ಶ್ರುತಿ ಸಿಟ್ಟಾಗಿದ್ದಾರೆ ಗಟ್ಟಿಯೂ ಆಗಿದ್ದಾರೆ

By Staff

*ಸತ್ಯನಾರಾಯಣ

ತೆರೆಯ ಮೇಲೆ ನೋವಾದಾಗಲೆಲ್ಲ ಕಣ್ಣೀರು ಸುರಿಸುವ ಶ್ರುತಿ, ತೆರೆಯಾಚೆಗೆ ಆಕ್ರಮಣವೇ ಅತ್ಯುತ್ತಮ ತಂತ್ರ ಎಂದು ನಂಬಿದ್ದಾರೆ. ಮಹೇಂದರ್‌ ಅವರನ್ನು ಮದುವೆಯಾದ ಮೇಲಂತೂ ಶ್ರುತಿ ಇನ್ನಷ್ಟು ಗಟ್ಟಿಯಾಗಿದ್ದಾರೆ. ಗಟ್ಟಿಮೇಳ ಚಿತ್ರ ಬಿಡುಗಡೆಯ ದಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಗಟ್ಟಿ ಶ್ರುತಿಯ ಪರಿಚಯ ಕೆಲವು ಪತ್ರಕರ್ತರಿಗಾಯಿತು. ಚಿತ್ರದ ಬಗ್ಗೆ ಯಾರೂ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇತರ ವಿಚಾರಗಳ ಬಗ್ಗೆಯೇ ಹೆಚ್ಚಿನ ಕುತೂಹಲ ತೋರಿಸಿದ್ದೂ ಶ್ರುತಿಯ ಅಸಹನೆಯನ್ನು ದುಪ್ಪಟ್ಟಾಗಿಸಿತು.

ಪ್ರ : ನೀವು ಟೀವಿ ಸೀರಿಯಲ್‌ನಲ್ಲಿ ನಟಿಸುವ ಯೋಚನೆ ಇದೆಯಾ?
ಉ : ಎಂಥಾ ಪ್ರಶ್ನೆ ಕೇಳ್ತಾ ಇದ್ದೀರಾ ? ನಾನಿನ್ನೂ ಟೀವಿಯಲ್ಲಿ ನಟಿಸುವ ಕಾಲ ಬಂದಿಲ್ಲ . ನನ್ನ ಕೈಯ್ಯಲ್ಲಿ ಬೇಕಾದಷ್ಟು ಸಿನಿಮಾಗಳಿವೆ.

ಪ್ರ : ಎಲ್ಲಾರ ಮನೆ ದೋಸೇನೂ .. ಚಿತ್ರದಲ್ಲಿ ನಿಮ್ಮನ್ನು ಹಾಕಿಕೊಂಡು ಏನೂ ಪ್ರಯೋಜನವಾಗಲಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರಲ್ಲ ?
ಉ : ಆ ಚಿತ್ರದ ನಿರ್ದೇಶಕ ಮೊನ್ನೆ ಸಿಕ್ಕಿದ್ದ . ಏನಯ್ಯಾ ನಿನ್ನ ಮುಖ ನೋಡಿ ಚಿತ್ರ ಒಪ್ಪಿಕೊಂಡಿದ್ದಕ್ಕೆ ಒಳ್ಳೇ ಬಹುಮಾನ ಸಿಕ್ಕಿತು ಎಂದು ಅವನಿಗೆ ಹೇಳಿದೆ. ನಾನೀಗ ಏನೂ ಹೇಳುವುದಿಲ್ಲ . ಆ ಚಿತ್ರ ನೋಡಿ ನಿಮಗೇ ಅರ್ಥವಾಗುತ್ತೆ , ಒಬ್ಬಳು ಕಲಾವಿದೆಯನ್ನು ನಿರ್ಮಾಪಕರು ಹೇಗೆ ಬಳಸಿಕೊಂಡಿದ್ದಾರೆ ಅನ್ನೋದು. ಆದರೆ ಈಗ ನಮಗೇ ತೊಂದರೆಯಾಗಿದೆ. ಇದಕ್ಕೆಲ್ಲಾ ಕಾರಣ ಇವರೇ (ಹಾಗೆನ್ನುತ್ತಾ ಪತಿ ಮಹೇಂದರ್‌ ಕಡೆಗೊಂದು ಕಡೆಗಣ್ಣ ನೋಟ. ಮಹೇಂದರ್‌ರಿಂದ ತಪ್ಪೊಪ್ಪಿದೆ)

ಪ್ರ : ಮಹಾಲಕ್ಷ್ಮಿ ಚಿತ್ರದ ಗತಿಯೇನಾಯ್ತು ?
ಉ : ನಿಮಗೇ ಗೊತ್ತಲ್ಲ . ನನಗೆ ಆವತ್ತೇ ಅನಿಸಿತ್ತು . ಅದರಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ . ಆದರೆ ನಾನು ಹೇಳೋದಕ್ಕೆ ಹೋಗಲಿಲ್ಲ .

