ಧ್ರುವ 'ಮಾರ್ಟಿನ್' ಚಿತ್ರದ ಬಗ್ಗೆ ಕೆಟ್ಟದಾಗಿ ರಿವ್ಯೂ; ಕೊನೆಗೆ ಕ್ಷಮೆಯಾಚನೆ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. ಅದ್ಧೂರಿ ಮೇಕಿಂಗ್, ಆಕ್ಷನ್ ಹಾಗೂ ಧ್ರುವ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಮೊದಲ ದಿನ ಮಾರ್ನಿಂಗ್ ಶೋ ವಿಚಾರದಲ್ಲಿ ಒಂದಷ್ಟು ಗೊಂದಲ ಮೂಡಿತ್ತು. ಬಳಿಕ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಓಕೆ ಓಕೆ ಚೆನ್ನಾಗಿದೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಚೆನ್ನಾಗಿಲ್ಲ ಎಂದು ಷರಾ ಬರೆದುಬಿಟ್ಟಿದ್ದಾರೆ. ಒಟ್ಟಾರೆ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.

'ಮಾರ್ಟಿನ್' ಹಾಗೂ ಅರ್ಜುನ್ ಸಕ್ಸೇನಾ ಎನ್ನುವ ಎರಡು ಪಾತ್ರಗಳಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಭರ್ಜರಿ ಮನರಂಜನೆ ಒದಗಿಸುವಂತಿದೆ. ಕೆಲವು ಸನ್ನಿವೇಶಗಳು ಬಹಳ ಚೆನ್ನಾಗಿದೆ ಎನಿಸಿದರೆ ಮತ್ತೆ ಕೆಲವು ಸನ್ನಿವೇಶಗಳನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಿದೆ. ಕೆಲ ತಪ್ಪುಗಳ ಹೊರತಾಗಿಯೂ ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಒಮ್ಮೆ ನೋಡಬಹುದು ಎಂದು ಹೇಳುವವರ ಸಂಖ್ಯೆ ಜಾಸ್ತಿಯಿದೆ.
ಅಂದಹಾಗೆ 'ಮಾರ್ಟಿನ್' ಸಿನಿಮಾ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ಧಾರೆ. ಧ್ರುವ ಸರ್ಜಾ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಬೇಕೆಂದೇ ಸಿನಿಮಾ ಬಗ್ಗೆ ಅತಿಯಾಗಿ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬುಕ್ಮೈ ಶೋನಲ್ಲಿ ಬುಕ್ಕಿಂಗ್ ಚೆನ್ನಾಗಿ ಆಗುತ್ತಿದೆ. ನಾಳೆ(ಅಕ್ಟೋಬರ್ 13) ಚಿತ್ರಕ್ಕೆ ನಿರ್ಣಾಯಕವಾಗಲಿದೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸುಧಾಕರ್ ಗೌಡ ಎಂಬುವವರು ಕೆಟ್ಟದಾಗಿ ರಿವ್ಯೂ ಮಾಡಿ ಇದೀಗ ಕ್ಷಮೆ ಕೇಳಿದ್ದಾರೆ.
ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಸುಧಾಕರ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದವರು. 'ಮಾರ್ಟಿನ್' ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಚಡಾ ಸಿನಿಮಾ, ಚಿತ್ರತಂಡವೇ ಥಿಯೇಟರ್ಗಳಲ್ಲಿ ಫೇಕ್ ಬುಕ್ಕಿಂಗ್ ಮಾಡಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ದಿಢೀರನೆ ಸುಧಾಕರ್ ಮಾಡಿದ್ದ 'ಮಾರ್ಟಿನ್' ರಿವ್ಯೂ ವೀಡಿಯೋ ವೈರಲ್ ಆಗಿತ್ತು.
ಸದ್ಯ ಸುಧಾಕರ್ ಗೌಡ ಮತ್ತೊಂದು ವೀಡಿಯೋ ಮಾಡಿ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. 'ಮಾರ್ಟಿನ್' ಸಿನಿಮಾ ನೋಡಿ ನನಗೆ ಅನ್ನಿಸಿದ ಅಭಿಪ್ರಾಯವವನ್ನು ರಿವ್ಯೂ ವೀಡಿಯೋದಲ್ಲಿ ಹೇಳಿದ್ದೆ. ಆದರೆ ಅದು ಕೆಲವರಿಗೆ ಬೇಸರ ತಂದಿದೆ. ಹಾಗಾಗಿ ನಾನು ಅವರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಉದಯ್ ಕೆ ಮೆಹ್ತಾ 'ಮಾರ್ಟಿನ್' ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. 75 ಕೋಟಿ ರೂ.ಗೂ ಅಧಿಕ ಮೊತ್ತದಲ್ಲಿ ಸಿನಿಮಾ ತೆರೆಗೆ ತರಲಾಗಿದೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಸತ್ಯ ಹೆಗಡೆ ಛಾಯಾಗ್ರಹಣ ಕೂಡ ಮೆಚ್ಚುವಂತಿದೆ. ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ.
ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ಚಿಕ್ಕಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ 'ಮಾರ್ಟಿನ್' ಚಿತ್ರದಲ್ಲಿದೆ. 240 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿತ್ತು. ಧ್ರುವ ಸರ್ಜಾ 3 ವರ್ಷಗಳಿಂದ 'ಮಾರ್ಟಿನ್' ಚಿತ್ರಕ್ಕೆ ಕೆಲಸ ಮಾಡಿದ್ದರು. ಕೊನೆಗೂ ಸಿನಿಮಾ ತೆರೆಗೆ ಬಂದಿದೆ. ಪ್ರೇಕ್ಷಕರನ್ನು ರಂಜಿಸುತ್ತಿದೆ. ಮೊದಲ ದಿನವೇ ಸಿನಿಮಾ 7 ಕೋಟಿ ರೂ. ಗಳಿಕೆ ಕಂಡಿರುವ ಅಂದಾಜಿದೆ.


Click it and Unblock the Notifications











