SIIMA Awards 2024 Winners ; ತೆಲುಗು ಚಿತ್ರರಂಗದಲ್ಲಿಯೂ ಕನ್ನಡಿಗರ ಹವಾ, ಆಂಧ್ರದ ಬೆಸ್ಟ್ ವಿಲನ್ ಯಾರು..?
ಫಿಲ್ಮ್ ಫೇರ್ ಮತ್ತು ಸೈಮಾ ಈ ಎರಡು ಪ್ರಶಸ್ತಿಗಳನ್ನು ಭಾರತೀಯ ಚಿತ್ರರಂಗ ತುಂಬಾ ಗಂಭೀರವಾಗಿಯೇ ಪರಿಗಣಿಸುತ್ತೆ. ಕೆಲವರ ಪಾಲಿಗೆ ಇವೆರಡು ಪ್ರಶಸ್ತಿಗಳು ಯಾವ ಆಸ್ಕರ ಪ್ರಶಸ್ತಿಗಿಂತ ಕಡಿಮೆ ಇಲ್ಲ. ಹೀಗಾಗಿಯೇ ಈ ಎರಡರಲ್ಲಿ ಒಂದು ಪ್ರಶಸ್ತಿಯನ್ನೂ ಪಡೆದರು ಸಾಕು, ಚಿತ್ರರಂಗದಲ್ಲಿ ಅನೇಕರು ಕುಣಿದು ಕುಪ್ಪಳಿಸುತ್ತಾರೆ. ಸಂಭ್ರಮ ಪಡುತ್ತಾರೆ.
ಈ ಬಾರಿ ಕೂಡ ಇಂತಹದ್ದೇ ವಾತಾವರಣ ದುಬೈನಲ್ಲಿ ನಿರ್ಮಾಣಗೊಂಡಿದೆ. ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ವಿಶೇಷ ಅಂದರೆ ತೆಲುಗು ಚಿತ್ರರಂಗಕ್ಕೆ ನೀಡಲಾದ ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡಿಗರು ಕೂಡ ಮಿಂಚಿದ್ದಾರೆ. ಈ ಮೂಲಕ ಕನ್ನಡಿಗರು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಹೌದು. ಅಸಲಿಗೆ ನಿಮಗೆ ಗೊತ್ತಿರಲಿ.. ದಸರಾ ಚಿತ್ರದಲ್ಲಿನ ಅಭಿನಯಕ್ಕೆ ನಾನಿ ಈ ಬಾರಿಯ ಸೈಮಾದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರೆ, ಇದೇ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇನ್ನೂ ವಿಮರ್ಷಕರ ವಿಭಾಗದಲ್ಲಿ ಹಾಯ್ ನಾನ್ನಾ ಚಿತ್ರದಲ್ಲಿನ ಅಭಿನಯಕ್ಕೆ ಮೃಣಾಲ್ ಠಾಕೂರ್ ಕೂಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ಧಾರೆ. ಇವರನ್ನು ಹೊರತು ಪಡಿಸಿದರೆ ದಸರಾ ಚಿತ್ರದ ನಿರ್ದೇಶನಕ್ಕೆ ಶ್ರೀಕಾಂತ್ ಒಡೆಲಾ ಅತ್ಯುತ್ತಮ ನಿರ್ದೇಶಕ ಪ್ರಶಶ್ತಿಯನ್ನು ಪಡೆದರೆ, ಮೇಮು ಫೇಮಸ್ ಚಿತ್ರದಲ್ಲಿನ ಅಭಿನಯಕ್ಕೆ ಸುಮಂತ್ ಪ್ರಭಾಸ್ ಅತ್ಯುತ್ತಮ ಭರವಸೆಯ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಆದರೆ, ಈ ಬಾರಿಯ ವಿಶೇಷ ಅಂದರೆ ತೆಲುಗು ಚಿತ್ರರಂಗದಲ್ಲಿ ಕನ್ನಡಿಗರು ಕೂಡ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ತಮ್ಮ ಅಭಿನಯದ ಮೂಲಕ ಮತ್ತು ತಮ್ಮ ತಾಂತ್ರಿಕ ನೈಪುಣ್ಯದಿಂದ ಸಮಸ್ತ ಆಂಧ್ರ ಪ್ರದೇಶದ ಹೃದಯವನ್ನಷ್ಟೇ ಗೆಲ್ಲದೇ, ಸೈಮಾ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡಿದ್ಧಾರೆ.

