ಪಾರು ಶ್ರೀಧರ್ಗೆ ಒಂಟಿತನ ಕಾಡುತ್ತಿತ್ತಾ ? ಚಿಕ್ಕಪ್ಪನನ್ನು ನೆನೆದು ಸಿದ್ದು ಮೂಲಿಮನಿ ಭಾವುಕ..!
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಪಾರು ಮತ್ತು ವಧು ಖ್ಯಾತಿಯ ಶ್ರೀಧರ್ ನಾಯಕ್ ಅವರ ಅಕಾಲಿಕ ನಿಧನ ಸಾಕ್ಷಿ.
ಹೌದು, ಶ್ರೀಧರ್.. ಕನ್ನಡ ಕಿರುತೆರೆಯ ಖ್ಯಾತ ಹೆಸರು. ವಧು ಮತ್ತು ಪಾರು ಧಾರಾವಾಹಿಯ ಮೂಲಕ ಜನ ಮನ ಗೆದ್ದವರು ಶ್ರೀಧರ್ ನಾಯಕ್. ಕೇವಲ ಎರಡು ಧಾರಾವಾಹಿಗಳಲ್ಲಿ ಮಾತ್ರವಲ್ಲ 40ಕ್ಕೂ ಅಧಿಕ ಸೀರಿಯಲ್ಗಳಿಗೆ ಶ್ರೀಧರ್ ಬಣ್ಣ ಹಚ್ಚಿದ್ದರು. ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದಲ್ಲಿ ಕೂಡ ಶ್ರೀಧರ್ ಕಾಣಿಸಿಕೊಂಡಿದ್ದರು.

ಇಂಥಾ ಶ್ರೀಧರ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರ್ಥಿಕ ಸಹಾಯಕ್ಕಾಗಿ ಮನವಿಯನ್ನು ಕೂಡ ಮಾಡಿದ್ದರು. ಗುರುತು ಸಿಗದಷ್ಟು ಬದಲಾಗಿದ್ದರು.
ಶ್ರೀಧರ್ ಅವರ ಅನಾರೋಗ್ಯದ ಕುರಿತು ಕಮಲಿ ಖ್ಯಾತಿಯ ಅಂಕಿತಾ ಮಾಹಿತಿಯನ್ನು ಹಂಚಿಕೊಂಡಿದ್ದರು. ವಿಡಿಯೋ ಮೂಲಕ ಸಹಾಯ ಮಾಡುವಂತೆ ಮನವಿಯನ್ನು ಮಾಡಿಕೊಂಡಿದ್ದರು.
ಸ್ವಪ್ನಾ ದೀಕ್ಷಿತ್, ವರ್ಷಿತಾ ಸೇನಿ ಸೇರಿ ಹಲವಾರು ಕಿರುತೆರೆಯ ಕಲಾವಿದರು ಶ್ರೀಧರ್ ಅವರ ಕಷ್ಟಕ್ಕೆ ಮಿಡಿದಿದ್ದರು. ಇವರೆಲ್ಲರ ಮನವಿಗೆ ಜನಸಾಮಾನ್ಯರಿಂದ ಮತ್ತು ಕಿರುತೆರೆಯ ಬಾಕಿ ಕಲಾವಿದರಿಂದ ಸ್ಪಂದನೆ ಸಿಕ್ಕಿತ್ತು. ಹಲವಾರು ಜನ ಸಹಾಯದ ಹಸ್ತವನ್ನು ಕೂಡ ಚಾಚಿದ್ದರು.
ಆದರೆ ವಿಧಿಲಿಖಿತ .. ಹಲವಾರು ಜನ ಸಹಾಯ ಮಾಡಿದ್ದರೂ, ಶ್ರೀಧರ್ ಬೇಗ ಗುಣ ಮುಖರಾಗಲಿ ಎಂದು ಪ್ರಾರ್ಥನೆಯನ್ನು ಮಾಡಿದ್ದರೂ ಕೂಡ ಶ್ರೀಧರ್ ಬದುಕಿ ಉಳಿಯಲಿಲ್ಲ. ಸಾವು-ಬದುಕಿನ ಹೋರಾಟದಲ್ಲಿ ಶ್ರೀಧರ್ ಸೋತು ಹೋದರು. ಮೇ 26ರ ರಾತ್ರಿ ಕೊನೆಯುಸಿರೆಳೆದರು.
