ನವೆಂಬರ್ 6ರಂದು ವಿಷ್ಣು ಸ್ಮಾರಕಕ್ಕೆ ಶಂಕುಸ್ಥಾಪನೆ
ಅಭಿನಯಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿ ಇದು. ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಡೆಗೂ ಶುಭ ಮುಹೂರ್ತ ಕೂಡಿಬಂದಿದೆ. ನವೆಂಬರ್ 6ರಂದು ಶಂಕು ಸ್ಥಾಪನೆ ನೆರವೇರಲಿದೆ.
ಉತ್ತರಹಳ್ಳಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಎದುರಿಗಿನ ಜಾಗದಲ್ಲಿ ಸ್ಮಾರಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 6ರಂದು ಶಂಕು ಸ್ಥಾಪನೆ ಮಾಡಲಿದ್ದಾರೆ. ಸರಿಸುಮಾರು ರು.11 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. [ಶೀಘ್ರ ವಿಷ್ಣು ಸ್ಮಾರಕ ನಿರ್ಮಿಸಲು ದೇವೇಗೌಡ ಒತ್ತಾಯ]

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ನಟ ಅನಿರುದ್ಧ್, ಸರ್ಕಾರ ಸಿದ್ಧಪಡಿಸಿರುವ ಸ್ಮಾರಕ ನಿರ್ಮಾಣದ ನೀಲನಕ್ಷೆ ನಮಗೆ ಒಪ್ಪಿಗೆಯಾಗಿದೆ. ನ.6 ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಲಿದ್ದಾರೆ. ಅಪ್ಪಾಜಿ ಅವರ ಅಸ್ಥಿ ನಮ್ಮ ಬಳಿ ಇದ್ದು ಸ್ಮಾರಕ ನಿರ್ಮಾಣದ ಬಳಿಕ ಅಲ್ಲಿಟ್ಟು ಪೂಜೆ ಮಾಡುವುದಾಗಿ ಅವರು ತಿಳಿಸಿದರು.
ಅಭಿಮಾನ್ ಸ್ಟುಡಿಯೋ ಒಳಗಿನ ವಿಷ್ಣು ಸಮಾಧಿ ಸುತ್ತ ಸ್ಮಾರಕ ನಿರ್ಮಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಅಭಿಮಾನ್ ಸ್ಟುಡಿಯೋ ಭೂಮಿ ಕುರಿತು ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಮಕ್ಕಳ ನಡುವೆ ವಿವಾದವಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಆ ಜಾಗ ಬಳಸಿಕೊಳ್ಳಲು ಸಾಧ್ಯವಾಗದೆ ಇರುವ ಕಾರಣ ಸ್ಟುಡಿಯೋ ಎದುರಿಗೆ ಸರ್ಕಾರ ಎರಡು ಎಕರೆ ಜಾಗ ನೀಡಿದೆ. ಅಲ್ಲಿ ಸ್ಮಾರಕ ನಿರ್ಮಿಸಲಾಗುತ್ತದೆ. ಸರ್ಕಾರ ಸಿದ್ಧಗೊಳಿಸಿರುವ ನೀಲನಕ್ಷೆಯನ್ನು ಭಾರತಿ ವಿಷ್ಣುವರ್ಧನ್ ಮತ್ತವರ ಕುಟುಂಬ ಸಹಮತ ಸೂಚಿಸಿದೆ. ಇಲ್ಲಿ ಉದ್ಯಾನವನ, ಧ್ಯಾನ ಮಂದಿರ, ವಿಷ್ಣು ಬೃಹತ್ ಪ್ರತಿಮೆ ನಿರ್ಮಿಸಲಾಗುತ್ತದೆ.
ಹಣ ಎಷ್ಟೇ ಖರ್ಚಾದರೂ ಪರವಾಗಿಲ್ಲ. ಸ್ಮಾರಕ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಉತ್ತಮ ಗುಣಮಟ್ಟದ ಮತ್ತು ಸುಸಜ್ಜಿತ ಸ್ಮಾರಕ ನಿರ್ಮಾಣವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದು ಅದರಂತ ಕಾಮಗಾರಿ ನಡೆಯಲಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











