ಕೊಟ್ಟ ಮಾತನ್ನ ಉಳಿಸಿಕೊಂಡ ನಿರ್ದೇಶಕ 'ಸಿಂಪಲ್' ಸುನಿ!
ಕಚಗುಳಿ ಇಡುವ ಡಿಸೈನ್ ಡಿಸೈನ್ ಡೈಲಾಗ್ಸ್ ಬರೆಯುವುದಕ್ಕೆ ಮಾತ್ರ ಅಲ್ಲ, ಆಡಿದ ಮಾತನ್ನ ಉಳಿಸಿಕೊಳ್ಳುವುದರಲ್ಲೂ ನಿರ್ದೇಶಕ 'ಸಿಂಪಲ್' ಸುನಿ ಕಟ್ಟುನಿಟ್ಟು.
ಇದಕ್ಕೆ ಒಂದು ಸಿಂಪಲ್ ಉದಾಹರಣೆ ಹೇಳ್ತೀವಿ ಕೇಳಿ...'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ರಿಲೀಸ್ ಆಗಿ ಹಿಟ್ ಆದ್ಮೇಲೆ ನಿರ್ದೇಶಕ ಸುನಿ ಅವರನ್ನ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರವೀಣ್ ಭೇಟಿ ಮಾಡಿದ್ದರು.

ಅಂದು, 'ನನ್ನ ಸಿನಿಮಾದಲ್ಲಿ ನಿಮ್ಮನ್ನ ಹೀರೋ ಮಾಡ್ತೀನಿ' ಅಂತ 'ಸಿಂಪಲ್' ಸುನಿ, ಪ್ರವೀಣ್ ಗೆ ಹೇಳಿದ್ದರಂತೆ. ಆಡಿದ ಮಾತನ್ನ ಉಳಿಸಿಕೊಳ್ಳಲು ಸುನಿ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದಲ್ಲಿ ಪ್ರವೀಣ್ ರಿಗೆ 'ಹೀರೋ' ಪಟ್ಟ ಕೊಟ್ಟಿದ್ದಾರೆ. [ಪ್ರವೀಣ್-ಮೇಘನಾ ಗಾಂವ್ಕರ್ ಜೊತೆ ಡಿನ್ನರ್ ಮಾಡುವ ಆಸೆ ಇದ್ಯಾ?]
ಕಿರುತೆರೆಯಲ್ಲಿ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದ ಪ್ರವೀಣ್ ಗೆ ಬೆಳ್ಳಿತೆರೆ ಮೇಲೆ ಮಿಂಚುವ ಕನಸಿತ್ತು. ಆ ಕನಸನ್ನ ನನಸಾಗಿಸಿದ್ದಾರೆ ನಿರ್ದೇಶಕ ಸುನಿ.

'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದಲ್ಲಿ ಪ್ರವೀಣ್ ರದ್ದು ಚೈಲ್ಡಿಶ್ ಹುಡುಗನ ಪಾತ್ರ. ಚಿಕ್ಕ ಹುಡುಗರ ಜೊತೆಗೆ ಬೆರೆಯುವ ಪ್ರವೀಣ್ ಜೀವನದಲ್ಲಿ ಸುರಸುಂದರಿ ಎಂಟ್ರಿ ಆದಾಗ 'ಲವ್' ಆಗುವುದೇ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'.
ಅಂದ್ಹಾಗೆ, ಪ್ರವೀಣ್ ಎದೆಯಲ್ಲಿ ಬಾಣ ಬಿಡುವ ಹುಡುಗಿ ನಾಯಕಿ ಮೇಘನಾ ಗಾಂವ್ಕರ್. ಆಶು ಭೆದ್ರ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈಗಾಗಲೇ ರಿಲೀಸ್ ಅಗಿರುವ ಚಿತ್ರದ ಟ್ರೈಲರ್ ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಮಾರ್ಚ್ 11 ರಂದು ತೆರೆ ಕಾಣಲಿದೆ.


Click it and Unblock the Notifications











