ಮೊದಲ ಚಿತ್ರ ಸೋತಾಗ ಡಿಪ್ರೆಷನ್ಗೆ ಹೋಗಿದ್ದೆ, ಅವಕಾಶ ಕೊಟ್ಟು ಕೈಹಿಡಿದದ್ದು ಈ ಇಬ್ಬರು ಮಾತ್ರ: ಪ್ರಮೋದ್
ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರದ ಉಡಾಳ್ ಬಾಬು ರಾವ್ ಪಾತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರ ಪರಿಚಿತರಾದ ನಟ ಪ್ರಮೋದ್ ಪಂಜು ಈಗ ಕನ್ನಡದ ಕೆಲ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಇದರ ಜತೆಗೆ ತನ್ನ ನಟನೆಯ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಮನಸ್ಸನ್ನು ಗೆದ್ದಿದ್ದ ಪ್ರಮೋದ್ ತೆಲುಗಿನ ದೊಡ್ಡ ಚಿತ್ರ ಸಲಾರ್ನಲ್ಲೂ ಸಹ ಮುಖ್ಯ ಪಾತ್ರವೊಂದಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಹೀಗೆ ದೊಡ್ಡ ನಿರ್ದೇಶಕನ ಮನಗೆದ್ದು ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿರುವ ಪ್ರಮೋದ್ ಪಂಜು ಸಿನಿಮಾ ಹಾದಿ ಸುಲಭದ್ದಾಗಿರಲಿಲ್ಲ, ಮೊದಲಿಗೆ ಲಕುಮಿ ಎಂಬ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಪ್ರಮೋದ್ ಪಂಜು ಕೆಲ ಧಾರಾವಾಹಿಗಳಲ್ಲಿ ನಟಿಸಿದ ನಂತರ ಗೀತಾ ಬ್ಯಾಂಗಲ್ ಸ್ಟೋರ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿ ಚಿತ್ರರಂಗ ಪ್ರವೇಶಿಸಿದ್ದರು.
ಮೊದಲ ಚಿತ್ರ ಗೆಲ್ಲಲಿದೆ ಎಂಬ ಬಹುದೊಡ್ಡ ಆಸೆ ಹಾಗೂ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಪ್ರಮೋದ್ ಅಂದುಕೊಂಡಿದ್ದು ಮಾತ್ರ ನೆರವೇರಲಿಲ್ಲ. ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ. ಹೀಗೆ ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲೇ ಸೋತ ಪ್ರಮೋದ್ ಪಂಜು ತೀವ್ರ ಹತಾಶೆಗೆ ಒಳಗಾಗಿ ಡಿಪ್ರೆಷನ್ಗೆ ಹೋಗಿದ್ದರಂತೆ ಹಾಗೂ ಈ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಸಹಾಯಕ್ಕೆ ಬಂದಿದ್ದರಂತೆ. ಈ ವಿಷಯವನ್ನು ಸ್ವತಃ ಪ್ರಮೋದ್ ನಮ್ಮ ಫಿಲ್ಮಿಬೀಟ್ ಕನ್ನಡ ಚಾನೆಲ್ ಜತೆ ನಡೆದ ಬಾಂಡ್ ರವಿ ಚಿತ್ರದ ಕುರಿತಾದ ಸಂದರ್ಶನದ ಸಮಯದಲ್ಲಿ ತಿಳಿಸಿದ್ದಾರೆ.

ಐದಾರು ವರ್ಷಗಳ ಕನಸು ಮೂರನೇ ದಿನಕ್ಕೆ ಭಗ್ನ
ಇನ್ನು ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರಕ್ಕಾಗಿ ತಾವು ಹಲವಾರು ವರ್ಷ ಕಷ್ಟ ಪಟ್ಟದ್ದನ್ನು ಪ್ರಮೋದ್ ಅವರು ಸಂದರ್ಶನದಲ್ಲಿ ತಿಳಿಸಿದರು. ಚಿತ್ರ ಬಿಡುಗಡೆಯಾಯಿತು, ಚಿತ್ರ ವೀಕ್ಷಿಸಿದವರು ಒಳ್ಳೆಯ ಚಿತ್ರ, ಒಳ್ಳೆಯ ಅಭಿನಯ ಎಂದು ಬೆನ್ನು ತಟ್ಟಿದ್ರು, ಆದರೆ ಚಿತ್ರ ಬಿಡುಗಡೆಯಾಗಿ ಮೂರೇ ದಿನಕ್ಕೆ ಕಲೆಕ್ಷನ್ ಚೆನ್ನಾಗಿಲ್ಲ, ಚಿತ್ರವನ್ನು ತೆಗೆಯುತ್ತಿದ್ದಾರೆ ಎಂಬ ವಿಷಯ ಕೇಳಿ ಇದಕ್ಕಾ ಐದಾರು ವರ್ಷಗಳಿಂದ ಕಷ್ಟಪಟ್ಟದ್ದು ಎಂದು ಬೇಸರವಾಯಿತು ಎಂದು ಪ್ರಮೋದ್ ತಿಳಿಸಿದರು.

