"ಫೈನಲ್ ಮ್ಯಾಚ್ ಸಿನ್ಮಾ ಸ್ಕ್ರಿಪ್ಟ್ ತರ ಇತ್ತು.. 2026ರಲ್ಲಿ ಕಪ್ ಯಾರು ಗೆಲ್ಬೇಕಂದ್ರೆ?"; ಸಿಂಪಲ್ ಸುನಿ
ಅಭಿಮಾನಿಗಳ 18 ವರ್ಷಗಳ ಕನಸು ನನಸಾಗಿದೆ. ಆರ್ಸಿಬಿ ಕಪ್ ಎತ್ತಿ ಹಿಡಿದಿದೆ. ವಿರಾಟ್ ಕೊಹ್ಲಿ ಮೈದಾನದಲ್ಲೇ ಭಾವುಕರಾಗಿಬಿಟ್ಟರು. ಎಲ್ಲೆಲ್ಲೂ ಆರ್ಸಿಬಿ ವಿಜಯೋತ್ಸವ ಜೋರಾಗಿದೆ. ಕನ್ನಡದ ಕೆಲ ತಾರೆಯರು ಅಹಮಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
ಕನ್ನಡ ಚಿತ್ರ ನಿರ್ದೇಶಕ ಸಿಂಪಲ್ ಸುನಿ ಪತ್ನಿ ಸಮೇತರಾಗಿ ಅಹಮಬಾದ್ಗೆ ತೆರಳಿ ರೋಚಕ ಪಂದ್ಯವನ್ನು ಆಸ್ವಾದಿಸಿದ್ದಾರೆ. ಆ ಸಂತಸವನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ. ಸುನಿ ಕ್ರಿಕೆಟ್ ಪ್ರೀತಿ ಅದರಲ್ಲೂ ಆರ್ಸಿಬಿ ಕಟ್ಟಾ ಅಭಿಮಾನಿ ಎನ್ನುವುದು ಎಲ್ಲರಿಗೂ ಗೊತ್ತೇಯಿದೆ. ಟ್ವಿಟರ್ನಲ್ಲಿ ಬಹಳ ಆಕ್ಟೀವ್ ಆಗಿರುವ ಸುನಿ ಪ್ರತಿ ಐಪಿಎಲ್ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಅಂತಿಮವಾಗಿ ಆರ್ಸಿಬಿ ಕಪ್ ನಮ್ದು ಎಂದು ಸಾಧಿಸಿ ತೋರಿಸಿದ್ದಕ್ಕೆ ಸುನಿ ಸಂತಸ ವ್ಯಕ್ತಪಡಿಸಿದ್ದಾರೆ.

"ಬಹಳ ಖುಷಿಯಾಯಿತು. ಈ ಕ್ಷಣಗಳಿಗಾಗಿ 18 ವರ್ಷ ಕಾದಿದ್ದೆವು. ಕೊನೆ ಓವರ್ನಲ್ಲಿ ಶಶಾಂಕ್ ಎರಡು ಬಾಲ್ ಡಾಟ್ ಮಾಡಿದಾಗಲೇ ಬಹಳ ಖುಷಿಯಾಯಿತು. ಇನ್ನು ಪಂಜಾಬ್ ಗೆಲ್ಲೋಕೆ ಸಾಧ್ಯವಿಲ್ಲ ಎಂದಾಗ ಮೈ ಜುಮ್ ಎನಿಸಿತು. ಅದೇ ಸಮಯದಲ್ಲಿ ಮೈದಾನದಲ್ಲಿದ್ದ ಕೊಹ್ಲಿಯನ್ನು ತೋರಿಸಿದರು. ಆತನ ಕಣ್ಣಲ್ಲಿ ನೀರು ಬರ್ತಿತ್ತು. ನಾವು ಪಂದ್ಯ ವೀಕ್ಷಿಸಲು ಕೂತಿದ್ದ ಗ್ಯಾಲರಿ ಮುಂಭಾಗದಲ್ಲೇ ಕೊಹ್ಲಿ ಇದ್ದಿದ್ದು. ಆ ಕ್ಷಣ ಮರೆಯೋಕೆ ಸಾಧ್ಯವಿಲ್ಲ" ಎಂದು ಸುನಿ ಮೆಲುಕು ಹಾಕಿದ್ದಾರೆ.
