ಹಿಂದಿ ಹೇರಿಕೆ ಅಜೆಂಡಾಗೆ 'ಅಯ್ಯೋ' ಶ್ರದ್ಧಾ ಬೆಂಬಲ? ಕನ್ನಡಿಗರ ಆಕ್ರೋಶ
ಹಿಂದಿ ಹೇರಿಕೆ ವಿರೋಧಿಸಿದ ಮಾತ್ರಕ್ಕೆ ಇದನ್ನು ಭಾಷಾ ಅಸಹನೆ, ಭಾಷಾ ಸಂಕುಚಿತತೆ ಎಂದು ಹೇಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಕನ್ನಡಿಗರು ಯಾಕೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾರೆ ಎನ್ನುವ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಹಿಂದಿ ಹೇರಿಕೆ ವಿರೋಧಿಸುವವರನ್ನು ದೇಶದ್ರೋಹಿ ಎನ್ನುವಂತೆ ನೋಡುವವರು ಇದ್ದಾರೆ. ಇದೆಲ್ಲದರ ನಡುವೆ ಅಯ್ಯೋ ಶ್ರದ್ಧಾ ಸ್ಟ್ಯಾಂಡಪ್ ಕಾಮಿಡಿ ವೀಡಿಯೋ ವಿವಾದ ಹುಟ್ಟಾಕ್ಕಿದೆ.
ನಟಿ, ನಿರೂಪಕಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಶ್ರದ್ಧಾ ಜೈನ್ ಮಾಡಿರುವ ಹೊಸ ಕಾಮಿಡಿ ವೀಡಿಯೋ ವೈರಲ್ ಆಗ್ತಿದೆ. ಯೂಟ್ಯೂಬ್ನಲ್ಲಿ ಒಂದೇ ವಾರದಲ್ಲಿ 13 ಲಕ್ಷಕ್ಕೂ ಹೆಚ್ಚು ವೀವ್ಸ್ ಸಾಧಿಸಿದೆ. ಇನ್ನು ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಶೇರ್ ಆಗಿ ಲಕ್ಷ ಲಕ್ಷ ಜನ ನೋಡುತ್ತಿದ್ದಾರೆ. ಆಕೆಯ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ರಾಷ್ಟ್ರೀಯ ಏಕೀಕರಣ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸಲು ನಿರ್ಮಿಸಿದ್ದ 'ಮಿಲೇ ಸುರ್ ಮೇರಾ ತುಮ್ಹಾರಾ' ಹಾಡನ್ನು ಶ್ರದ್ಧಾ ತಮ್ಮ ಹೊಸ ಕಾಮಿಡಿ ವೀಡಿಯೋಗೆ ಆರಿಸಿಕೊಂಡಿದ್ದಾರೆ.

3 ದಶಕಗಳ ಹಿಂದೆ 'ಮಿಲೇ ಸುರ್ ಮೇರಾ ತುಮ್ಹಾರಾ' ಹಾಡನ್ನು ತಯಾರಿಸಲಾಗಿತ್ತು. ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ಸಿಂಧಿ, ತಮಿಳು, ತೆಲುಗು, ಉರ್ದು, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ ಭಾಷೆಗಳ ಒಂದೊಂದು ಸಾಲುಗಳನ್ನು ಸೇರಿಸಿ ಭೀಮ್ ಸೇನ್ ಜೋಶಿ ಮತ್ತವರ ತಂಡ ಈ ಹಾಡನ್ನು ಕಟ್ಟಿಕೊಟ್ಟಿದ್ದರು. ಆ ಹಾಡನ್ನು ಆಗ ಹೇಗೆ ಸಿದ್ಧಪಡಿಸಿರಬಹುದು, ಒಂದು ವೇಳೆ ಈಗ ಇಂತಹ ಹಾಡು ಬಿಡುಗಡೆ ಆಗಿದ್ದರೆ ಏನಾಗುತ್ತಿತ್ತು ಎಂದು ಶ್ರದ್ಧಾ ತಮಾಷೆಯಾಗಿ ವೀಡಿಯೋ ಮಾಡಿದ್ದಾರೆ.