ದಿಯಾ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ದೀಕ್ಷಿತ್ ಶೆಟ್ಟಿ ದಸರಾ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರೆ, ಕೆ.ಜಿ.ಎಫ್ ಚಿತ್ರದ ಮೂಲಕ ಬೆಳಕಿಗೆ ಬಂದು ಸಲಾರ್ ಸಾಮ್ರಾಜ್ಯವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದ ಭುವನ್ ಗೌಡ ಅತ್ಯುತ್ತಮ ಸಿನಿಮಾಟೊಗ್ರಫರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು ಪ್ಯಾನ್ ಇಂಡಿಯಾ ಕಾಲ. ಈ ಕಾಲದಲ್ಲಿ ಎಲ್ಲರಿಗೂ ನ್ಯಾಷನಲ್ ಸ್ಟಾರ್ ಆಗಬೇಕೆಂಬ ಹಂಬಲ. ಆದರೆ.. ಇದಕ್ಕೆ ತದ್ವಿರುದ್ದವಾಗಿ ನ್ಯಾಷನಲ್ ಖಳನಾಯಕನಾಗುವ ದಿಸೆಯಲ್ಲಿ ದುನಿಯಾ ವಿಜಯ್ ತೆಲುಗು ಚಿತ್ರರಂಗದತ್ತ ದಾಪುಗಾಲು ಇಟ್ಟಿದ್ದರು. ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯವನ್ನೂ ಕೂಡ ಗೆದ್ದಿದ್ದರು. ಮುಂದುವರೆದು ಈಗ ಸೈಮಾ ಪ್ರಶಸ್ತಿಯನ್ನೂ ಕೂಡ ಸಲಗ ವಿಜಯ್ ಕುಮಾರ್ ಪಡೆದಿದ್ದಾರೆ. ಬಾಲಯ್ಯ ಅಭಿನಯದ ವೀರ ನರಸಿಂಹ ರೆಡ್ಡಿ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಅತ್ಯುತ್ತಮ ಖಳನಟ ಪ್ರಶಸ್ತಿಯನ್ನೂ ವಿಜಯ್ ಪಡೆದಿದ್ದಾರೆ. ತೆಲುಗು ಚಿತ್ರರಂಗದ ದಿಗ್ಗಜರನ್ನೆಲ್ಲ ಹಿಂದಿಕ್ಕಿ ದುನಿಯಾ ವಿಜಯ್ ಈ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷ.
ಉಳಿದಂತೆ ಹಾಯ್ ನಾನ್ನಾ ಚಿತ್ರದ ನಿರ್ದೇಶಕ ಶೌರ್ಯ ಅತ್ಯುತ್ತಮ ಹೊಸ ನಿರ್ದೇಶಕ ಪ್ರಶಸ್ತಿಯನ್ನು ಪಡೆದರೆ, ಬೇಬಿ ಚಿತ್ರದ ನಿರ್ದೇಶನಕ್ಕೆ ಸಾಯಿ ರಾಜೇಶ್ ವಿಮರ್ಷಕರ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಯ್ ನಾನ್ನಾ ಚಿತ್ರದಲ್ಲಿನ ಅಭಿನಯಕ್ಕಾಗಿ ಕಿಯಾರಾ ಖನ್ನಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರೆ, ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಬೇಬಿ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಷಕರ ವಲಯದಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.


Click it and Unblock the Notifications