ಕಳೆದ 17 ವರ್ಷಗಳಿಂದ ಈ ಸಲ ಕಪ್ ನಮ್ದೆ ಎಂದು ಫ್ಯಾನ್ಸ್ ಹೇಳುತ್ತಿದ್ದರು. ಆದರೆ ಸಾಧ್ಯವಾಗುತ್ತಿರಲಿಲ್ಲ. ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದರು. ಆದರೆ ಈ ಬಾರಿ ಬಹಳ ನಿರೀಕ್ಷೆ ಇತ್ತು ಎಂದು ಸುನಿ ಅಭಿಪ್ರಾಯಪಟ್ಟಿದ್ದಾರೆ. "ಈ ಬಾರಿ ಬಹಳ ಹೋಪ್ಸ್ ಇತ್ತು. ಈ ಸಲ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಸಿಕ್ಕಿತ್ತು. ಪ್ರತಿ ಬಾರಿ ಬೇರೆ ಬೇರೆ ಆಟಗಾರರು ಪಡೆದಿದ್ದರು. ತಂಡ ಸಮತೋಲನದಿಂದ ಕೂಡಿತ್ತು. ಅಷ್ಟ ದಿಕ್ಕುಗಳು ಕೂಡಿ ಬರುತ್ತದೆ ಎನ್ನುವಂತೆ 18 ಎನ್ನುವುದು ಎಲ್ಲಾ ಕಡೆಯಿಂದ ಜೊತೆಯಾಗಿ ಬಂದಿತ್ತು. ಫೈನಲ್ ನಡೆದ ಇನ ಕೂಡಿಸಿದರೆ 18, 18ನೇ ವರ್ಷ, 18ನೇ ನಂಬರ್ ಜೆರ್ಸಿ ಎಲ್ಲವೂ ಅದರಲ್ಲಿದೆ. ಕೊಹ್ಲಿ ಏಕದಿನ, ಟೆಸ್ಟ್ ಆವೃತ್ತಿಗೆ ನಿವೃತ್ತಿ ಘೋಷಿಸಿದ್ದರು. ಎಲ್ಲಿ ಆರ್ಸಿಬಿ ಕಪ್ ಗೆಲ್ಲದೇ ಐಪಿಎಲ್ಗೂ ಬೈ ಹೇಳ್ತಾರೋ ಎನ್ನುವ ಭಯ ಇತ್ತು. ತುಂಬ ಜನ ಅಣಕವಾಡುತ್ತಿದ್ದರು. ಈ ಸಲ ಕಪ್ ಲಾಲಿಪಪ್, ನಾವು 5 ಸಲ ಕಪ್ ಗೆದ್ದವರು ಎನ್ನುತ್ತಿದ್ದರು. ಅಂತಹವರಿಗೆಲ್ಲಾ ತಕ್ಕ ಉತ್ತರ ಕೊಟ್ಟಂತಾಗಿದೆ" ಎಂದು ಸುನಿ ವಿವರಿಸಿದ್ದಾರೆ.
"ಆರ್ಸಿಬಿ ಟಾಸ್ ಸೋತಾಗ, ಸಾಲ್ಟ್ ಔಟ್ ಆದಾಗ ಬೇಸರವಾಗಿತ್ತು. 190 ರನ್ಗಳ ಇನ್ನಿಂಗ್ಸ್ ಅಷ್ಟೇನು ಖುಷಿ ತರಲಿಲ್ಲ. ಅಹಮದಾಬಾದ್ನಲ್ಲಿ 200 ರನ್ಗಳನ್ನು ಸುಲಭವಾಗಿ ಚೇಸ್ ಮಾಡಬಹುದು ಅಂತ ನೋಡಿದ್ದೆವು. ಮಳೆ ಬಂದಿದ್ದರಿಂದ ನಮ್ಮದು 20 ರನ್ ಕಮ್ಮಿ ಆಗಿತ್ತು. ಅವರ ಬ್ಯಾಟಿಂಗ್ ನೋಡಿದಾಗ ಸಿನಿಮಾ ಸ್ಕ್ರಿಪ್ಟ್ ತರ ಉಲ್ಟಾ ಇತ್ತು. ಆರ್ಸಿಬಿ ಓಪನಿಂಗ್ ಚೆನ್ನಾಗಿರಲಿಲ್ಲ, ನಡುವೆ ಚೆನ್ನಾಗಿ ರನ್ ಬಂತು. ಅವರ ಓಪನಿಂಗ್ ಚೆನ್ನಾಗಿತ್ತು. ಆದರೆ ಶ್ರೇಯಸ್ ಅಯ್ಯರ್ ಔಟ್ ಆದ್ಮೇಲೆ ಅವರ ಬ್ಯಾಟಿಂಗ್ ಕುಸಿಯಿತು. ಒಟ್ಟಾರೆ ಪಂದ್ಯ ಚೆನ್ನಾಗಿತ್ತು. ಮನೆಯಲ್ಲಿ ಮ್ಯಾಚ್ ನೋಡಿದವರು, ಗ್ರೌಂಡ್ನಲ್ಲಿ ಮ್ಯಾಚ್ ನೋಡಿದವರು ಅತ್ತಿದ್ದಾರೆ, ಒಟ್ಟಾರೆ ಮರೆಯಲಾಗ ಮ್ಯಾಚ್" ಎಂದು ಸುನಿ ತಿಳಿಸಿದ್ದಾರೆ.
