ದುನಿಯಾ ವಿಜಿ-ನಾಗರತ್ನ ಸಂಧಾನಕ್ಕೆ 6 ಸೂತ್ರಗಳು
'ಕೆಟ್ಟಮೇಲೆ ಬುದ್ಧಿಬಂತು' ಅನ್ನುವ ಮಾತು ದುನಿಯಾ ವಿಜಿ ದಂಪತಿ ಬಾಳಲ್ಲಿ ಅಕ್ಷರಶಃ ನಿಜವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿರಸವನ್ನು ಬೀದಿಗೆ ತಂದು ರಂಪಾಟ ಮಾಡಿಕೊಂಡಿದ್ದ ದುನಿಯಾ ವಿಜಿ-ನಾಗರತ್ನ ಕಡೆಗೂ ಒಂದಾಗಿ ಬಾಳುವ ಮನಸ್ಸು ಮಾಡಿದ್ದಾರೆ.
''ಒಡೆದ ಮನಸ್ಸುಗಳು ಈಗಲಾದರೂ ಒಂದಾಗಿವೆಯಲ್ಲಾ'' ಅಂತ ದುನಿಯಾ ವಿಜಿ ಅಭಿಮಾನಿಗಳು ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಡುತ್ತಿದ್ದಾರೆ. ಇತ್ತ ದುನಿಯಾ ವಿಜಿ ಮತ್ತು ನಾಗರತ್ನ ಕೂಡ ಸಿಹಿಹಂಚಿಕೊಂಡು ನಗುಮೊಗದಲ್ಲಿದ್ದಾರೆ. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]
ಮಾಧ್ಯಮಗಳಲ್ಲಿ ಪ್ರತ್ಯೇಕವಾಗಿ ಕೂತು ಒಬ್ಬರನ್ನೊಬ್ಬರು ಛೀಮಾರಿ ಹಾಕುತ್ತಾ, ಕೆಸರೆರಚುತ್ತಿದ್ದ ಈ ಜೋಡಿಯ ಭಿನ್ನಾಭಿಪ್ರಾಯ ಇಂದು ಮಧ್ಯಸ್ತಿಕೆ ಕೇಂದ್ರದಲ್ಲಿ ಇತ್ಯರ್ಥವಾಗಿದೆ. ಇದೇ ಮಧ್ಯಸ್ತಿಕೆ ಕೇಂದ್ರದಲ್ಲಿ ಈ ಹಿಂದೆ ಹಲವಾರು ಬಾರಿ ಸಂಧಾನಕ್ಕೆ ಯತ್ನಿಸಿ, ಬುದ್ಧಿವಾದ ಹೇಳಿದ್ದರೂ ತಮ್ಮ ಪಟ್ಟನ್ನು ಸಡಿಲಿಸದ ವಿಜಿ, ಇಂದು ಏಕಾಏಕಿ ನಾಗರತ್ನ ಜೊತೆ ಜೀವನ ನಡೆಸಲು ನಿರ್ಧರಿಸಿರುವುದಕ್ಕೆ ಕಾರಣವೇನು? [ದುನಿಯಾ ವಿಜಿ-ನಾಗರತ್ನ ದಾಂಪತ್ಯಕ್ಕೆ ತಾರ್ಕಿಕ ಅಂತ್ಯ]
ಇತ್ತೀಚೆಗಷ್ಟೇ ತಿಂಗಳಿಗೆ 30,000 ರೂಪಾಯಿಯನ್ನ ಜೀವನಾಂಶವಾಗಿ ನಾಗರತ್ನಗೆ ವಿಜಿ ನೀಡಬೇಕು ಅಂತ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಇದಾದ ನಂತರ ಇಂತಹ ಒಳ್ಳೆಯ ಬೆಳವಣಿಗೆ ಆಗಿರುವುದರ ಹಿಂದೆ ಬಲವಾದ ಕಾರಣಗಳಿವೆ ಅನ್ನುತ್ತಿವೆ ಮೂಲಗಳು. [ದುನಿಯಾ ವಿಜಯ್, ನಾಗರತ್ನ ಸಂಧಾನ ವಿಫಲ]

