ಪುನೀತ್ ಆದರ್ಶಗಳೆ ಮಾರ್ಗ ದರ್ಶನ: ಸಿದ್ದರಾಮಯ್ಯ!
'ಪುನೀತ್ ನಮನ' ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ ಆಗಿದ್ದರು. ಪ್ರತಿಯೊಬ್ಬರು ಅಪ್ಪು ಅವರ ಬಗ್ಗೆ ಮಾತನಾಡಿ. ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ಧ ರಾಮಯ್ಯ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿ, ಪುನೀತ್ ರಾಜ್ಕುಮಾರ್ ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅಪ್ಪು ಕುರಿತು ಮಾತನಾಡಿದರು.
"ನಾವು ಯಾರೂ ಅಂದುಕೊಂಡಿರಲಿಲ್ಲ ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತೇವೆ ಎಂದು. ಸಾಮಾನ್ಯವಾಗಿ ಪ್ರಖ್ಯಾತ ನಟರು ನಿಧನರಾದಾಗ ಅವರ ಅಭಿಮಾನಿಗಳು ಅವರಿಗಾಗಿ ಅಳುವುದು ಸಹಜ. ಆದರೆ ಪುನೀತ್ ರಾಜಕುಮಾರ್ ಅವರು ನಿಧನರಾದಾಗ, ಎಲ್ಲ ಜನರು ನಮ್ಮ ಮನೆಯಲ್ಲಿ ಒಬ್ಬರನ್ನು ಕಳೆದುಕೊಂಡಿರುವ ಅಂತಹ ನೋವನ್ನು ಅನುಭವಿಸಿದ್ದಾರೆ".
"ಇಡೀ ನಾಡು ದುಃಖ ಅನುಭವಿಸಿದೆ. ಇದು ವಿಶೇಷ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಕೂಡ ಈ ರೀತಿಯ ದುಃಖ ವ್ಯಕ್ತಪಡಿಸುವುದು, ಕಣ್ಣೀರು ಹಾಕುವುದನ್ನು ನೋಡಲು ಸಾಧ್ಯವಿಲ್ಲ. ಇದನ್ನು ನೋಡಿದಾಗ ಪುನೀತ್ ರಾಜಕುಮಾರ್ ಅವರು ಹೇಗೆ ಜನರ ಮನಸ್ಸಲ್ಲಿ, ಅವರ ಹೃದಯ ಸಿಂಹಾಸನದಲ್ಲಿ ಹೇಗೆ ಸೇರಿ ಹೋಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ". ಎಂದು ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ!
"ಪುನೀತ್ ರಾಜ್ಕುಮಾರ್ ಒಬ್ಬ ಪ್ರತಿಭಾನ್ವಿತ ನಟ, ಬರೀ ಒಬ್ಬ ನಟನಾಗಿ ಮಾತ್ರ ಅವರು ಜನಪ್ರಿಯತೆಯನ್ನು ಗಳಿಸಿರಲಿಲ್ಲ. ಅಪ್ಪು ಒಬ್ಬ ವಿನಯಯುಳ್ಳ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ. ಹಾಗಾಗಿ ಬಹುಶಃ ಕನ್ನಡಿಗರ ಎಲ್ಲರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿದೆ ಅನಿಸುತ್ತೆ".

ಅಪ್ಪು ನಿಧನದ ಸುದ್ದಿ ನಂಬಲಿಲ್ಲ: ಸಿದ್ಧರಾಮಯ್ಯ!
"ಅವರು ನಿಧನರಾದಾಗ ನಾನು ದೂರ ಇದ್ದೆ. ಅವರು ಇಲ್ಲ ಎನ್ನುವ ಸುದ್ದಿ ತಿಳಿಸಿದರು. ಆದರೆ ನಾನು ನಂಬಲಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲೇ, ಒಳ್ಳೆಯ ದೇಹವನ್ನು ಇಟ್ಟುಕೊಂಡು ಇದ್ದ ವ್ಯಕ್ತಿ ಇಷ್ಟು ಬೇಗ ಹೇಗೆ ನಿಧನ ಆಗುತ್ತಾರೆ ಎಂದು ನಾನು ಆ ವಿಚಾರ ನಂಬಲೇ ಇಲ್ಲ. ಆದರೆ ಆ ಸುದ್ದಿ ನಿಜ ಆದಾಗ ತಡೆಯಲು ಆಗಲಿಲ್ಲ. ನಮ್ಮ ಮನೆಯವರು ನಿಧನರಾದಾಗ ಯಾವ ರೀತಿಯ ದುಃಖ ಆವರಿಸುತ್ತದೆಯೋ ಅದೇ ರೀತಿಯ ದುಃಖ ಆವರಿಸಿತ್ತು".
"ರಾಜಕುಮಾರ್ ಅವರ ಕುಟುಂಬದೊಂದಿಗೆ ನನಗೆ ಮೊದಲಿನಿಂದಲೂ ಆತ್ಮೀಯತೆ ಇತ್ತು. ರಾಜಕುಮಾರ್ ಅವರು ನಮ್ಮ ಜಿಲ್ಲೆಯವರು. ನನ್ನನ್ನು ಯಾವಾಗ ಕಂಡರೂ ಕೂಡ ಬನ್ನಿ ಬನ್ನಿ ನಮ್ಮ ಕಾಡಿನವರು ಎಂದು ಅತ್ಯಂತ ವಿನಯದಿಂದ ರಾಜಕುಮಾರ್ ಅವರು ಕಾಣುತ್ತಿದ್ದರು".