ಪ್ರ : ಗಟ್ಟಿಮೇಳ ಚಿತ್ರದ ಕ್ಲೈಮಾಕ್ಸ್‌ ಬದಲಾಯಿಸಿದ್ದಕ್ಕೆ ಕಾರಣ ?
ಉ : ಒಂದು ಚಿತ್ರ ರೆಡಿಯಾದಾಕ್ಷಣ ಬಿಡುಗಡೆ ಮಾಡಬೇಕು. ಅದನ್ನು ಹಾಗೇ ಇಟ್ಟರೆ ಹಂಚಿಕೆದಾರರು ನಾನಾ ಬದಲಾವಣೆಗಳನ್ನು ಹೇಳುತ್ತಾರೆ. ಅದನ್ನು ನಾವು ಪಾಲಿಸುವುದು ಅನಿವಾರ್ಯ ಆಗುತ್ತದೆ. ಡೈರೆಕ್ಟರ್‌ ನಮ್ಮವರೇ ಆಗಿದ್ದರಿಂದ ಅದನ್ನು ಮಾಡೋದಕ್ಕೆ ಈಸಿ.

ಪ್ರ : ಮಹೇಂದರ್‌ ಮತ್ತು ನೀವು ಜೊತೆಯಾಗಿ ಗಟ್ಟಿಮೇಳ ಚಿತ್ರದ ಪ್ರಚಾರಕ್ಕೆ ಊರೂರು ಸುತ್ತುವ ಯೋಚನೆ ಇದೆಯೇ ?
ಉ : ಹೂಂ ... ಹೋಗಬೇಕು. ಆದರೆ ಇವರಿಗೆ ಇನ್ನು ನಾಲ್ಕು ದಿನದಲ್ಲಿ ಇನ್ನೊಂದು ಚಿತ್ರದ ಶೂಟಿಂಗ್‌ ಶುರುವಾಗುತ್ತದೆ. ನನಗ್ಯಾಕೊ ಇವರು ಕೆಲಕಾಲ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳೋದು ಇಷ್ಟವಿಲ್ಲ . ಕೆಲಸ ಮಾಡಿ ಸಾಕಾಯಿತು. ನಮಗೆ ಕೊಂಚ ವಿಶ್ರಾಂತಿ ಬೇಕು.

ಅಂದಹಾಗೆ ಮಹೇಂದರ್‌ ಸದ್ಯಕ್ಕೆ ಯಾವ ಚಿತ್ರಗಳಲ್ಲೂ ನಟಿಸುವ ಸಾಧ್ಯತೆ ಇಲ್ಲ . ನಿರ್ದೇಶಕನಾಗಿ ಅವರ ಕೈಯ್ಯಲ್ಲೀಗ ಎರಡು ಚಿತ್ರಗಳಿವೆ. ಮೊದಲನೆಯದು ಸುರ, ಇನ್ನೊಂದು ಕ್ಷೇಮವೇ ಕುಶಲವೇ. ಇವೆರಡೂ ರೀಮೇಕ್‌. ಆನಂತರ ರೆಹಮಾನ್‌, ಸಂದೇಶ್‌ ನಾಗರಾಜ್‌ ಮತ್ತು ಇನ್ನೊಬ್ಬ ಹೊಸ ನಿರ್ಮಾಪಕರಿಗಾಗಿ ಮಹೇಂದರ್‌ ಮೂರು ಚಿತ್ರಗಳನ್ನು ನಿರ್ದೇಶಿಸಲಿದ್ದಾರೆ. ಆ ಪೈಕಿ ಒಂದು ಸ್ವಮೇಕ್‌. ಜಾತ್ರೆಯಾಂದರಲ್ಲಿ ನಡೆಯುವ ಕಥೆಯದು.

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X