ಮೆದುಳು ರಕ್ತಸ್ರಾವದಿಂದ ಬಳಲಿದ ಖ್ಯಾತ ಗಾಯಕಿ ಬಾಂಬೆ ಜಯಶ್ರೀ
ಖ್ಯಾತ ಕರ್ನಾಟಕ ಸಂಗೀತದ ಹಾಡುಗಾರ್ತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಾಂಬೆ ಜಯಶ್ರೀ ಅವರು ಬ್ರಿಟನ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ವರದಿಗಳು ತಿಳಿಸಿವೆ. ಹೌದು, ಸಂಗೀತ ಕಾರ್ಯಕ್ರಮ ನೀಡಲು ಲಂಡನ್ಗೆ ತೆರಳಿದ್ದ ಬಾಂಬೆ ಜಯ ಶ್ರೀ ತಲೆಸುತ್ತಿ ಬಿದ್ದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ವೈದ್ಯರು ಪರೀಕ್ಷಿಸಿದ ಬಳಿಕ ಬಾಂಬೆ ಜಯಶ್ರೀ ರಕ್ತನಾಳ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿರುವ ವಿಷಯ ತಿಳಿದುಬಂದಿದೆ. ಸದ್ಯ ಜಯಶ್ರೀ ಅವರಿಗೆ ಅಗತ್ಯವಿದ್ದ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಹಾಗೂ ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿದ್ದಾರೆ ಎಂದು ಜಯಶ್ರೀ ಕುಟುಂಬಸ್ಥರು ತಿಳಿಸಿದ್ದಾರೆ.

1964ರಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಜನಿಸಿದ ಜಯಶ್ರೀ ಅವರಿಗೆ 59 ವರ್ಷ ವಯಸ್ಸಾಗಿದ್ದು, ಹಾಡುಗಾರಿಕೆಯ ಜತೆಗೆ ಸಂಗೀತ ಹಾಗೂ ನಾಟ್ಯದಲ್ಲಿಯೂ ಸಹ ಪರಿಣಿತಿ ಹೊಂದಿದ್ದಾರೆ. ತಮ್ಮ ಹಾಡುಗಾರಿಕೆಗೆ ಪದ್ಮಶ್ರೀ ಜತೆಗೆ ಸಂಗೀತ ಚೂಡಾಮಣಿ, ಸಂಗೀತ ಕಲಾಸಾರಥಿ, ಕಲೈಮಾಮಣಿ ಹಾಗೂ ಡಾಕ್ಟರೇಟ್ ಗೌರವಗಳಿಗೂ ಸಹ ಬಾಂಬೆ ಜಯಶ್ರೀ ಭಾಜನರಾಗಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ಬಾಂಬೆ ಜಯಶ್ರೀ ಅವರು ಪ್ಯಾನ್ ಇಂಡಿಯಾ ಸಿಂಗರ್ ಆಗಿ ಯಶಸ್ಸು ಸಾಧಿಸಿದ್ದು, 70 ತಮಿಳು ಹಾಡುಗಳು, 30 ತೆಲುಗು ಹಾಡುಗಳು, 14 ಮಲಯಾಳಂ ಹಾಡುಗಳು, 7 ಕನ್ನಡ ಹಾಡುಗಳು ಹಾಗೂ 7 ಹಿಂದಿ ಹಾಡುಗಳಿಗೆ ದನಿ ನೀಡಿದ್ದಾರೆ.
ಕನ್ನಡದಲ್ಲಿ ಎಕ್ಸ್ ಕ್ಯೂಸ್ ಮಿ ಚಿತ್ರದ ಪ್ರೀತ್ಸೆ ಅಂತ ಪ್ರಾಣ ತಿನ್ನೊ, ಡೆಡ್ಲಿ ಸೋಮ ಚಿತ್ರದ ಉಸಿರೇ ಉಸಿರೇ, ಜೊತೆ ಜೊತೆಯಲಿ ಚಿತ್ರದ ಸುಮ್ಮನೆ ಸುಮ್ಮನೆ, ರೈಟ್ ಆದ್ರೆ ಚಿತ್ರದ ಮನಸ್ಸೀಗ ಮಾತನ್ನ, ಮೇಘವೇ ಮೇಘವೇ ಚಿತ್ರದ ಹುಡುಗ ಹುಡುಗ, ಕಾರಂಜಿ ಚಿತ್ರದ ಈ ತಂಪು ಗಾಳಿ ಹಾಗೂ ಜನನಿ ಚಿತ್ರದ ಸುವ್ವಾಲಿ ಸುವ್ವಲಾಲಿ ಹಾಡುಗಳನ್ನು ಬಾಂಬೆ ಜಯ ಶ್ರೀ ಹಾಡಿದ್ದಾರೆ.


Click it and Unblock the Notifications











