ದರ್ಶನ್ ನಟನೆಯ 'ಸ್ನೇಹನಾ ಪ್ರೀತಿನಾ' ಸಿನಿಮಾ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ
ಸ್ಯಾಂಡಲ್ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನರಾಗಿದ್ದಾರೆ. ಇಂದು (ನವೆಂಬರ್ 19) ಬೆಳಗ್ಗೆ ಹೃದಯಾಘಾತದಿಂದ ಶಾಹುರಾಜ್ ಶಿಂಧೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಾಹುರಾಜ್ ಶಿಂಧೆ ಹಠಾತ್ ಅಗಲಿಕೆಯ ಸುದ್ದಿ ಚಿತ್ರರಂಗಕ್ಕೆ ಆಘಾತತಂದಿದೆ.
2007ರಲ್ಲಿ ರಿಲೀಸ್ ಆದ 'ಸ್ನೇಹನಾ ಪ್ರೀತಿನಾ' ಸಿನಿಮಾ ಮೂಲಕ ಶಾಹುರಾಜ್ ಶಿಂಧೆ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದರು. ಚಿತ್ರದಲ್ಲಿ ನಟ ಆದಿತ್ಯ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಈ ಸಿನಿಮಾ ಬಳಿಕ ಮತ್ತೆ ದರ್ಶನ್ ಕಾಲ್ ಶೀಟ್ ಪಡೆದು, 'ಅರ್ಜುನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 2008ರಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಬಳಿಕ 2011ರಲ್ಲಿ ಪ್ರೇಮ ಚಂದ್ರಮ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದರು. ಬಳಿಕ ಶಾಹುರಾಜ್ ಶಿಂಧೆ ಸಿನಿಮಾರಂಗದಿಂದ ಕಾಣೆಯಾಗಿದ್ದರು.

ಸುಮಾರು 9 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದ ಶಾಹುರಾಜ್ ಶಿಂಧೆ 'ರಂಗ ಮಂದಿರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದುರದೃಷ್ಟವೆಂದರೆ ಈ ಸಿನಿಮಾ ರಿಲೀಸ್ ಆಗುವ ಮೊದಲೇ ಶಾಹುರಾಜ್ ಶಿಂಧೆ ಇಹಲೋಕತ್ಯಜಿಸಿದ್ದಾರೆ.
'ರಂಗ ಮಂದಿರ' ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದಲ್ಲಿ ರಂಗಾಯಣ ರಘು, ತೆಲುಗು ನಟ ಸುಮನ್, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಶಾಹುರಾಜ್ ಶಿಂಧೆ ನಿಧನಕ್ಕೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಗೀಯತ ನಿರ್ದೇಶಕ ಅಜನೀಶ್ ಲೋಕನಾಥ್, 'ಶಾಹುರಾಜ್ ಶಿಂಧೆ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ದೇವರು ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ' ಎಂದು ಕೇಳಿಕೊಂಡಿದ್ದಾರೆ.


Click it and Unblock the Notifications











