ಇಂದು ಬಿಡುಗಡೆ ಆಗುತ್ತಿವೆ ಆರು ಕನ್ನಡ ಸಿನಿಮಾ: ಯಾವುದು? ಎಲ್ಲಿ?
ಕೊರೊನಾ ಮೂರನೇ ಅಲೆಯ ಕಾರಣದಿಂದಾಗಿ ಚಿತ್ರಮಂದಿರಗಳು ಬಂದ್ ಆಗಿ ಕನ್ನಡ ಚಿತ್ರರಂಗ ಮತ್ತೊಮ್ಮೆ ಹಿಂದಡಿ ಇಟ್ಟಿತ್ತು. ಈಗ ಚಿತ್ರಮಂದಿರಗಳು ಮತ್ತೆ ಮೊದಲಿನಂತೆ 100% ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಸಿನಿಮಾಗಳು ಮತ್ತೆ ತೆರೆಗೆ ಬರುತ್ತಿವೆ.
ಇಂದು ಒಂದೇ ದಿನ ಬರೋಬ್ಬರಿ ಆರು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಈ ಆರು ಸಿನಿಮಾಗಳು ಇಂದು ಬಿಡುಗಡೆ ಆಗುತ್ತಿದ್ದು, ಚಿತ್ರಮಂದಿರಗಳು ಪ್ರೇಕ್ಷಕರ ನಿರೀಕ್ಷೆಯಲ್ಲಿ ಸಜ್ಜಾಗಿ ನಿಂತಿವೆ.
ಕಳೆದ ಕೆಲವು ವಾರಗಳಿಂದ ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು. ನಂತರ 50% ಆಕ್ಯುಪೆನ್ಸಿ ಅವಕಾಶ ನೀಡಲಾಯ್ತಾದರೂ ಆ ಸಮಯದಲ್ಲಿ ಕನ್ನಡದ 'ಒಂಬತ್ತನೆ ದಿಕ್ಕು' ಹೊರತಾಗಿ ಯಾವುದೇ ಹೊಸ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಈಗ 100% ಆಕ್ಯುಪೆನ್ಸಿಗೆ ಚಿತ್ರಮಂದಿರಗಳಿಗೆ ಅವಕಾಶ ನೀಡಲಾಗಿದ್ದು ಒಟ್ಟೊಟ್ಟಿಗೆ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇಂದು ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

'ಲವ್ ಮಾಕ್ಟೆಲ್ 2'
ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ, ಮಿಲನಾ ಒಟ್ಟಿಗೆ ಕತೆ ಬರೆದು, ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಕೊರೊನಾಗೆ ಮುನ್ನ 2020ರಲ್ಲಿ ಬಿಡುಗಡೆ ಆಗಿದ್ದ ಇದೇ ಸಿನಿಮಾದ ಮೊದಲ ಭಾಗ ದೊಡ್ಡ ಹಿಟ್ ಆಗಿತ್ತು. ಈಗ ಅದೇ ಸಿನಿಮಾದ ಮುಂದುವರೆದ ಭಾಗ ಬಿಡುಗಡೆ ಆಗುತ್ತಿದೆ. ಗಾಂಧಿನಗರದ ತ್ರಿವೇಣಿ, ರಾಜಾಜಿನಗರದ ನವರಂಗ್, ವೀರೇಶ್ ಸಿನಿಮಾಸ್ ಮಾಗಡಿ ರಸ್ತೆಯ ಮುಖ್ಯ ಥಿಯೇಟರ್ಗಳ ಜೊತೆಗೆ ಮಲ್ಟಿಫ್ಲೆಕ್ಸ್ಗಳಲ್ಲಿ ಹಲವು ಶೋಗಳು ಸಿನಿಮಾಕ್ಕೆ ದೊರೆತಿವೆ.

'ಫೋರ್ ವಾಲ್ಸ್'
ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕೌಟುಂಬಿಕ ಕತೆಯುಳ್ಳ 'ಫೋರ್ ವಾಲ್ಸ್' ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ. ಎಸ್ಎಸ್ ಸಜ್ಜನ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹೆಣ್ಣು ಮಕ್ಕಳನ್ನು ಶಿಸ್ತಿನಿಂದ ಬೆಳೆಸುವ ಕಾಪಾಡುವ ತಂದೆಯ ಪಾತ್ರ ಅಚ್ಯುತ್ ಅವರದ್ದು. ಅಚ್ಯುತ್ ಅವರು ಬಹಳ ಕಲರ್ಫುಲ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಂಧಿನಗರದ ಅಭಿನಯ ಚಿತ್ರಮಂದಿರ, ಬನಶಂಕರಿಯ ಕಾಮಾಕ್ಯ ಚಿತ್ರಮಂದಿರ ಸೇರಿದಂತೆ ಹಲವು ಮಲ್ಟಿಫ್ಲೆಕ್ಸ್ಗಳಲ್ಲಿ ಬಿಡುಗಡೆ ಆಗುತ್ತಿದೆ.

