ಸೈಕಲ್ಲಿಂದ ಬಿದ್ದು ಗಾಯಗೊಂಡ ಶಿವರಾಜ್ ಕುಮಾರ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (51) ಅವರು ಆರ್ಯನ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಸಿಂಗಪುರದಲ್ಲಿ ಭರದಿಂದ ನಡೆಯುತ್ತಿದೆ. ಸೈಕಲ್ ತುಳಿಯುವ ಸನ್ನಿವೇಶದಲ್ಲಿ ಅವರು ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆ.
ಸೈಕಲ್ ನಲ್ಲಿ ಚೇಸಿಂಗ್ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು. ಡ್ಯೂಪ್ ಕಲಾವಿದನ್ನು ಬಳಸದೆ ಸ್ವತಃ ಶಿವಣ್ಣ ಅವರೇ ಸೈಕಲ್ ತುಳಿಯುತ್ತಿದ್ದರು. ಆಯತಪ್ಪಿ ಕೆಳಗೆ ಬಿದ್ದ ಕಾರಣ ಅವರ ತಲೆಗೆ ಪೆಟ್ಟಾಗಿದೆ. ಆದರೆ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಚಿತ್ರದ ನಿರ್ಮಾಪಕ ಕಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಿವಣ್ಣ ಬಿದ್ದು ಗಾಯಗೊಂಡ ಕಾರಣ ಮಂಗಳವಾರ (ಜ.14) ಶೂಟಿಂಗ್ ಕ್ಯಾನ್ಸಲ್ ಮಾಡಲಾಯಿತು. ಶಿವಣ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತಹ ಗಂಭೀರವಾಗಿಯೇನೂ ಗಾಯಗಳಾಗಿಲ್ಲ. ಅವರು ಆರಾಮವಾಗಿಯೇ ಇದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಶಿವಣ್ಣ ಜೊತೆ ಪತ್ನಿ ಗೀತಾ ಸಹ ಸಿಂಗಪುರದಲ್ಲಿ
ಈ ಚಿತ್ರಕ್ಕೆ ಗಣೇಶ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಪ್ರಸ್ತುತ ಸಿಂಗಪುರದಲ್ಲೇ ಇದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಸಹ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತೇ ಇದೆ.

ಸಿಂಗಪುರದಲ್ಲಿ ತಾಪಮಾನ ಬಲು ಬಿಸಿ
ರಾಘಣ್ಣ ಆರೋಗ್ಯವೂ ಸುಧಾರಿಸಿದ್ದು ಪ್ರತಿನಿತ್ಯ 'ಆರ್ಯನ್' ಶೂಟಿಂಗ್ ಸ್ಪಾಟ್ ಗೆ ಬರುತ್ತಿದ್ದರಂತೆ. ಆದರೆ ಶಿವಣ್ಣ ಸೈಕಲ್ ನಿಂದ ಬಿದ್ದ ದಿನ ಮಾತ್ರ ರಾಘಣ್ಣ ಬಂದಿರಲಿಲ್ಲ ಎನ್ನುತ್ತವೆ ಮೂಲಗಳು. ಸಿಂಗಪುರದಲ್ಲಿ ತಾಪಮಾನ ಬಿಸಿಯಾಗಿದೆ. ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ.

ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ
ಇದೇ ಮೊದಲ ಬಾರಿಗೆ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕಾಗಿ ಅನುಮತಿ ನೀಡಲಾಗಿದೆ. ಜನವರಿ 18ಕ್ಕೆ ಕರ್ನಾಟಕಕ್ಕೆ ವಾಪಸಾಗುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಗುರುದತ್ ಅವರು ತಿಳಿಸಿದ್ದಾರೆ.

ಶಿವಣ್ಣ ಅಭಿನಯದ 106ನೇ ಚಿತ್ರ ಆರ್ಯನ್
ಶಿವಣ್ಣ ಅಭಿನಯದ 105ನೇ ಚಿತ್ರ 'ಭಜರಂಗಿ' ಬಳಿಕ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಚಿತ್ರ ಆರ್ಯನ್. ಇದೇ ಜನವರಿ 2ರಿಂದ ಸಿಂಗಪುರದಲ್ಲಿ ಇಪ್ಪತ್ತೆರಡು ದಿನಗಳ ಕಾಲ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿ ಮೂರು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.

ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ
ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.


Click it and Unblock the Notifications