ಶ್ರೀಧರ್ ಅವರ ಈ ಅಕಾಲಿಕ ನಿಧನದಿಂದ ಕಿರುತೆರೆಗೆ ಮತ್ತು ಹಲವು ಕಲಾವಿದರಿಗೆ ವ್ಯೆಯಕ್ತಿಕ ನಷ್ಟವುಂಟಾಗಿದೆ. ಆ ಪೈಕಿ ಕನ್ನಡದ ಖ್ಯಾತ ಕಿರುತೆರೆ ಮತ್ತು ಬೆಳ್ಳಿತೆರೆಯ ಕಲಾವಿದ ಸಿದ್ದು ಮೂಲಿಮನಿ ಕೂಡ ಒಬ್ಬರು.
ಹೌದು, ಸಿದ್ದು ಮೂಲಿಮನಿ.. ಕಳೆದ ಹಲವು ವರ್ಷದಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಪ್ರತಿಭಾವಂತ ಆಕ್ಟರ್.ಇವರ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಸಿದ್ದು ಅವರು, ಕಿರುತೆರೆಯಲ್ಲೂ ಬ್ಯುಸಿ.

ಇಂಥಾ ಸಿದ್ದು ಮೂಲಿಮನಿ ಹೆಚ್ಚು ಕಡಿಮೆ ಐದೂವರೆ ವರ್ಷ ಶ್ರೀಧರ್ ಅವರನ್ನು ಹತ್ತಿರದಿಂದ ನೋಡಿದ್ದರು. ದಿನ ಬೆಳಗಾದರೆ ಶ್ರೀಧರ್ ಅವರ ಜೊತೆ ಹರಟೆ ಹೊಡೆಯುತ್ತಿದ್ದರು. ಜೊತೆಯಲ್ಲಿಯೇ ಊಟ ಮಾಡುತ್ತಿದ್ದರು. ಇನ್ನು ತನ್ನ ಕಷ್ಟವನ್ನು ಯಾವತ್ತು ಯಾರೆದುರು ಹೇಳಿಕೊಳ್ಳದ ವ್ಯಕ್ತಿ ಶ್ರೀಧರ್.
ಇಂತಹ ವ್ಯಕ್ತಿ ಏಕಾಏಕಿ ಎದ್ದು ನಡೆದರೆ ಎಂಥವರಿಗಾದರೂ ಬರಸಿಡಿಲು ಬಡಿದಂತೆ ಆಗುತ್ತೆ. ಆದರೂ ಕೂಡ ನೋವಲ್ಲಿಯೇ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ವೆಬ್ ಸೈಟ್ ಜೊತೆ ಸಿದ್ದು ಮೂಲಿಮನಿ ಮಾತನಾಡಿದ್ದಾರೆ. ಶ್ರೀಧರ್ ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ಪ್ರೀತಿಯ ಚಿಕ್ಕಪ್ಪನನ್ನು ನೆನೆದು ಭಾವುಕರಾಗಿದ್ದಾರೆ. ಹಾಗಿದ್ದರೆ ಶ್ರೀಧರ್ ನಾಯಕ್ ಅವರ ಕುರಿತು ಸಿದ್ದು ಮೂಲಿಮನಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಶ್ರೀಧರ್ ನಾಯಕ್ ಅಂದಾಗ ಮೊದಲು ನೆನಪಾಗುವುದು ಏನು ?