ಶ್ರದ್ಧಾ ಪ್ರತಿಭೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಕೆಯ ಪ್ರಯತ್ನ ವೀಡಿಯೋ ಮಾಡಲು ಹಾಕಿರುವ ಶ್ರಮದ ಕುರಿತು ಹೊಗಳಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಹಿಂದಿ ಹೇರಿಕೆಯ ವಿಚಾರವನ್ನು ಶ್ರದ್ಧಾ ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಶ್ರದ್ಧಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಶ್ರದ್ಧಾ ತಮ್ಮ ವೀಡಿಯೋದಲ್ಲಿ "ಈ ಹಾಡಿನಲ್ಲಿ ಇಷ್ಟೊಂದು ಹಿಂದಿ ಯಾಕೆ?" ಎಂದು ಹೇಳುವವರೇ ಹೆಚ್ಚು, ಹಾಗಾಗಿ ಯಾವ ರಾಜ್ಯಕ್ಕೂ ಹಿಂದಿ ಬೇಡ" ಎಂದು ಹಾಸ್ಯಭರಿತವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. "ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಹಿಂದಿಯನ್ನು ವಿರೋಧಿಸುತ್ತಿವೆ" ಎಂದು ಶ್ರದ್ಧಾ ಹೇಳಿರುವುದನ್ನು ಕೆಲವರು ಟೀಕಿಸುತ್ತಿದ್ದಾರೆ.
ಶ್ರದ್ಧಾ ಬಿಜೆಪಿ ಅನುಯಾಯಿ ಅದಕ್ಕೆ ಹಿಂದಿ ಹೇರಿಕೆಯನ್ನು ಹೀಗೆ ನಯವಾಗಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಹಿಂದೆ ಆಕೆ ಪ್ರಧಾನಿ ಮೋದಿ ಭೇಟಿ ಮಾಡಿದ್ದ ಫೋಟೊಗಳನ್ನು ವೈರಲ್ ಮಾಡುತ್ತಿದ್ದಾರೆ. "ಹಿಂದಿ ಹೇರಿಕೆ ನಿಂತರೆ ನಾವು ಅದನ್ನು ವಿರೋಧಿಸಬೇಕಾಗಿಲ್ಲ. ಒಂದು ರಾಷ್ಟ್ರ - ಒಂದು ಭಾಷೆ ಭಾರತದಂತಹ ವೈವಿಧ್ಯಮಯ ದೇಶಗಳಿಗೆ ಅಪಾಯ" ಎಂದು ಶ್ರದ್ಧಾ ವೀಡಿಯೋ ಹಂಚಿಕೊಂಡು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಅದನ್ನು 450 ಮಂದಿ ರೀ-ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ "ನಮ್ಮದು ವೈವಿಧ್ಯಮಯ ದೇಶ ಮತ್ತು ಅದನ್ನು ಆಚರಿಸಬೇಕು ಎಂದು ನಾನು ಒಪ್ಪುತ್ತೇನೆ! ಅದೇ ಮನೋಭಾವದಲ್ಲಿ, ಭಾರತದ ವಿವಿಧ ಭಾಗಗಳಿಂದ ಇಲ್ಲಿ ನೆಲೆಸಿ ಸ್ಥಳೀಯ ಭಾಷೆಯನ್ನು ಸ್ವೀಕರಿಸದ ಜನರನ್ನು ನಾವು ಏಕೆ ಪ್ರಶ್ನಿಸಬಾರದು? ಇದು ಬೂಟಾಟಿಕೆ ಅಲ್ಲವೇ?" ಎಂದಿದ್ದಾರೆ. ಸಾಕಷ್ಟು ಜನ ಶ್ರದ್ಧಾ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸುಖಾ ಸುಮ್ಮನೆ ಇದನ್ನು ವಿವಾದ ಮಾಡಬೇಡಿ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎನ್ನುತ್ತಿದ್ದಾರೆ.


Click it and Unblock the Notifications











