ಶಿವಣ್ಣನ ಜೊತೆ ಮದುವೆ ; ಕೆರಳಿ ಕೆಂಡವಾದ ಸುಧಾರಾಣಿ - ಆಯ್ಕೊಂಡು ತಿನ್ನೋರೆಲ್ಲ, ಖಡಕ್ ಉತ್ತರ ನೀಡಿದ ಹಿರಿಯ ನಟಿ
ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.
ಯಾಕೆಂದರೆ ಹೀಗೆ ಹರಿದಾಡುವ ಸುದ್ದಿಗಳಲ್ಲಿ ಅರ್ಧಕ್ಕೆ ಅರ್ಧ ಸುಳ್ಳಾಗಿರುತ್ತಾವೆ. ಇನ್ನೂ ಕೆಲ ಒಮ್ಮೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದಲೇ ಕೆಲವರು ''ಫೇಕ್ ನ್ಯೂಸ್''ಗಳನ್ನು ತೇಲಿ ಬಿಡುತ್ತಾರೆ. ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ.

2024ರಲ್ಲಿ ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಪ್ರಕರಣ ದಾಖಲಾಗಿವೆ. ''ಸುಳ್ಳು ಸುದ್ದಿ'' ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಅರಿವು ಇದ್ದರು ಕೂಡ ಲೈಕ್ಸ್ .. ಶೇರ್ಗಳ ಹುಚ್ಚಿಗೆ ಬಿದ್ದ ಅನೇಕರು ''ಸುಳ್ಳು ಸುದ್ದಿ''ಯನ್ನು ಬರೆಯುತ್ತಾರೆ. ಹಂಚಿಕೊಳ್ಳುತ್ತಾರೆ. ಪತ್ರಿಕೋದ್ಯಮದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುತ್ತಾರೆ.
ಒಟ್ನಲ್ಲಿ ಇಂದಿನ ಡಿಜಿಟಲ್ ಯುಗದಲ್ಲಿ 'ಫೇಕ್ ನ್ಯೂಸ್' ಎಂಬುದು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನವೇ ಈ ಕಿಚ್ಚಿಗೆ ಬಲಿಯಾಗುತ್ತಿದೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಸುಧಾರಾಣಿ ಮತ್ತು ಡಾ.ಶಿವರಾಜ್ ಕುಮಾರ್ ಅವರ ಕುರಿತು ಸುಳ್ಳು ಸುದ್ದಿಯೊಂದನ್ನು ತೇಲಿ ಬಿಡಲಾಗಿದ್ದು ತಮ್ಮ ಕುರಿತ ಸುದ್ದಿಯನ್ನು ಓದಿ ಸುಧಾರಾಣಿ ಕೆರಳಿ ಕೆಂಡವಾಗಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಸ್ಯಾಂಡಲ್ವುಡ್ನ ಸಾರ್ವಕಾಲಿಕ ಸುಂದರ ಜೋಡಿಗಳಲ್ಲಿ ಡಾ. ಶಿವರಾಜಕುಮಾರ್ ಮತ್ತು ಡಾ.ಸುಧಾರಾಣಿ ಅವರ ಜೋಡಿ ಕೂಡ ಒಂದು. ''ಆನಂದ್'.. ''ಮನ ಮೆಚ್ಚಿದ ಹುಡುಗಿ''..''ರಣರಂಗ''.. ''ಸಂಯುಕ್ತಾ''.. ಹೀಗೆ ಸಾಲು ಸಾಲು ಸಿನಿಮಾಗಳನ್ನು ಜೊತೆಯಾಗಿ ಮಾಡಿದ ಇಬ್ಬರ ನಡುವೆ ಇವತ್ತು ಕೂಡ ಒಳ್ಳೆಯ ಬಾಂಧವ್ಯ ಇದೆ. ಸ್ನೇಹ ಇದೆ. ಆತ್ಮೀಯತೆ ಇದೆ.
ಆದರೆ ವ್ಯೂವ್ಸ್ ಹುಚ್ಚು ಹಿಡಿಸಿಕೊಂಡವರಿಗೆ ಯಾವುದೇ ನೈತಿಕತೆ ಇರುವುದಿಲ್ಲ. ಜವಾಬ್ಧಾರಿಯೂ ಇರುವುದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು ಸುಧಾರಾಣಿ ಎಂಬ ಶೀರ್ಷಿಕೆಯಡಿ ಕಪೋಲಕಲ್ಪಿತ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗಿದೆ.

ಕ್ಲಿಕ್ಬೈಟ್ ತಂತ್ರವನ್ನು ಬಳಸಿ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೇ ಹಂಚಿಕೊಂಡಂತೆ ಇರುವ ಈ ಪೋಸ್ಟ್ನಲ್ಲಿ ''ಆನಂದ್'' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು.
ಆದರೆ ಡಾ. ರಾಜ್ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಕೂಡ ಉಲ್ಲೇಖ ಮಾಡಲಾಗಿದೆ. ವಾಸ್ತವದಲ್ಲಿ ಸುಧಾರಾಣಿ ಯಾವ ಸಂದರ್ಶನದಲ್ಲಿಯೂ ಈ ಮಾತನ್ನು ಹೇಳಿಲ್ಲ.
''ವ್ಯೂವ್ಸ್'' ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಮಾಡಿದ ಈ ಅಸಹ್ಯಕರ ಅಪಪ್ರಚಾರವನ್ನು ಕಂಡು ಸದ್ಯ ಸುಧಾರಾಣಿ ಸಿಡಿದೆದ್ದಿದ್ದು, ಸ್ವಲ್ಪನಾದ್ರೂ ನೈತಿಕತೆ ಇರಲಿ. ಕೇವಲ ವ್ಯೂವ್ಸ್ಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸೋದು ನಿಜಕ್ಕೂ ಬೇಸರದ ಸಂಗತಿ. ಇನ್ನಾದ್ರೂ ತಿದ್ದುಕೊಳ್ಳಿ - ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕವಾಗಿರಿ ಮತ್ತು ಸರಿಯಾದ ದಾರಿಯಲ್ಲಿ ಯಶಸ್ಸು ಗಳಿಸಿ ಎಂದು ಬರೆದುಕೊಂಡಿದ್ಧಾರೆ.
ವಿಡಿಯೋ ಮೂಲಕ ಈ ರೀತಿಯ ವಿಡಿಯೋ ಮಾಡಿದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ಕೂಡ ನೀಡಿರುವ ಸುಧಾರಾಣಿ ಆಯ್ಕೊಂಡು ತಿನ್ನೋರೆಲ್ಲ ಕಂಟೆಂಟ್ ಕ್ರೀಯೇಟರ್ಸ್ ಆದರೆ
ಹೀಗೆ ಆಗೋದು ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನ ಆಕ್ರೋಶವನ್ನು ಹೊರ ಹಾಕಿದ್ದಾರೆ.


Click it and Unblock the Notifications