ಜೀವನಾಂಶ ನೀಡಲು ಆಗಲ್ಲ..!
ಮೊನ್ನೆಯಷ್ಟೇ ಕೋರ್ಟ್ ನೀಡಿದ್ದ ಆದೇಶದ ಪ್ರಕಾರ ದುನಿಯಾ ವಿಜಿ ನಾಗರತ್ನಗೆ ತಿಂಗಳಿಗೆ 30,000 ರೂಪಾಯಿ ಜೀವನೋಪಾಯಕ್ಕೆ ನೀಡಬೇಕು. ತಿಂಗಳಿಗೆ ಮೂವತ್ತು ಸಾವಿರ ಅಂತ ಲೆಕ್ಕ ಹಾಕಿದ್ರೆ, ವರ್ಷಕ್ಕೆ ಅದು ದೊಡ್ಡ ಮೊತ್ತ. ಇದರ ಮಧ್ಯೆ ತಮ್ಮ ಮೂವರು ಮಕ್ಕಳನ್ನು (ಮೋನಿಷಾ, ಮೋನಿಕಾ, ಸಾಮ್ರಾಟ್) ದುನಿಯಾ ವಿಜಿ ಸಾಕಬೇಕು. ತಂದೆ-ತಾಯಿಯ ಜವಾಬ್ದಾರಿಯೂ ವಿಜಿ ಮೇಲಿರುವುದರಿಂದ ವೃಥಾ ನಾಗರತ್ನಗೆ ಜೀವನಾಂಶ ನೀಡಲು ವಿಜಿ ಮನಸ್ಸು ಒಪ್ಪಿಲ್ಲ. [ನಟ ದುನಿಯಾ ವಿಜಯ್ ಸುದ್ದಿಗೋಷ್ಠಿ ಹೈಲೈಟ್ಸ್]

ಕೋರ್ಟ್ ನಲ್ಲಿ ಪರಿಹಾರ ಕೇಳಿದ್ರೆ..?
ಒಂದು ವೇಳೆ ಕೇಸ್ ಇತ್ಯರ್ಥವಾಗಿ ಸತಿ-ಪತಿಗಳು ಕಾನೂನುಬದ್ಧವಾಗಿ ಬೇರಾಗುವ ಪರಿಸ್ಥಿತಿ ಎದುರಾದರೆ, ದುನಿಯಾ ವಿಜಿ ದೊಡ್ಡ ಮೊತ್ತವನ್ನು ನಾಗರತ್ನಗೆ ಪರಿಹಾರದ ರೂಪದಲ್ಲಿ ಕಟ್ಟಿಕೊಡಬೇಕಾಗುತ್ತೆ. ಇದು ತಮ್ಮಿಂದ ಅಸಾಧ್ಯ ಅಂತ ಮನಗಂಡಿರುವ ವಿಜಿ ಮಧ್ಯಸ್ತಿಕೆ ಕೇಂದ್ರದಲ್ಲಿ ಹಠ ಬಿಟ್ಟು ತಲೆಬಾಗಿದ್ದಾರೆ.

ನಾಗರತ್ನ ಹೆಸರಲ್ಲಿದೆ ಸ್ವಂತ ಮನೆ
ಈ ಮಧ್ಯೆ ವಿಜಿ ಪ್ರೀತಿಯಿಂದ ಕಟ್ಟಿರುವ 'ದುನಿಯಾ ಋಣ' ಕೂಡ ಪತ್ನಿ ನಾಗರತ್ನ ಹೆಸರಲ್ಲೇ ಇದೆ. ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಆಭರಣಗಳೂ ನಾಗರತ್ನ ಜೊತೆಯಲ್ಲೇ ಇವೆ. ಕೇವಲ ಸಿಟ್ಟಿಗೆ ಬುದ್ಧಿ ಕೊಟ್ಟು ಇವನ್ನೆಲ್ಲಾ ಕಳೆದುಕೊಳ್ಳುವ ಬದಲು, ಕೂಡಿ ಬಾಳಿದರೆ ಸ್ವರ್ಗ ಸುಖ ಅಂತ ವಿಜಿ ರಾಜಿ ಸೂತ್ರಕ್ಕೆ ಒಪ್ಪಿಗೆ ನೀಡಿದ್ದಾರೆ. [ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ 25 ಕಾರಣಗಳು]

