Don't Miss!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಂ ಅವರೊಟ್ಟಿಗಿನ ನಂಟು ಬಿಚ್ಚಿಟ್ಟ ಶಿವರಾಜ್ ಕುಮಾರ್
ಹಿರಿಯ ನಟ ಶಿವರಾಂ ಇಂದು ನಿಧನರಾಗಿದ್ದಾರೆ. ಪುನೀತ್ ಅವರನ್ನು ಕಳೆದುಕೊಂಡು ಒಂದು ತಿಂಗಳಾಗಿದೆಯಷ್ಟೆ ಅಷ್ಟರಲ್ಲಿ ಮತ್ತೊಂದು ನೋವು ಚಿತ್ರರಂಗವನ್ನು ಆವರಿಸಿಕೊಂಡಿದೆ.
ಚಿತ್ರರಂಗದವರೊಟ್ಟಿಗೆ ಆತ್ಮೀಯ ಬಂಧವನ್ನು ಶಿವರಾಂ ಹೊಂದಿದ್ದರು. ಅದರಲ್ಲಿಯೂ ದೊಡ್ಮನೆ ಕುಟುಂಬದೊಟ್ಟಿಗಿನ ಅವರ ಬಂಧ ಬಹಳ ಹಳತು.
ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಗೊತ್ತಾದ ಕೂಡಲೇ ಶಿವರಾಜ್ ಕುಮಾರ್ ಅವರು ಆಸ್ಪತ್ರೆಗೆ ಧಾವಿಸಿದ್ದರು. ನಿನ್ನೆಯಷ್ಟೆ ಆಸ್ಪತ್ರೆಗೆ ಭೇಟಿ ನೀಡಿದ್ದ ಶಿವಣ್ಣ, ಶಿವರಾಂ ಅವರನ್ನು ಕಂಡಿದ್ದರು, ಅವರ ಕುಟುಂಬದವರೊಟ್ಟಿಗೆ ಮಾತನಾಡಿದ ಧೈರ್ಯದ ಮಾತುಗಳನ್ನು ಹೇಳಿದ್ದರು. ಆದರೆ ಇಂದು ಶಿವರಾಂ ನಿಧನರಾಗಿಬಿಟ್ಟಿದ್ದಾರೆ.
ಶಿವರಾಂ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಶಿವರಾಜ್ ಕುಮಾರ್ ಮಾಧ್ಯಮಗಳೊಟ್ಟಿಗೆ ಮಾತನಾಡಿ ದುಃಖ ವ್ಯಕ್ತಪಡಿಸಿದರು. ತಮ್ಮ ಕುಟುಂಬಕ್ಕೂ ಶಿವರಾಂ ಅವರಿಗೂ ಇದ್ದ ನಂಟಿನ ಬಗ್ಗೆ ಮಾತನಾಡಿದರು.
ಅಪ್ಪ-ಅಮ್ಮನಿಗೂ ಬಹಳ ಆತ್ಮೀಯರಾಗಿದ್ದರು: ಶಿವಣ್ಣ
''ಬಹಳ ನೋವಾಗುತ್ತದೆ. ಹೀಗೆ ಒಂದರ ಹಿಂದೆ ನೋವನ್ನು ಕೊಡುತ್ತಾ ಹೋದರೆ ಹೇಗೆ ತಡೆದುಕೊಳ್ಳಬೇಕು. ಶಿವರಾಮಣ್ಣ ನಮಗೆ ಬಹಳ ಆತ್ಮೀಯರಾಗಿದ್ದವರು. ಅವರು ನಮ್ಮ ಕುಟುಂಬದವರೇ ಆಗಿದ್ದರು. ಅಪ್ಪ, ಅಮ್ಮನಿಗೂ ಅವರ ಬಹಳ ಆತ್ಮೀಯರಾಗಿದ್ದರು. ನಮ್ಮ ಕುಟುಂಬದಲ್ಲಿ ಏನೇ ಕಾರ್ಯಕ್ರಮ ನಡೆದರೂ ಅವರು ಇರಲೇ ಬೇಕಿತ್ತು. ನಮ್ಮ ಕುಟುಂಬದ ಬಗ್ಗೆಯೂ ಅವರಿಗೆ ಅಷ್ಟೇ ಪ್ರೀತಿ, ಗೌರವ ಇತ್ತು'' ಎಂದರು ಶಿವರಾಜ್ ಕುಮಾರ್.
