ಡಿಸೆಂಬರ್ ತಿಂಗಳಲ್ಲೇ ಶಿವಣ್ಣ 'ಭಜರಂಗಿ' ತೆರೆಗೆ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಭಜರಂಗಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ಸದ್ಯದಲ್ಲೆ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದೆ.
ಎಲ್ಲಾ ಅಂದುಕೊಂಡ ಹಾಗೆ ಆದರೆ ಇದೇ ತಿಂಗಳಲ್ಲಿ ಬರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜನ್ಮದಿನದಂದು ಭಜರಂಗಿ' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. [ಭಜರಂಗಿ ವಿಶೇಷಗಳು]
' ಚಿತ್ರಕ್ಕೆ ಎ.ಹರ್ಷ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಜೈಆನಂದ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಈ ಬಾರಿ ಶುಕ್ರವಾರಕ್ಕೆ ಬದಲಾಗಿ ಗುರುವಾರ (ಡಿ.12) ಚಿತ್ರವನ್ನು ತೆರೆಗೆ ತರುತ್ತಿರುವುದು ಇನ್ನೊಂದು ವಿಶೇಷ. ಗುರುರಾಯರ ಕೃಪೆ, ಶಿವಣ್ಣನ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಲ್ಲ ಎಂಬ ಲೆಕ್ಕಾಚಾರದಲ್ಲಿ ಚಿತ್ರತಂಡವಿದೆ. ನೃತ್ಯ ನಿರ್ದೇಶಕ ಎ ಹರ್ಷ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರವಿದು. ಚಿತ್ರದ ನಾಯಕಿ ಐಂದ್ರಿತಾ ರೇ. ಈಗಾಗಲೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಚಿತ್ರತಂಡವ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.
ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ದೀಪು.ಎಸ್.ಕುಮಾರ್ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶೃತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











