಕೊಡ್ತಿದೆ. "ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬ ಜನ ತಲೆಗಳನ್ನ ಕಳೆದುಕೊಂಡಿದ್ದಾರೆ" ಎನ್ನುವ ಖಡಕ್ ಡೈಲಾಗ್ ವೈರಲ್ ಆಗ್ತಿದೆ.
ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿರೋದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ಧೂಳು, ಕೈಗಾರಿಕಾ ಪ್ರದೇಶಗಳು, ಒತ್ತೆಯಾಳು ಕೆಲಸಗಾರರು, ಭದ್ರತಾ ಸಿಬ್ಬಂದಿ, ಬ್ಲಾಕ್ ಶೇಡ್ಸ್ ಹಾಗೂ ಗಣಿಗಾರಿಕೆ ರೀತಿಯ ದೃಶ್ಯಗಳು ಇಲ್ಲಿ ಹೈಲೆಟ್ ಆಗಿದೆ. ಪ್ರತಿ ಫ್ರೇಮ್ ಹುಬ್ಬೇರಿಸುವಂತಿದೆ. ಇನ್ನು ವಕೀಲನಾಗಿ ಭೈರತಿ ರಣಗಲ್ ಝಲಕ್ ಕೂಡ ನೋಡಬಹುದು. ಆತನ ಬಾಲ್ಯದ ದೃಶ್ಯಗಳು ಚಿತ್ರದಲ್ಲಿ ಅನ್ನೋದು ಗೊತ್ತಾಗುತ್ತದೆ.

ಟೀಸರ್ನಲ್ಲಿರುವ ಫ್ರೇಮ್ಗಳು 'ಕೆಜಿಎಫ್' ಸರಣಿ ಹಾಗೂ 'ಮಫ್ತಿ' ಚಿತ್ರದ ಸನ್ನಿವೇಶಗಳನ್ನು ನೆನಪಿಸುವಂತಿರುವುದು ಸುಳ್ಳಲ್ಲ. ಇದೇ ವಿಚಾರದ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಪರಭಾಷಿಕರಂತೂ ಯಾಕೆ ಕನ್ನಡ ಸಿನಿಮಾಗಳಲ್ಲಿ 'ಕೆಜಿಎಫ್' ಛಾಯೆ ಎದ್ದು ಕಾಣುತ್ತದೆ. ಅದರಿಂದ ಹೊರ ಬಂದು ಸಿನಿಮಾ ಮಾಡಲ್ವಾ? ಎಂದು ಕೇಳುತ್ತಿದ್ದಾರೆ. ಇದಕ್ಕೆ ಕೆಲವರು ಸ್ಪಷ್ಟನೆ ನೀಡಿದ್ದಾರೆ. 'ಕೆಜಿಫ್' ಹಾಗೂ 'ಕಬ್ಜ' ಸಿನಿಮಾಗಳಿಗಿಂತ ಮುನ್ನ 'ಮಫ್ತಿ' ಬಿಡುಗಡೆ ಆಗಿತ್ತು. ಅದನ್ನು ಮರೆಯಬೇಡಿ ಎನ್ನುತ್ತಿದ್ದಾರೆ.
ಇದೇ ರೀತಿ ಪ್ರಶಾಂತ್ ನೀಲ್ ಮಾಡಿದ್ದರೆ ಒಪ್ಪುತ್ತಿದ್ದಿರಿ. ಬೇರೆಯವರು ಮಾಡಿದರೆ ಹೋಲಿಕೆ ಯಾಕೆ ಎನ್ನುತ್ತಿದ್ದಾರೆ. ಅಂದಹಾಗೆ 'ಭೈರತಿ ರಣಗಲ್' ಹೊಸ ಸಿನಿಮಾ ಏನಲ್ಲಾ, 'ಮಫ್ತಿ' ಪ್ರೀಕ್ವೆಲ್. ಈಗಾಗಲೇ ಹಿಂದಿನ ಸಿನಿಮಾದಲ್ಲಿ ಇಂತಹ ಸನ್ನಿವೇಶಗಳನ್ನು ತೋರಿಸಲಾಗಿದೆ. ಅದೇ ಭಾಗದಲ್ಲಿ ಕಥೆ ನಡೆಯುವುದರಿಂದ ಅದೇ ರೀತಿ ತೋರಿಸಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
'ಭೈರತಿ ರಣಗಲ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ರಾಹುಲ್ ಬೋಸ್, ದೇವರಾಜ್, ಛಾಯಾಸಿಂಗ್, ವಸಿಷ್ಠ ಸಿಂಹ ತಾರಾಗಣದಲ್ಲಿದ್ದಾರೆ. ರವಿ ಬಸ್ರೂರು ಮ್ಯೂಸಿಕ್, ನವೀನ್ ಕುಮಾರ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