'' ಶ್ರೀಧರ್ ನಾಯಕ್ ಎಂಬ ಹೆಸರು ಕೇಳಿದ ತಕ್ಷಣ ನನಗೆ ಮೊದಲು ನೆನಪಾಗುವುದು, ಕಣ್ಮುಂದೆ ಬರುವುದು ಅವರ ನಗು. ಅವರದ್ದು ನಿಷ್ಕಲ್ಮಶವಾದ ನಗು. ಮುಗ್ದತೆ ಇತ್ತು ಆ ಮುಖದಲ್ಲಿ. ಮನಸು ಮಗುವಿನಂತಹದ್ದು. ಸ್ವಲ್ಪ ಕೋಪ ಮಾಡಿಕೊಳ್ಳುತ್ತಿದ್ದರು, ಮುಂಗೋಪಿ, ಮಕ್ಕಳಂತೆ ಕೋಪ ಮಾಡಿಕೊಳ್ಳುತ್ತಿದ್ದರು, ನಮಗಿಂತ ವಯಸ್ಸಿನಲ್ಲಿ ದೊಡ್ಡವರಾದರೂ ಕೂಡ ಅವರ ಮುಖದಲ್ಲಿ ಯಾವಾಗಲೂ ಮಗುವಿನಂತೆ ಒಂದು ನಗು ಇರುವುದು ಎಂದು ಶ್ರೀಧರ್ ಅವರನ್ನು ಸಿದ್ದು ಮೂಲಿಮನಿ ''ಫಿಲ್ಮಿ ಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ.
ಶ್ರೀಧರ್ ಅವರ ಜೊತೆಗಿನ ಮರೆಯಲಾಗದ ನೆನಪು
''ನಾವು ಜಗಳಾಡಿದ್ದೀವಿ, ಖುಷಿಯಾಗಿ ಕಾಲವನ್ನು ಕಳೆದಿದ್ದೀವಿ, ಜೊತೆಯಲ್ಲಿ ಕುಂತು ಊಟ ಮಾಡಿದ್ದೀವಿ, ತುಂಬಾನೇ ಅವರ ಜೊತೆ ಟೈಮ್ನ ನಾನು ಕಳೆದಿದ್ದೇನೆ, ಯಾಕೆಂದರೆ ಪಾರು ಧಾರಾವಾಹಿಗೆ 1400 ಎಪಿಸೋಡ್ ಅಂದರೆ ಹತ್ ಹತ್ರ ಐದು ವರ್ಷ ನಾವು ಕೆಲಸ ಮಾಡಿದ್ವಿ, ನಾವು ಮನೆಯಲ್ಲಿ ಇರುವುದಕ್ಕಿಂತ ಸೆಟ್ನಲ್ಲಿ ಜಾಸ್ತಿ ಇರ್ತಾ ಇದ್ವಿ, ಯಾಕೆಂದರೆ ನಮ್ಮ ಹದಿನೈದು ದಿನ ಧಾರಾವಾಹಿಯ ಶೂಟಿಂಗ್ನಲ್ಲಿಯೇ ಕಳೆದು ಹೋಗ್ತಿತ್ತು'' ಎಂದು ಹೇಳಿದ್ದಾರೆ.
''ಪಾರು ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಅಲ್ಲಿ ಎಲ್ಲರೂ ನಮ್ಮ ಮನೆಯ ಸದ್ಯಸರಂತೆ ಆಗಿದ್ದರು. ಶರತ್ ಅವರು ನನ್ನ ಅಣ್ಣಾನೇ ಆಗಿದ್ದರು, ವಿನಯಮ್ಮ { ವಿನಯಾ ಪ್ರಸಾದ್ } ನನ್ನ ಅಮ್ಮನ ತರ ಆಗಿದ್ದರು, ನಾಗೇಶ್ ಶಾ ಸರ್ ನಮ್ಮ ತಂದೆಯಂತೆ ಆಗಿದ್ದರು, ಅದೇ ರೀತಿ ನಮ್ಮ ಶ್ರೀಧರ್ ಸರ್ ನನ್ನ ಪಾಲಿಗೆ ಚಿಕ್ಕಪ್ಪನೇ ಆಗಿ ಹೋಗಿದ್ದರು. ನಾನು ಅವರನ್ನು ಈ ಕ್ಷಣದವರೆಗೆ ಕೂಡ ಚಿಕ್ಕಪ್ಪ ಅಂತಾನೇ ಕರೆಯುತ್ತಿದ್ದೆ, ಯಾಕೆಂದರೆ ಅವರ ಗುಣವೇ ಹಾಗಿತ್ತು. ಪ್ರತಿ ಸಲ ಹುರಿದುಂಬಿಸುತ್ತಿದ್ದರು, ತುಂಬಾನೇ ಪಾಸಿಟಿವ್ ಆಗಿ ಮಾತನಾಡ್ತಿದ್ದರು'' ಎಂದು ಸಿದ್ದು ಮೂಲಿಮನಿ ಹೇಳಿದ್ದಾರೆ.