ಮಕ್ಕಳ ಭವಿಷ್ಯ ಮುಖ್ಯ
ಈಗಾಗ್ಲೇ 'ದುನಿಯಾ ಡ್ರಾಮಾ' ಜಗಜ್ಜಾಹೀರಾಗಿದೆ. ವಾಸ್ತವವನ್ನ ಅರಿಯುವ ಶಕ್ತಿಯಿರುವ ತಮ್ಮ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಅಂತ ವಿಜಿ ಮತ್ತು ನಾಗರತ್ನ ಒಟ್ಟಾಗಿ ಬಾಳಲು ನಿರ್ಧರಿಸಿದ್ದಾರೆ.

ಅತ್ತೆ-ಮಾವವನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ
''ನನ್ನ ತಾಯಿಯನ್ನ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾಳೆ'' ಅಂತ ನಾಗರತ್ನ ವಿರುದ್ಧ ವಿಚ್ಛೇದನ ಕೋರಿ ವಿಜಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಆಗಿದ್ದನ್ನೆಲ್ಲವನ್ನು ಮರೆತು, ಇನ್ಮುಂದೆ ವಿಜಿ ತಂದೆ-ತಾಯಿಯನ್ನ ತನ್ನ ಸ್ವಂತ ಅಪ್ಪ-ಅಮ್ಮನಂತೆ ನೋಡಿಕೊಳ್ಳುವ ಭರವಸೆಯನ್ನ ನಾಗರತ್ನ ನೀಡಿದ್ದಾರೆ.

ಸಿನಿಮಾ ವರ್ಚಸ್ಸಿಗೆ ಧಕ್ಕೆ
ಸಿನಿಮಾ, ನಟನೆ ಬಗ್ಗೆ ಸುದ್ದಿ ಮಾಡಬೇಕಾದ ದುನಿಯಾ ವಿಜಿ, ಡೈವೋರ್ಸ್ ವಿಷ್ಯದಿಂದ ಸದ್ದು ಮಾಡುತ್ತಿರುವುದು ಅವರ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿದೆ. ಈ ವೇಳೆ ಮಾಧ್ಯಮಗಳಲ್ಲೂ ನಾಗರತ್ನ ವಿಜಿ ಮೇಲೆ ದೋಷಾರೋಪ ಮಾಡಿರುವುದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಬಾರದು. 'ಸಂಸಾರದ ಗುಟ್ಟು ಬೀದಿ ರಟ್ಟಾಗಬಾರದು' ಅಂತ ದಂಪತಿ ಒಂದಾಗುವುದಕ್ಕೆ ನಿರ್ಧರಿಸಿದ್ದಾರೆ.

ಸುಖ ಸಂಸಾರಕ್ಕೆ 6 ಸೂತ್ರಗಳು
ಬೇರಾಗುವುದಕ್ಕೆ ಒಂದು ಕಾರಣ ಬೇಕಾದ್ರೆ, ಒಂದಾಗಿ ಬಾಳುವುದಕ್ಕೆ ಹತ್ತು ಹಲವು ಕಾರಣಗಳು ಸಿಗುತ್ತವೆ. ಹಾಗೆ, ಕತ್ತಲು ಕವಿದಿದ್ದ ದುನಿಯಾ ವಿಜಿ-ನಾಗರತ್ನ ಬಾಳಲ್ಲಿ ಮತ್ತೆ ಬೆಳಕು ಮೂಡೋಕೆ ಆರು ಕಾರಣಗಳು ಸಿಕ್ಕಿವೆ. ಅದೇನೇಯಿರ್ಲಿ, ಈಗ ಒಂದಾಗಿರುವ ಈ ದಂಪತಿಯ ಬಾಳು ಇನ್ಮುಂದೆ ಸುಖಕರವಾಗಿರಲಿ
ಅನ್ನುವುದೇ ಅವರ ಅಭಿಮಾನಿಗಳ ಆಶಯ.


Click it and Unblock the Notifications