ಅಪ್ಪಾಜಿಯವರಿಗೂ ಗುರುಸ್ವಾಮಿಗಳಾಗಿದ್ದರು: ಶಿವಣ್ಣ ನೆನಪು
''ಶಿವರಾಮಣ್ಣ ಎಂದರೆ ಮೊದಲು ನೆನಪು ಬರುವುದೇ ಶಬರಿಮಲೆ. ಅಪ್ಪಾಜಿಯವರು ಮಾಲೆ ಹಾಕಲು ಪ್ರಾರಂಭ ಮಾಡಿದಾಗಿನಿಂದಲೂ ಶಿವರಾಂ ಅವರು ಜೊತೆಗೆ ಇರುತ್ತಿದ್ದರು. ನಂತರ ಇವರನ್ನೇ ಗುರುಸ್ವಾಮಿಗಳು ಎಂದು ಮಾಡಿ ಇವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಹೋಗುತ್ತಿದ್ದರು. ಆ ನಂತರ ನಾವು ಮಾಲಾಧಾರಣೆ ಪ್ರಾರಂಭ ಮಾಡಿದಾಗಲೂ ಸಹ ಶಿವರಾಮಣ್ಣನ ನೇತೃತ್ವದಲ್ಲಿಯೇ ಶಬರಿಮಲೆಗೆ ಹೋಗುತ್ತಿದ್ದೆವು'' ಎಂದರು ಶಿವಣ್ಣ.
''ಮೂರು ವರ್ಷದ ಹಿಂದೆ ಸರಾಗವಾಗಿ ಶಬರಿಮಲೆ ಬೆಟ್ಟ ಹತ್ತಿದ್ದರು''
''ಶಿವರಾಮಣ್ಣನ ಬಳಿ ಒಂದು ಶಕ್ತಿಯಿತ್ತು. ಕೆಲವು ವರ್ಷಗಳ ಹಿಂದೆಯಷ್ಟೆ ನಾವೆಲ್ಲ ಒಟ್ಟಿಗೆ ಶಬರಿಮಲೆಗೆ ಹೋಗಿದ್ದಾಗಲೂ ಅವರು ಅನಾಯಾಸವಾಗಿ ಬೆಟ್ಟ ಹತ್ತಿದ್ದರು. ಅವರು ಬಹಳ ಶಿಸ್ತಿನ ವ್ಯಕ್ತಿ. ಎಲ್ಲವನ್ನೂ ಪೂರ್ವತಯಾರಿ ಮಾಡಿಕೊಂಡು ಶಿಸ್ತಿನಿಂದ ಇರುತ್ತಿದ್ದರು. ಬಹಳ ಪರಿಶುದ್ಧರು. ಅವರಂಥಹಾ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡೇ ಇಲ್ಲ'' ಎಂದು ಭಾವುಕರಾದರು ಶಿವಣ್ಣ.
ಶಿವರಾಮಣ್ಣ ಎಂದೆಂದೂ ನಮ್ಮ ಹೃದಯದಲ್ಲಿರುತ್ತಾರೆ: ಶಿವಣ್ಣ
''ಇತ್ತೀಚಿನ ದಿನಗಳಲ್ಲಿ ಹತ್ತಿರದವರೇ ದೂರ ಹೋಗುತ್ತಿದ್ದಾರೆ. ಇದು ಬಹಳ ನೋವು ಕೊಟ್ಟಿದೆ. ನೋವಿನ ಮೇಲೆ ನೋವು ಕೊಡುತ್ತಲೇ ಹೋದರೆ ಮನುಷ್ಯ ತಡೆದುಕೊಳ್ಳುವುದಾದರೂ ಹೇಗೆ? ಶಿವರಾಮಣ್ಣನ ಇಡೀ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಅವರ ಕುಟುಂಬಕ್ಕೆ ಬೆಂಬಲವಾಗಿ ನಾವೆಲ್ಲ ಇದ್ದೀವಿ ಆದರೂ ಅವರು ಇದ್ದಂತೆ ಆಗುವುದಿಲ್ಲ. ಶಿವರಾಮಣ್ಣನ ಆತ್ಮಕ್ಕೆ ಶಾಂತಿ ಸಿಗಲಿ, ಅವರನ್ನು ಯಾವಾಗಲೂ ನಾವು ಮಿಸ್ ಮಾಡಿಕೊಳ್ಳುತ್ತಾ ಇರುತ್ತೇವೆ. ಶಿವರಾಮಣ್ಣ ನೀವಿಲ್ಲವೆಂದರೂ ನಿಮ್ಮ ನೆನಪನ್ನು ನಾವು ಯಾವಾಗಲೂ ನಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತೀವಿ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ'' ಎಂದರು ಶಿವರಾಜ್ ಕುಮಾರ್.