''ಆ ಸಮಯದಲ್ಲಿ ನಾವು ಕಿತ್ತಾಡ್ತಿದ್ವಿ ಆ ನಂತರ ಮತ್ತೆ ಮಾತಾಡ್ತಿದ್ವಿ ಅದು ಬೇರೆ ವಿಷಯ, ಆದರೂ ಕೂಡ ಅವರ ಜೊತೆ ಸುಮಾರು ಒಳ್ಳೆಯ ನೆನಪುಗಳಿವೆ. ಅದರಲ್ಲಿಯೂ ನಾವು ಊಟ ಮಾಡುವಾಗ ಕಳೆಯುತ್ತಿದ್ದ ಕಾಲ ನನ್ನಿಂದ ಯಾವತ್ತು ಮರೆಯಲು ಸಾಧ್ಯ ಇಲ್ಲ, ನಮ್ಮ ಪಾಲಿಗೆ ಲಂಚ್ ಬ್ರೇಕ್ ಅಂದರೆ ಹಾಸ್ಯದ ರಸದೌತಣವಾಗಿರುತ್ತಿತ್ತು, ಅದಕ್ಕೆ ಕಾರಣ ಶ್ರೀಧರ್ ನಾಯಕ್ ಅವರು ಅಷ್ಟೊಂದು ಲವಲವಿಕೆಯಿಂದ ಮಾತನಾಡಿಕೊಂಡು ಇರುತ್ತಿದ್ದರು, ಕೆಲವೊಮ್ಮೆ ವಿನಯಮ್ಮ ಮತ್ತು ನಾಗೇಶ್ ಯಾದವ್ ಸರ್ ಕೂಡ ಬಂದು ನಮ್ಮ ಜೊತೆ ಕುಳಿತು ಎಂಜಾಯ್ ಮಾಡ್ತಿದ್ದರು, ಅದೆಲ್ಲವನ್ನು ಮರೆಯಲು ಸಾಧ್ಯ ಇಲ್ಲ, ಆ ಸುಂದರವಾದ ಕ್ಷಣಗಳನ್ನು ನಾನು ಈಗ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ '' ಎಂದು ಸಿದ್ದು ಮೂಲಿಮನಿ ಹೇಳಿದ್ದಾರೆ.
ಊಟಕ್ಕಿದ್ದ ಸಾಂಬಾರನ್ನ ರಾತ್ರಿ ಮನೆಗೆ ತೆಗೆದುಕೊಂಡು ಹೋಗ್ತಿದ್ದರು
''ಶ್ರೀಧರ್ ಅವರದ್ದು ತುಂಬಾನೇ ಪಾಸಿಟಿವ್ ವ್ಯಕ್ತಿತ್ವವಾಗಿತ್ತು. ಆದರೆ ಅವರು ಒಬ್ಬರೇ ಇರ್ತಾ ಇದ್ದರು, ಕೆಲ ಒಮ್ಮೆ ನಮಗೆ ಊಟಕ್ಕೆ ತಂದಿದ್ದ ಸಾರನ್ನು ಅವರು ಡಬ್ಬಿಗೆ ಹಾಕಿಕೊಂಡು ರಾತ್ರಿ ಮನೆಗೆ ತಗೊಂಡು ಹೋಗ್ತಿದ್ದರು, ಅದನ್ನು ನೋಡಿದಾಗ ನಮಗೆ ಏನೋ ಮನೆ ಇದೆ, ಮನೆಯಲ್ಲಿದ್ದಾರೆ, ಹೋದ ತಕ್ಷಣ ಊಟ ಕೊಡ್ತಾರೆ, ಪಾಪಾ ಇವರಿಗೆ ಯಾರಿದಾರೆ ಇಷ್ಟೊಂದು ಕಷ್ಟ ಪಡ್ತಿದ್ದಾರಲ್ಲ ಎಂದು ತುಂಬಾನೇ ಬೇಜಾರಾಗುತ್ತಿತ್ತು, ಇಷ್ಟು ಕಷ್ಟದಲ್ಲಿಯೂ ಕೂಡ ನಗು ನಗುತ್ತಾ ಇರ್ತಾರಲ್ಲ, ಯಾರಿಗೂ ತೋರಿಸಿಕೊಳ್ಳದೇ ನಗು ನಗುತ್ತಾ ಕೆಲಸ ಮಾಡ್ತಾರಲ್ಲ ಎನ್ನುವ ಭಾವನೆ ನನ್ನಲ್ಲಿ ಬಂದಿತ್ತು'' ಎಂದು ಸಿದ್ದು ಹೇಳಿದ್ದಾರೆ.
