'ಚೆಲುವಿನ ಚಿತ್ತಾರ' ರಾಕೇಶ್ (ಬುಲ್ಲಿ) ಕುಟುಂಬಕ್ಕೆ ಧನಸಹಾಯ ಮಾಡಿದ ಶ್ರುತಿ ನಾಯ್ಡು
ಒಂದೂವರೆ ವರ್ಷದ ಹಿಂದೆ' ಚೆಲುವಿನ ಚಿತ್ತಾರ' ಚಿತ್ರದ ಪಪ್ಪುಸಿ ಖ್ಯಾತಿಯ ರಾಕೇಶ್ ನಿಧನರಾಗಿದ್ದರು. ಅನಾರೋಗ್ಯ ಹಿನ್ನೆಲೆ 27 ವರ್ಷ ವಯಸ್ಸಿನಲ್ಲೇ ವಿದಿಯ ಆಟಕ್ಕೆ ಬಲಿಯಾಗಿದ್ದರು. ರಾಕೇಶ್ ನಿಧನದ ನಂತರ ಅವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ.
ಆದ್ರೆ, ಈ ಬಗ್ಗೆ ಯಾರೂ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ, ಕಿರುತೆರೆಯಲ್ಲಿ ಹೆಚ್ಚು ಖ್ಯಾತಿಗಳಿಸಿಕೊಂಡಿರುವ ನಿರ್ಮಾಪಕಿ ಶ್ರುತಿ ನಾಯ್ಡು ಅವರು ರಾಕೇಶ್ ಕುಟುಂಬಕ್ಕೆ ಧನಸಹಾಯ ಮಾಡಿದ್ದಾರೆ.
ಹೌದು, ಶ್ರುತಿ ನಾಯ್ಡು ನಿರ್ಮಾಣದ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ರಾಕೇಶ್ ಅವರ ಕುಟುಂಬಕ್ಕೆ ಶ್ರುತಿ ನಾಯ್ಡು ಅವರು ಒಂದು ಲಕ್ಷ ಚೆಕ್ ವಿತರಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈಯಿಂದ ಈ ಚೆಕ್ ನೀಡಲಾಯಿತು.

''ಮೃತ ನಟ ರಾಕೇಶ್ ಅವರ ತಾಯಿ ಆಶಾ ರಾಣಿ ಕೂಡ ಚಿತ್ರರಂಗದಲ್ಲಿ ಕಲಾವಿದರು. ಅವರ ಕುಟುಂಬ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದೆ. ಈ ಹಣ ಸ್ವಲ್ಪ ಮಟ್ಟಿಗೆ ಸಹಾಯವಾಗಬಹುದು. ಮುಂದಿನ ದಿನಗಳಲ್ಲೂ ನಾನು ಬಿ ವಿ ರಾಧಾ ಅವರ ಹೆಸರಿನಲ್ಲಿ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಒಂದೊಂದು ಲಕ್ಷ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತೇನೆ'' ಎಂದು ನಿರ್ಮಾಪಕಿ ಶ್ರುತಿ ನಾಯ್ಡು ತಿಳಿಸಿದರು.
ಜಗ್ಗೇಶ್ ನಟನೆಯ 'ಪ್ರೀಮಿಯರ್ ಪದ್ಮಿನಿ' ಸಿನಿಮಾವನ್ನ ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಡಿ ಬಾಸ್ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಇನ್ನುಳಿದಂತೆ ರಾಕೇಶ್ 'ಚೆಲುವಿನ ಚಿತ್ತಾರ', ಶಿವರಾಜ್ ಕುಮಾರ್ ಅಭಿನಯದ 'ಬಂಧುಬಳಗ', 'ಭಜರಂಗಿ', 'ದುನಿಯಾ ವಿಜಯ್ ಅಭಿನಯದ 'ಚಂಡ', ಯಶ್ ಅವರ 'ಮೊದಲ ಸಲ' ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. ಸದ್ಯ, 'ಧೂಮಪಾನ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.


Click it and Unblock the Notifications











