ಕಡ್ಡಿಪುಡಿಗೆ ರೆಡಿಯಾದ ಹ್ಯಾಟ್ರಿಕ್ ಹೀರೋ ಶಿವಣ್ಣ
'ಕಡ್ಡಿಪುಡಿ' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರವನ್ನು ದುನಿಯಾ ಸೂರಿ ಕೈಗೆತ್ತಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ರೀತಿಯ ಶೀರ್ಷಿಕೆಯ ಮೂಲಕವೇ ಒಂದಷ್ಟು ಕುತೂಹಲವನ್ನೂ ಹುಟ್ಟಿಸಿದ್ದಾರೆ ಸೂರಿ. ಈ ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಚಿತ್ರದ ನಾಯಕಿ ಪ್ರತಿಭಾನ್ವಿತ ತಾರೆ ರಾಧಿಕಾ ಪಂಡಿತ್. ಜುಲೈ 26ರಂದು ಈ ಚಿತ್ರ ಸೆಟ್ಟೇರುತ್ತಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಆಕ್ಷನ್ ಕಟ್ ಹೇಳುವುದರ ಜೊತೆಗೆ ದುನಿಯಾ ಸೂರಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ರಾಧಿಕಾಪಂಡಿತ್, ರಂಗಾಯಣರಘು, ಶರತ್ಲೋಹಿತಾಶ್ವ, ಸ್ವಯಂವರ ಚಂದ್ರು, ರೇಣುಕಾಪ್ರಸಾದ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಬೆಂಗಳೂರು, ಮೈಸೂರು ಮುಂತಾದಕಡೆ ಚಿತ್ರದ ಚಿತ್ರೀಕರಣ ನಡೆಯಲಿದೆ. 'ಕಡ್ಡಿಪುಡಿ'ಗೆ ದೀಪು.ಎಸ್.ಕುಮಾರ್ ಅವರ ಸಂಕಲನವಿದೆ. ರವಿವರ್ಮ ಸಾಹಸ ನಿರ್ದೇಶನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನವಿದೆ.
ಏತನ್ಮಧ್ಯೆ ದುನಿಯಾ ಸೂರಿ ನಿರ್ದೇಶನದ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿರುವ 'ಅಣ್ಣಾಬಾಂಡ್' ಚಿತ್ರ ಅರ್ಧ ಶತಕ ಪೂರೈಸಿದೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆಗಳು ಕೇಳಿಬಂದಿದ್ದವು.
'ಅಣ್ಣಾಬಾಂಡ್' ಅದ್ಭುತ ಸಿನಿಮಾ ಅಲ್ಲದಿರಬಹುದು. ಆದರೆ ಪುನೀತ್ ಅಭಿಮಾನಿಗಳಿಗೆ ಮತ್ತು ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಅಣ್ಣಾ ಬಾಂಡ್ ನಲ್ಲಿ ಚಾಚೂತಪ್ಪದೆ ಕೊಟ್ಟಿದ್ದೀನಿ ಅನ್ನೋದು ಸೂರಿ ನಂಬಿಕೆ. ಅದು ಸಾಬೀತಾಗಿದೆ ಕೂಡ.
ಆದರೆ ಈ ಬಾರಿ 'ಕಡ್ಡಿಪುಡಿ' ಚಿತ್ರದ ಬಗ್ಗೆ ಸೂರಿ ಆದಷ್ಟು ಜಾಗ್ರತೆ ವಹಿಸುತ್ತಿದ್ದಾರೆ. ಶಿವಣ್ಣ ಹಾಗೂ ರಾಧಿಕಾ ಪಂಡಿತ್ ಅವರ ಆಯ್ಕೆಯನ್ನು ಗಮನಿಸುವುದಾದರೆ ಸೂರಿ ಕತೆಗೂ ಒತ್ತು ನೀಡಿದ್ದಾರೆ ಅನ್ನಿಸುತ್ತದೆ. (ಏಜೆನ್ಸೀಸ್)


Click it and Unblock the Notifications











