ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಈಗ 'ಬಾದ್ ಷ'
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಈಗ ಸ್ಯಾಂಡಲ್ ವುಡ್ 'ಬಾದ್ ಷ'. ಅವರ 'ಭಜರಂಗಿ' ಚಿತ್ರದ ಯಶಸ್ಸು ಅವರನ್ನು ಹೊಸ ಮಟ್ಟಕ್ಕೆ ಏರಿಸಿದೆ. ಮೂಲಗಳ ಪ್ರಕಾರ ಭಜರಂಗಿ ಚಿತ್ರ ಇದುವರೆಗೂ ರು.12 ಕೋಟಿ ಕಲೆಕ್ಷನ್ ಮಾಡಿದೆ. ರು.9 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ಲಾಭ ತಂದುಕೊಟ್ಟಿದೆ.
ಈಗ ಅವರನ್ನು 'ಬಾದ್ ಷ' ಆಗಿ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಆರ್ ಚಂದ್ರು. ಈಗವರು ರಿಯಲ್ ಸ್ಟಾರ್ ಉಪೇಂದ್ರ ಅವರ ಬ್ರಹ್ಮ ಚಿತ್ರದ ನಿರ್ಮಾಣ ನಂತರದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಅದು ಮುಗಿದ ಕೂಡಲೆ ಏಪ್ರಿಲ್ 24, 2014ರಲ್ಲಿ ಬಾದ್ ಷ ಚಿತ್ರ ಸೆಟ್ಟೇರಲಿದೆ. ಅಂದು ವರನಟ ಡಾ.ರಾಜ್ ಕುಮಾರ್ ಅವರ ಜನುಮದಿನ ಎಂಬುದು ಸಪ್ತಕೋಟಿ ಕನ್ನಡಿಗರಿಗೆ ಗೊತ್ತೇ ಇದೆ.
ಈ ಹಿಂದೊಮ್ಮೆ ತೆಲುಗಿನಲ್ಲಿ 'ಬಾದ್ ಷಾ' ಹೆಸರಿನಲ್ಲಿ ಒಂದು ಚಿತ್ರ ತೆರೆಕಂಡು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿತ್ತು. ಆ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮುಖ್ಯಭೂಮಿಕೆಯಲ್ಲಿದ್ದರು. ಈಗ ಅದೇ ಹೆಸರಿನಲ್ಲಿ ಚಿತ್ರವನ್ನು ಕನ್ನಡದಲ್ಲಿ ತರಲಾಗುತ್ತಿದೆ. ಆದರೆ ಇದು ರೀಮೇಕೋ ಅಥವಾ ಸ್ವಮೇಕ್ ಚಿತ್ರ ಎಂಬುದನ್ನು ಚಿತ್ರತಂಡ ಇನ್ನೂ ಖಚಿತಪಡಿಸಿಲ್ಲ.

ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಚಿತ್ರ
ಇನ್ನು ಬಾದ್ ಷ ಚಿತ್ರವನ್ನು ಆರ್ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕನಕಪುರ ಶ್ರೀನಿವಾಸ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಯಿತು.

ಪೋಸ್ಟರ್ ಬಿಡುಗಡೆ ಮಾಡಿದ ಉಪೇಂದ್ರ
'ಬಾದ್ ಷ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದವರು ಬೇರಾರು ಅಲ್ಲ ರಿಯಲ್ ಸ್ಟಾರ್ ಉಪೇಂದ್ರ. ಇತ್ತೀಚೆಗೆ ಉಪ್ಪಿಗೂ ಕನಕಪುರ ಶ್ರೀನಿವಾಸ್ ಅವರಿಗೂ 'ಟೋಪಿವಾಲ' ತೆಲುಗು ಡಬ್ಬಿಂಗ್ ರೈಟ್ಸ್ ಕುರಿತು ವಿವಾದ ತಲೆದೋರಿತ್ತು. ಆದರೆ 'ಬಾದ್ ಷ' ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ ಒಂದಾಗಿದ್ದರು.

ಸಿಂಗಪುರದಿಂದ ಶಿವಣ್ಣ ಶುಭಾಶಯ
ಸದ್ಯಕ್ಕೆ ಶಿವಣ್ಣ ಅವರು ಸಿಂಗಪುರದಲ್ಲಿದ್ದಾರೆ. ಅಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಮೌಂಟ್ ಎಲಿಜೆಬತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಅಲ್ಲೇ ಉಳಿದುಕೊಂಡಿದ್ದಾರೆ. ಜೊತೆಗೆ ಸಿಂಗಪುರದಲ್ಲಿ 'ಆರ್ಯನ್' ಚಿತ್ರೀಕರಣವೂ ಭರದಿಂದ ಸಾಗಿದೆ. ಈ ಚಿತ್ರದ ನಾಯಕಿ ರಮ್ಯಾ.

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸೆಟ್ಟೇರಲಿರುವ ಚಿತ್ರ
ಸಿಂಗಪುರದಿಂದಲೇ 'ಬಾದ್ ಷ' ಚಿತ್ರತಂಡಕ್ಕೆ ಶಿವಣ್ಣ ಶುಭ ಹಾರೈಸಿದ್ದಾರೆ. ಸಂಗೀತ ನಿರ್ದೇಶಕ ಸಾಧುಕೋಕಿಲ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಶುಭ ಕಾಮನೆಗಳನ್ನು ಚಿತ್ರತಂಡಕ್ಕೆ ತಿಳಿಸಿದರು.

ಭಜರಂಗಿ ಚಿತ್ರದ ಗೆಲುವನ್ನು ಆಸ್ವಾದಿಸುತ್ತಿರುವ ಶಿವಣ್ಣ
ಈಗಷ್ಟೇ ಭಜರಂಗಿ ಚಿತ್ರದ ಗೆಲುವನ್ನು ಶಿವಣ್ಣ ಆಸ್ವಾದಿಸುತ್ತಿದ್ದಾರೆ. ಆದರೆ ಬಾದ್ ಷ ಚಿತ್ರ ಇನ್ನೂ ಭಿನ್ನವಾಗಿರುತ್ತದೆ ಎಂಬ ಮಾತುಗಳು ಚಿತ್ರತಂಡದಿಂದ ಹೊರಬಿದ್ದಿವೆ. 'ಭಜರಂಗಿ' ಚಿತ್ರ ಈಗಾಗಲೆ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿರುವುದು ಗೊತ್ತೆ ಇದೆ.

ಶಿವಣ್ಣ ಮತ್ತು ಚಂದ್ರು ಒಂದಾಗುತ್ತಿರುವ ಚಿತ್ರ
ಶಿವರಾಜ್ ಕುಮಾರ್ ಅವರು ಈ ಹಿಂದೆ ಆರ್ ಎಸ್ ಪ್ರೊಡಕ್ಷನ್ ಲಾಂಛನದ ಯುವರಾಜ, ವಾಲ್ಮೀಕಿ, ಮೈಲಾರಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೈಲಾರಿ ಚಿತ್ರಕ್ಕೆ ಆರ್ ಚಂದ್ರು ಆಕ್ಷನ್ ಕಟ್ ಹೇಳಿದ್ದರು. ಈಗ ಮತ್ತೊಮ್ಮೆ ಶಿವಣ್ಣ ಹಾಗೂ ಚಂದ್ರು ಒಂದಾಗುತ್ತಿದ್ದಾರೆ.


Click it and Unblock the Notifications