ಹತಾಶೆಗೊಳಗಾದಾಗ ಬೆಂಬಲಿಸಿದ್ದು ಇವರು
ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ಮಾಡಿ ಕೈಸುಟ್ಟುಕೊಂಡು ಹತಾಶೆಗೊಳಗಾಗಿದ್ದ ದಿನಗಳನ್ನು ನೆನೆದ ಪ್ರಮೋದ್ ಆ ಚಿತ್ರದ ಬಳಿಕ ಮತ್ತೆ ಧಾರಾವಾಹಿಗಳತ್ತ ಮುಖ ಮಾಡಿದ್ದೆ, ಆ ಸಂದರ್ಭದಲ್ಲಿ ನನಗೆ ಧಾರಾವಾಹಿಗಳಲ್ಲಿ ಅವಕಾಶ ಕೊಟ್ಟಿದ್ದ ಶೃತಿ ನಾಯ್ಡು ಹಾಗೂ ರಮೇಶ್ ಇಂದ್ರ ಸರ್ ನನ್ನ ಒದ್ದಾಟ ಹಾಗೂ ಸಾಮರ್ಥ್ಯ ನೋಡಿ, ಈತನನ್ನು ಹೀಗೆ ಬಿಟ್ಟರೆ ವೇಸ್ಟ್ ಆಗಿಬಿಡ್ತಾನೆ ಅಂತ ಹೇಳಿ ಪ್ರೀಮಿಯರ್ ಪದ್ಮಿನಿ ಎಂಬ ಚಿತ್ರ ಮಾಡಿ ಅದರಲ್ಲಿ ಜಗ್ಗೇಶ್ ಸರ್ ಅವರನ್ನು ಹಿರೋ ಮಾಡಿ ನನಗೆ ಒಂದೊಳ್ಳೆ ಪಾತ್ರ ಕೊಟ್ಟರು ಹಾಗೂ ಅದರಿಂದ ನಾನು ದೊಡ್ಡ ಐಡೆಂಟಿಟಿ ಪಡೆದುಕೊಂಡೆ ಎಂದು ತಿಳಿಸಿದರು.

ಪ್ರೀಮಿಯರ್ ಪದ್ಮಿನಿಯಿಂದ ರತ್ನನ್ ಪ್ರಪಂಚ
ಇನ್ನು ರತ್ನನ್ ಪ್ರಪಂಚ ಚಿತ್ರದ ನಿರ್ದೇಶಕ ರೋಹಿತ್ ಪದಕಿ ಪ್ರೀಮಿಯರ್ ಪದ್ಮಿನಿ ಚಿತ್ರಕ್ಕೆ ಆರಂಭದ ಒಂದು ತಿಂಗಳು ಚಿತ್ರಕತೆ ಬರೆಯುವಾಗ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ರು, ಅವರು ಚಿತ್ರ ಬಿಡುಗಡೆಯಾದ ನಂತರ ನನ್ನ ಅಭಿನಯವನ್ನು ನೋಡಿ ಇಷ್ಟಪಟ್ಟು, ರತ್ನನ್ ಪ್ರಪಂಚ ಕತೆ ಬರೆಯುವಾಗ ನನ್ನನ್ನೇ ತಲೆಯಲ್ಲಿ ಇಟ್ಟುಕೊಂಡು ಉಡಾಳ್ ಬಾಬುರಾವ್ ಪಾತ್ರವನ್ನು ಕಟ್ಟಿಕೊಟ್ರು ಎಂದು ಪ್ರಮೋದ್ ತಿಳಿಸಿದರು. ಪ್ರೀಮಿಯರ್ ಪದ್ಮಿನಿ ನೋಡಿದ ಬಳಿಕ ರೋಹಿತ್ ಪದಕಿ ನನಗೆ ಕರೆ ಮಾಡಿ ಮಾತನಾಡಿ ಹೊಗಳಲಿಲ್ಲ, ನೇರವಾಗಿ ದೊಡ್ಡ ಪಾತ್ರದಲ್ಲಿ ಅವಕಾಶ ಕೊಟ್ರು, ಅದು ಕಲೆಗೆ ಅವರು ಕೊಡುವ ಬೆಲೆ ಹಾಗೂ ಬೆಂಬಲ ಎಂದು ಪ್ರಮೋದ್ ತಿಳಿಸಿದರು.


Click it and Unblock the Notifications