ಪುನೀತ್ ರಾಜ್ ಕುಮಾರ್ಗಾಗಿ ರಾಜಕುಮಾರ ಸಿನಿಮಾ ನೋಡಿದೆ: ಸಿದ್ಧರಾಮಯ್ಯ
"ಒಮ್ಮೆ ಮೈಸೂರಿನಲ್ಲಿ ಅಪ್ಪು ಸಿಕ್ಕಿದ್ದರು. ರಾಜಕುಮಾರ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ನೋಡಿ ಎಂದು ಹೇಳಿದರು. ಆದರೆ ನಾನು ಥಿಯೇಟರ್ಗಳಿಗೆ ಹೋಗಿ ಸಿನಿಮಾ ನೋಡುವುದನ್ನು ಬಿಟ್ಟು ಬಿಟ್ಟಿದ್ದೆ. ಪುನೀತ್ ರಾಜಕುಮಾರ್ ಅವರ ನಟನೆಯ ಈ ಸಿನಿಮಾವನ್ನು ಮೈಸೂರಿನ ಸರಸ್ವತಿ ಚಿತ್ರಮಂದಿರಕ್ಕೆ ಹೋಗಿ ನೋಡಿದೆ. ಸಿನಿಮಾದಲ್ಲಿ ಬಹಳ ಅದ್ಭುತವಾಗಿ ನಟಿಸಿದ್ದಾರೆ".
"ಎಲ್ಲದಕ್ಕಿಂತ ಮುಖ್ಯವಾಗಿ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಆಗದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿ ಆಗಿ ಕೈ ಜೋಡಿಸಿದ್ದಾರೆ. ಅಲ್ಲದೆ ಜನಸೇವೆ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದರು".

ಅಪ್ಪು ಹೆಜ್ಜೆ ಗುರುತುಗಳೇ ಯುವಪೀಳಿಗೆಗೆ ಮಾರ್ಗ ದರ್ಶನ!
"ನನ್ನ ರಾಜಕೀಯ ಜೀವನದಲ್ಲಿ ಒಬ್ಬ ಯುವ ನಟ ನಮ್ಮನ್ನು ಅಗಲಿದಾಗ ಇಷ್ಟೊಂದು ಕೋಟಿಗಟ್ಟಲೆ ಜನ ಕಣ್ಣೀರು ಹಾಕಿರುವುದನ್ನು ನಾನು ನೋಡಿಲ್ಲ. ಇಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋಗಬಾರದಿತ್ತು. ಸಮಾಜಕ್ಕೆ ಇನ್ನು ಹೆಚ್ಚು ಸೇವೆ ಮಾಡುವ ಅವಕಾಶ ಅವರಿಗೆ ಇತ್ತು. ಆದರೆ ಒಂದು ದೊಡ್ಡ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳು ಯುವಜನಾಂಗಕ್ಕೆ ದಾರಿದೀಪ ಆಗುತ್ತವೆ".
"ನಾನು ಪುನೀತ್ ರಾಜಕುಮಾರ್ ಅವರು ದಿವಂಗತ ಆದ ಮೇಲೆ ಒಂದು ಮಾತು ಹೇಳಿದ್ದೆ. ಅವರಿಗೆ ಮರಣೋತ್ತರ ಪದ್ಮಶ್ರೀ ಕೊಡಬೇಕು ಎಂದು ಹೇಳಿದ್ದೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಮಾನ ತೆಗೆದು ಕೊಳ್ಳಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸುತ್ತೇನೆ". ಎಂದು ಹೇಳುವುದರ ಜೊತೆಗೆ ಅಪ್ಪು ಮತ್ತು ರಾಜ್ಕುಮಾರ್ ಕುಟುಂಬದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು.


Click it and Unblock the Notifications











