ಪಕ್ಕಾ ಹಳ್ಳಿ ಲುಕ್ ನ 'ರಾಕ್ಷಸ' ಆಗಲಿದ್ದಾರೆ ಶಿವಣ್ಣ
ಶಿವರಾಜ್ ಕುಮಾರ್ ಅವರು ರೀಮೇಕ್ ಸಿನಿಮಾಗಳಲ್ಲಿ ನಟಿಸುವುದು ಬಿಟ್ಟು 19 ವರ್ಷಗಳಾಗಿದ್ದವು. ಆದರೆ ಕೆಲವು ಒಳ್ಳೆಯ, ಭಿನ್ನ ಮಾದರಿಯ ರೀತಿಯ ಸಿನಿಮಾಗಳು ಬಂದಾಗ ಕಲಾವಿದನಾಗಿ ಅಭಿನಯಿಸದೇ ಇರಲು ಮನಸೊಪ್ಪದೆ ಶಿವಣ್ಣ ಇತ್ತೀಚೆಗೆ ಒಂದು ರೀಮೇಕ್ ಸಿನಿಮಾ ಮಾಡಿದ್ದರು, ಅದೇ ಕವಚ.
ಈಗ ಶಿವಣ್ಣ ಮತ್ತೆ ರೀಮೇಕ್ ಸಿನಿಮಾದಲ್ಲಿ ನಟಿಸುವ ನಿರ್ಧಾರ ಮಾಡಿದ್ದಾರೆ. ಇದು ಸಹ ಪೂರ್ಣವಾಗಿ ಭಿನ್ನ ಮಾದರಿಯ ಸಿನಿಮಾ. ಪಕ್ಕಾ ಹಳ್ಳಿಯ ಕೌಟುಂಬಿಕ, ನಡುವಯಸ್ಸು ದಾಟಿದ ಒರಟು ತಂದೆಯ ಪಾತ್ರವನ್ನು ಶಿವಣ್ಣ ಪೋಷಿಸಲಿದ್ದಾರೆ.
ತಮಿಳಿನಲ್ಲಿ ಧನುಷ್ ಅಭಿನಯಿಸಿ ಭಾರಿ ಹಿಟ್ ಆಗಿದ್ದ 'ಅಸುರನ್' ಸಿನಿಮಾದ ಕನ್ನಡ ರೀಮೇಕ್ ನಲ್ಲಿ ಶಿವರಾಜ್ ಕುಮಾರ್ ಅಭಿನಯಿಸಲಿದ್ದಾರೆ. ಇಲ್ಲಿ ಧನುಷ್ ಅಭಿನಯಿಸಿದ್ದ 'ಅಸುರನ್' ಪಾತ್ರ ಶಿವಣ್ಣನದ್ದು. ಪಕ್ಕಾ ಹಳ್ಳಿ, ಆದರೆ ಅಷ್ಟೇ ರೌದ್ರಾವತಾರದ ಪಾತ್ರವಿದು.

ಜೇಕಬ್ ವರ್ಗೀಸ್ ನಿರ್ದೇಶನ ಮಾಡುವ ಸಾಧ್ಯತೆ
ತಮಿಳು ನಿರ್ಮಾಪಕರೊಬ್ಬರು ಶಿವಣ್ಣನ ಬಳಿ ಈ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಸೂಕ್ಷ್ಮ ನಿರ್ದೇಶಕ ಜೇಕಬ್ ವರ್ಗೀಸ್ ಶಿವಣ್ಣನಿಗಾಗಿ 'ಅಸುರನ್' ಅನ್ನು ಕನ್ನಡದಲ್ಲಿ ನಿರ್ದೇಶಿಸಲಿದ್ದಾರೆ. ಶಿವಣ್ಣ ಬಳಿ ಒಂದು ಹಂತದ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಲಿದೆ.

ತೆಲುಗಿನಲ್ಲಿ ವೆಂಕಟೇಶ್ ಅಭಿನಯಿಸುತ್ತಿದ್ದಾರೆ
ವೆಟ್ರಿಮಾರನ್ ನಿರ್ದೇಶಿಸಿದ್ದ 'ಅಸುರನ್' ಸಿನಿಮಾ ತಮಿಳಿನಲ್ಲಿ ಭಾರಿ ಹಿಟ್ ಆಗಿತ್ತು. ಜಾತಿ ವೈಷಮ್ಯದ ಕತಾ ವಸ್ತು ಒಳಗೊಂಡಿದ್ದ ಈ ಸಿನಿಮಾ, ವಕ್ಕೈ ಎಂಬ ಕಾದಂಬರಿ ಆಧರಿತವಾಗಿತ್ತು. ಇದೇ ಸಿನಿಮಾವನ್ನು ತೆಲುಗಿನಲ್ಲಿ ವೆಂಕಟೇಶ್ 'ನಾರಪ್ಪ' ಹೆಸರಿನಲ್ಲಿ ರೀಮೇಕ್ ಮಾಡುತ್ತಿದ್ದಾರೆ.

ಸಿನಿಮಾಕ್ಕೆ ಏನೆಂದು ಹೆಸರಿಡುತ್ತಾರೆ?
ತಮಿಳಿನ 'ಅಸುರನ್' ಕನ್ನಡಕ್ಕೆ ತರ್ಜುಮೆಗೊಳಿಸಿದರೆ ಅಸುರ ಅಥವಾ ರಾಕ್ಷಸ ಎಂಬರ್ಥ ಒದಗುತ್ತದೆ. ಶಿವರಾಜ್ ಕುಮಾರ್ 'ಅಸುರ' ಹಾಗೂ 'ರಾಕ್ಷಸ' ಎರಡೂ ಹೆಸರಿನ ಸಿನಿಮಾವನ್ನು ಈಗಾಗಲೇ ಮಾಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ ಯಾವ ಹೆಸರಿಡುತ್ತಾರೆ ಎಂಬ ಕುತೂಹಲವೂ ಇದೆ.

'ಖೈದಿ' ರೀಮೇಕ್ನಲ್ಲೂ ನಟಿಸುತ್ತಾರಾ ಶಿವಣ್ಣ?
ಮತ್ತೊಂದು ಮೂಲದ ಪ್ರಕಾರ ಶಿವಣ್ಣ ಅವರು ತಮಿಳಿನ ಮತ್ತೊಂದು ಹಿಟ್ ಚಿತ್ರ 'ಖೈದಿ' ಯ ಕನ್ನಡ ಅವತರಿಣಿಕೆಯಲ್ಲೂ ನಟಿಸಲು ಒಪ್ಪಿದ್ದಾರೆ. ಆಕ್ಷನ್, ನಿಗೂಢತೆ, ಸೆಂಟಿಮೆಂಟ್ ಎಲ್ಲವೂ ಹೊಂದಿರುವ ಈ ಸಿನಿಮಾ ಶಿವಣ್ಣ ಅವರ ವ್ಯಕ್ತಿತ್ವಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