'ಒಪ್ಪಂದ'
ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅರ್ಜುನ್ ಸರ್ಜಾ ನಾಯಕ ಪಾತ್ರದಲ್ಲಿ ನಟಿಸಿರುವ ಬಹುಭಾಷಾ ಸಿನಿಮಾ 'ಒಪ್ಪಂದ' ಇಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ತೆಲುಗಿನ ನಟ ಜೆಡಿ ಚಕ್ರವರ್ತಿ, ಬಾಲಿವುಡ್ನ ಅಮೀರ್ ಖಾನ್ ಸಹೋದರ ಫೈಸಲ್ ಖಾನ್, ಸೋನಿ ಚರಿಶ್ಟ, ವಿಶ್ವನಾಥ್ ಇನ್ನೂ ನಟರಿದ್ದಾರೆ. ಸಿನಿಮಾವು ಗಾಂಧಿನಗರದ ಅನುಪಮ ಚಿತ್ರಮಂದಿರ, ರಾಜಾಜಿನಗರದ ನವರಂಗ್ (ಒಂದು ಶೋ), ಕೆಆರ್ಪುರಂನ ಶ್ರೀಕೃಷ್ಣ ಸೇರಿದಂತೆ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ ಬಿಡುಗಡೆ ಕಂಡಿದೆ.

'ಪ್ರೀತಿಗಿಬ್ಬರು'
ತಿರುಪತಿಯ ಬಿಲ್ಡರ್ ಬಾಲಾಜಿ ಬೋರ್ಲಿಗೊರ್ಲ ನಿರ್ಮಾಣ ಮಾಡಿರುವ 'ಪ್ರೀತಿಗಿಬ್ಬರು' ಎಂಬ ಹೊಸಬರ ಸಿನಿಮಾ ಇಂದೇ ಬಿಡುಗಡೆ ಆಗುತ್ತಿದೆ. ಹಳ್ಳಿಯಲ್ಲಿ ನಡೆವ ಪ್ರೇಮಕತೆಯನ್ನು ಈ ಸಿನಿಮಾ ಹೊಂದಿದ್ದು, ಹಲವು ರಂಗಭೂಮಿ ಕಲಾವಿದರು ಸಿನಿಮಾದಲ್ಲಿದ್ದಾರೆಂದು ಚಿತ್ರತಂಡ ಹೇಳಿಕೊಂಡಿದೆ. ನಾಯಕನಾಗಿ ಮೋಹನ್ ಹಾಗೂ ನಾಯಕಿಯಾಗಿ ನಿರೋಷ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರು ಖಳನಾಯಕಿಯರು ಇದ್ದಾರೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

'ರೌಡಿ ಬೇಬಿ'
'ರೌಡಿ ಬೇಬಿ' ಕನ್ನಡ ಸಿನಿಮಾ ಇಂದು ಬಿಡುಗಡೆ ಆಗುತ್ತಿದ್ದು ಈ ಸಿನಿಮಾದಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನಾಗಿ ಎಸ್ಎಸ್ ರವಿ ಗೌಡ ನಟಿಸಿದ್ದಾರೆ. ಸಿನಿಮಾವನ್ನು ಇ ಕೃಷ್ಣ ನಿರ್ದೇಶನ ಮಾಡಿದ್ದು ಅರಮಾನ್ ಮೆರುಗು ಸಂಗೀತ ನೀಡಿದ್ದಾರೆ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ನೋವು ಇದ್ದೇ ಇರುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ. ಸಿನಿಮಾವು ನವರಂಗ್ನಲ್ಲಿ ಒಂದು ಶೋ, ಮಾಗಡಿ ರಸ್ತೆಯ ವೀರೇಶ್ನಲ್ಲಿ ಎರಡು ಶೋಗ, ಬನಶಂಕರಿಯ ಕಾಮಾಕ್ಯನಲ್ಲಿ ಎರಡು ಶೋಗಳಲ್ಲಿ ಪ್ರಸಾರವಾಗಲಿದೆ. ಹೊರತುಪಡಿಸಿ ನಗರದ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶಿತಗೊಳ್ಳುತ್ತಿದೆ.

'ಇದೇ ಅಂತರಂಗ ಶುದ್ಧಿ'
ಕುಮಾರ ದತ್ತ ನಿರ್ದೇಶನದ 'ಇದೇ ಅಂತರಂಗ ಶುದ್ಧಿ' ಕನ್ನಡ ಸಿನಿಮಾ ಇಂದು ಬಿಡುಗಡೆ ಆಗಿದೆ. ಕೇವಲ ಮಲ್ಟಿಫ್ಲೆಕ್ಸ್ಗಳಲ್ಲಿ ಮಾತ್ರವೇ ಈ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಬಹಳ ಕಡಿಮೆ ಶೋ ಲಭಿಸಿವೆ. ಸಿನಿಮಾದಲ್ಲಿ ಆರ್ಯವರ್ಧನ್ ನಾಯಕರಾಗಿ ನಟಿಸಿದ್ದಾರೆ. ಪಯಣದ ಕತೆಯನ್ನು ಸಿನಿಮಾ ಹೊಂದಿದೆ. ಪಯಣದ ನಡುವೆ ಯಾರು ಯಾರನ್ನು ಭೇಟಿಯಾಗುತ್ತಾರೆ, ಏನೆಲ್ಲ ಆಗುತ್ತದೆ ಎಂಬುದು ಕಥಾವಸ್ತು.


Click it and Unblock the Notifications











