ಶಿವರಾಂ ನಿಧನ: ಅಗಲಿದ ನಟನಿಗೆ ನುಡಿ ಸಂತಾಪ ಸಲ್ಲಿಸಿದ ಗಣ್ಯರು
ಕನ್ನಡ ಚಿತ್ರರಂಗದ ಹಿರಿಯ ನಟ, ಸಕಲರಿಗೂ ಆಪ್ತ ಶಿವರಾಂ ಇಂದು ನಿಧನ ಹೊಂದಿದ್ದಾರೆ. ಶಿವರಾಮಣ್ಣ ಎಂದೇ ಜನಪ್ರಿಯರಾಗಿದ್ದ ಶಿವರಾಂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ನಿರ್ದೇಶನ ಸಹ ಮಾಡಿದ್ದಾರೆ.
ಶಿವರಾಂ ನಿಧನದಿಂದ ಚಿತ್ರರಂಗಕ್ಕೆ ಮತ್ತೊಂದು ಆಘಾತಕ್ಕೆ ಈಡಾಗಿದೆ. ಶಿವರಾಂ ನಿಧನದ ಬಗ್ಗೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಶಿವರಾಂ ಅವರೊಟ್ಟಿಗಿನ ತಮ್ಮ ನಂಟಿನ ಬಗ್ಗೆ ಮಾತನಾಡಿದ್ದಾರೆ.
ಶಿವರಾಂ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ''ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಶಿವರಾಂ ಅವರ ನಿಧನ ತುಂಬಾ ದುಃಖದ ವಿಷಯ. ಶಿವರಾಂ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಶಿವರಾಂಗೆ ಸಿದ್ದರಾಮಯ್ಯ ಸಂತಾಪ
ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದು, ''ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದಶಕಗಳ ಕಾಲ ತಮ್ಮ ಅಮೋಘ ನಟನೆಯ ಮೂಲಕ ಕಲಾಸೇವೆಗೈದ ಶಿವರಾಂ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ.

ಶಿವರಾಂ ಸಾಮಾನ್ಯವಾದ ವ್ಯಕ್ತಿಯಲ್ಲ: ದ್ವಾರಕೀಶ್
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್, ''ಶಿವರಾಂ ಒಬ್ಬ ಅಜಾತಶತ್ರು. ಆತ ಎಲ್ಲ ಕೆಲಸ ಮಾಡಿದ್ದಾನೆ. ಮೇಕಪ್ಮ್ಯಾನ್, ಕ್ಯಾಮೆರಾ ಮ್ಯಾನ್, ಅಸಿಸ್ಟೆಂಟ್ ಡೈರೆಕ್ಟರ್, ಡೈರೆಕ್ಟರ್, ನಿರ್ಮಾಪಕ ಜೊತೆಗೆ ನೂರಾರು ಸಿನಿಮಾಗಳಲ್ಲಿ ನಟನೆ. ಆತ ಒಬ್ಬ ಸಂಪೂರ್ಣ ವ್ಯಕ್ತಿ. ಆತ ಯಾರಿಗೂ ಎಂದೂ ಕೇಡು ಬಯಸಿದವನಲ್ಲ. ಆತನಿಲ್ಲದೆ ಚಿತ್ರರಂಗದಲ್ಲಿ ಅಯ್ಯಪ್ಪನ ಪೂಜೆ ನಡೆದಿದ್ದೇ ಇಲ್ಲ. ಮಹಾನ್ ದೈವಭಕ್ತ, ಅಯ್ಯಪ್ಪನ ಭಕ್ತ. ರಾಜಣ್ಣ (ರಾಜ್ಕುಮಾರ್), ಪುಟ್ಟಣ್ಣ (ಪುಟ್ಟಣ್ಣ ಕಣಗಾಲ್) ಗೆ ಬಹಳ ಆತ್ಮೀಯವಾಗಿದ್ದ ವ್ಯಕ್ತಿ. ಅಂಥಹಾ ಒಬ್ಬ ಪರಿಶುದ್ಧ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ'' ಎಂದರು.

ಅವರಲ್ಲಿ ದೇವರನ್ನು ಕಾಣುತ್ತಿದ್ದೆ: ನವೀನ್ ಕೃಷ್ಣ
ನಟ, ನಿರ್ದೇಶಕ ನವೀನ್ ಕೃಷ್ಣ ಮಾತನಾಡಿ, ''ನಾನು ಅವರಲ್ಲಿ ದೇವರನ್ನು ಕಾಣುತ್ತಿದ್ದೆ. ಅವರ ಮುಖದಲ್ಲಿ ಒಂದು ರೀತಿಯ ತೇಜಸ್ಸು ಇತ್ತು. ನಾನು ಚಿಕ್ಕವನಿದ್ದಾಗಿನಿಂದಲೂ ಅವರನ್ನು ನೋಡುತ್ತ ಬಂದಿದ್ದೇನೆ. ಹಲವು ಬಾರಿ ಅವರು ನಮ್ಮ ಮನೆಗೆ ಬಂದಿದ್ದರು. ನಾನು ನಿರ್ದೇಶನ ಮಾಡುತ್ತಿದ್ದ ಧಾರಾವಾಹಿಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅವರ ಭಾಗದ ಚಿತ್ರೀಕರಣ ಇನ್ನಷ್ಟೆ ಆಗಬೇಕಿತ್ತು ಅಷ್ಟರಲ್ಲಿ ಅವರು ಕಾಲವಾಗಿದ್ದಾರೆ. ಪುನೀತ್ ಅಂತಿಮ ನಮನ ಕಾರ್ಯಕ್ರಮದಲ್ಲಿ ಅವರನ್ನು ಕೊನೆಯದಾಗಿ ಭೇಟಿಯಾಗಿದ್ದೆ. ಅಂದಿನ ಕಾರ್ಯಕ್ರಮಕ್ಕೆ ನಾನೇ ಅವರನ್ನು ಕರೆದುಕೊಂಡು ಹೋಗಿದ್ದೆ, ವಾಪಸ್ ಕರೆದುಕೊಂಡು ಬಂದಿದ್ದೆ'' ಎಂದಿದ್ದಾರೆ ನವೀನ್ ಕೃಷ್ಣ.

ಬಿಎಸ್ ಯಡಿಯೂರಪ್ಪ ಟ್ವೀಟ್
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ''ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಂ ಅವರು ನಿಧನರಾದ ಸುದ್ದಿ ಅತೀವ ನೋವನ್ನುಂಟು ಮಾಡಿದೆ. ಕನ್ನಡದ ದಿಗ್ಗಜ ಕಲಾವಿದರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ಅವರು, ನಿರ್ದೇಶಕ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ಕಿರುತೆರೆಯ ಹಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. ಅವರ ನಿಧನದಿಂದ ನಾಡು ಹಿರಿಯ ಕಲಾವಿದರನ್ನು ಕಳೆದುಕೊಂಡಂತಾಗಿದೆ. ಅನೇಕ ಸಂದರ್ಭಗಳಲ್ಲಿ ಅವರನ್ನು ಭೇಟಿ ಮಾಡಿದ್ದು, ಅವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಅತೀವ ನೋವನ್ನು ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ'' ಎಂದಿದ್ದಾರೆ.


Click it and Unblock the Notifications