18ನೇ ಸೀಸನ್ನಲ್ಲಿ ಆರ್ಸಿಬಿ ಚಾಂಪಿಯನ್ ಆಗಿದೆ. ಮುಂದಿನ ವರ್ಷ ಕಪ್ ಯಾರದ್ದು ಎನ್ನುವ ಚರ್ಚೆ ಕೂಡ ಶುರುವಾಗಿದೆ. "ಮುಂದಿನ ವರ್ಷ 2026, ಕೂಡಿದರೆ 1 ಬರುತ್ತೆ, ನಾವು ಈಗ ನಂಬರ್ 1 ಸ್ಥಾನದಲ್ಲಿದ್ದೇವೆ. ಆದರೂ ನಾವು ಪಟ್ಟ ನೋವು ನೋಡಿದರೆ ಪಂಜಾಬ್ ಅಥವಾ ಡೆಲ್ಲಿ ತಂಡ ಕಪ್ ಗೆಲ್ಲಲಿ ಅನಿಸುತ್ತೆ. ಆದರೂ ಆರ್ಸಿಬಿ ಅನ್ನು ಬಿಟ್ಟುಕೊಡೋಕೆ ಆಗೊಲ್ಲ. ಮುಂದಿನ ವರ್ಷ ಬೆಂಗಳೂರಿನಲ್ಲಿ ಫೈನಲ್ ಪಂದ್ಯ. ಅಹಮದಾಬಾದ್ನಲ್ಲಿ ಗೆದ್ದಂಗೆ ಇಲ್ಲಿ ಗೆದ್ದರೆ ಆ ಸಂಭ್ರಮಾಚರಣೆ ಇನ್ನು ಜೋರಾಗಿರುತ್ತದೆ" ಎಂದು ಸುನಿ ಹೇಳಿದ್ದಾರೆ.
ನಿನ್ನೆ(ಜೂನ್ 3) ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಸೀಸನ್ 18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ಸಿಬಿ ತಂಡ ಎದುರಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಟಿದಾರ್ ನೇತೃತ್ವದ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಕಲೆ ಹಾಕಿತ್ತು. 3ನೇ ಪ್ಲೇ ಆಫ್ ಪಂದ್ಯದಲ್ಲಿ 203 ರನ್ಗಳ ಟಾರ್ಗೆಟ್ ಅನ್ನು ಒಂದು ಓವರ್ ಬಾಕಿ ಇರುವಂತೆ ಪಂಜಾಬ್ ತಂಡ ಮೀರಿಸಿ ಫೈನಲ್ ಪ್ರವೇಶಿಸಿತ್ತು. ಹಾಗಾಗಿ 190 ರನ್ ಗುರಿ ಸಾಕಾಗಲ್ಲ ಎಂದೇ ಕೆಲವರು ಭಾವಿಸಿದ್ದರು.
ಆರ್ಸಿಬಿ ಬೌಲರ್ಗಳ ಅದ್ಭುತ ಬೌಲಿಂಗ್ ಪ್ರದರ್ಶನದಿಂದ 20 ಓವರ್ಗಳಲ್ಲಿ 184 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು. 4 ಓವರ್ಗಳಲ್ಲಿ ಕೃಣಾಲ್ ಪಾಂಡ್ಯ 17 ರನ್ ನೀಡಿ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು.


Click it and Unblock the Notifications