ಶ್ರೀಧರ್ ನಾಯಕ್ಗೆ ಅವರಿಗೆ ಒಂಟಿತನ ಕಾಡುತ್ತಿತ್ತಾ ?
'' ನನಗೆ ಅವರ ವ್ಯೆಯಕ್ತಿಕ ಬದುಕಿನ ಕುರಿತು ಅಷ್ಟೊಂದು ಗೊತ್ತಿಲ್ಲ. ನಾವು ಅದೆಲ್ಲ ಕೇಳಲು ಕೂಡ ಹೋಗ್ತಿರಲಿಲ್ಲ. ಯಾಕೆಂದರೆ ನಾವು ನಮ್ಮ ದುಖ, ಕಷ್ಟಗಳನ್ನೆಲ್ಲ ಮರೆಯಲು ಅಂತಾನೇ ಶೂಟಿಂಗ್ ಸೆಟ್ಗೆ ಬರೋದು, ಏನೇ ನೋವು ಮನಸಿನಲ್ಲಿ ಇದ್ದರೂ ಕೂಡ ಅದನ್ನು ಮರೆತು ಕೆಲಸ ಮಾಡುವುದು ಮಾತ್ರ ನಮ್ಮ ಉದ್ದೇಶವಾಗಿರುತ್ತೆ, ಹೀಗಾಗಿ ಅವರ ವ್ಯೆಯಕ್ತಿಕ ಜೀವನದ ಕುರಿತು ನಾನು ಮಾತ್ರ ಅಲ್ಲ ನಮ್ಮ ತಂಡದಲ್ಲಿವರು ಯಾರು ಮಾಡಿಲ್ಲ, ಕೆದಕುತ್ತಿರಲಿಲ್ಲ ಎಂದು ಸಿದ್ದು ಹೇಳಿದ್ದಾರೆ.
ಮುಂದುವರೆದು ''ತುಂಬಾ ನೋವಾಗಿದ್ದರೆ ಅವರೇ ಬಂದು ನಮ್ಮ ಹತ್ರ ಹೇಳಿಕೊಳ್ತಿದ್ದರು, ನಮಗೆ ನೋವು ಆದಾಗ ನಾವು ಅವರ ಬಳಿ ಹೇಳಿಕೊಳ್ತಿದ್ವಿ, ಆದರೆ ಅವರು ಒಂಟಿಯಾಗಿ ಇದ್ದಿದ್ದಕ್ಕೆ ನನಗೂ ಬೇಸರ ಇದೆ, ಇದಕ್ಕೆಲ್ಲ ಅವರ ಒಂಟಿತನವೇ ಕಾರಣವಾಗಿ ಹೋಯ್ತಾ ಎನ್ನುವ ಪ್ರಶ್ನೆ ಕೂಡ ನನಗೂ ಈಗ ಕಾಡಲು ಶುರುವಾಗಿದೆ'' ಎಂದು ಸಿದ್ದು ಮೂಲಿಮನಿ ಫಿಲ್ಮಿ ಬೀಟ್ ಕನ್ನಡ ವೆಬ್ ಸೈಟ್ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











