ರೇಣುಕಾಸ್ವಾಮಿ ಕೇಸ್ ನೆನಪಿಸುವ ಘಟನೆ; ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಹಲ್ಲೆ
ಯುವಕನೊಬ್ಬನನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ವೀಡಿಯೋ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ಕುಶಾಲ್ ಎಂಬ ಯುವಕನನ್ನು 8-10 ಮಂದಿ ಯುವಕರು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಕಳೆದ ವರ್ಷ ದೇಶಾದ್ಯಂತ ಸದ್ದು ಮಾಡಿತ್ತು. ನಟಿ ಪವಿತ್ರಾ ಗೌಡಗೆ
ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿದ್ದನು. ಅದಕ್ಕೆ ಪ್ರತಿಯಾಗಿ ನಟ ದರ್ಶನ್ ಹಾಗೂ ಆತನ ಸ್ನೇಹಿತರು ಸೇರಿ ರೇಣುಕಾಸ್ವಾಮಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ ಹಲವರು ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ. ಇದೀಗ ಸೋಲದೇವನಹಳ್ಳಿಯ ಈ ಕಿಡ್ನ್ಯಾಪ್ ಪ್ರಕರಣ ಕೂಡ ರೇಣುಕಾಸ್ವಾಮಿ ಪ್ರಕರಣ ನೆನಪಿಸುವಂತಿದೆ.

ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದಂತೆ ಈ ಪ್ರಕರಣದಲ್ಲಿ ಕೂಡ ಕುಶಾಲ್ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮರ್ಮಾಂಗ ತುಳಿದು, ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ. "ಇದು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ ತರ ಆಗತ್ತೆ" ಎಂದು ಹಲ್ಲೆ ನಡೆಸಿರುವ ಯುವಕರು ಮಾತನಾಡಿರುವುದು ವೀಡಿಯೋದಲ್ಲಿ ದಾಖಲಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿಬಂದಾಗ ಕೆಲವರು ಇದೇ ಆತಂಕ ವ್ಯಕ್ತಪಡಿಸಿದ್ದರು. ಸ್ಟಾರ್ ನಟನೊಬ್ಬ ಇಂತಹ ಕೃತ್ಯದಲ್ಲಿ ಭಾಗಿ ಆಗಿರುವುದು ಕೆಟ್ಟ ಸಂದೇಶ ರವಾನಿಸುತ್ತದೆ ಎನ್ನಲಾಗಿತ್ತು.
ಇದೀಗ ಥೇಟ್ ರೇಣುಕಾಸ್ವಾಮಿ ಹಲ್ಲೆ ನೀಡಿದಂತೆ ಕುಶಾಲ್ ಎಂಬಾತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟಿರುವುದು ಆಘಾತ ತಂದಿದೆ. ಒಬ್ಬ ಹುಡುಗಿಯ ವಿಚಾರಕ್ಕೆ ಇಷ್ಟೆಲ್ಲಾ ರಾದ್ಧಾಂತ ನಡೆದಿದೆ. ಯುವತಿಗೆ ಕುಶಾಲ್ ಅಶ್ಲೀಲ ಸಂದೇಶ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೇಣುಕಾಸ್ವಾಮಿ ಪ್ರಕರಣಕ್ಕೆ ಈ ಪ್ರಕರಣದವನ್ನು ಹೋಲಿಸಿ ಜನ ಮಾತನಾಡುತ್ತಿದ್ದಾರೆ.
ಕುಶಾಲ್ ಕಾಲೇಜಿಗೆ ಹೋಗುವಾಗ ಯುವತಿಯೊಬ್ಬಳ ಜೊತೆ ಪ್ರೀತಿ ಮೂಡಿತ್ತು. 2 ವರ್ಷಗಳ ಬಳಿಕ ಆ ಪ್ರೀತಿ ಮುರಿದು ಬಿದ್ದಿತ್ತು. ಬಳಿಕ ಯುವತಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ಕುಶಾಲ್ಗೆ ಗೊತ್ತಾಗಿದೆ. ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಆಕೆ ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ. ಕೋಪಗೊಂಡ ಆತ ತನ್ನ ಸ್ನೇಹಿತರ ಜೊತೆ ಸೇರಿ ಕುಶಾಲ್ನನ್ನು ಅಪಹರಿಸಿದ್ದಾನೆ. ಮಾತನಾಡಿ ಎಲ್ಲಾ ಬಗೆಹರಿಸಿಕೊಳ್ಳೋಣ ಎಂದು ಕರೆಸಿ ಬಳಿಕ ಕಾರಿನಲ್ಲಿ ಅಪಹರಿಸಿದ್ದಾರೆ.
ಕುಶಾಲ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ತಳಿಸಿದ್ದಾರೆ ಎನ್ನಲಾಗಿದೆ. ಬಟ್ಟೆ ಬಿಚ್ಚಿಸಿ ಚಿತ್ರಹಿಂಸೆ ನೀಡಿದ್ದಾರೆ. ಮರ್ಮಾಂಗ ವಿಕೃತಿ ಮೆರೆದಿದ್ದಾರೆ. ಅದನ್ನೆಲ್ಲಾ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ಸಂಬಂಧ ಈಗಾಗಲೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸೇರಿ ಶಿವಶಂಕರ್, ಶಶಾಂಕ್ ಗೌಡ, ಹೇಮಂತ್, ಯಶ್ವಂತ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕುಶಾಲ್ನನ್ನು ಯುವಕರು ಥಳಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಅಪಹರಣ, ಹಲ್ಲೆ ಘಟನೆಯನ್ನು ಹೀಗೆ ಯುವಕರು ಸ್ಫೂರ್ತಿಯಾಗಿ ತೆಗೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ಕಳೆದ ವರ್ಷ ಜೂನ್ 8ರಂದು ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಮರುದಿನ ಆತನ ಮೃತದೇಹ ಪತ್ತೆ ಆಗಿತ್ತು. ಜೂನ್ 11ರಂದು ನಟ ದರ್ಶನ್ ಬಂಧನವಾಗಿತ್ತು. 6 ತಿಂಗಳ ಬಳಿಕ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದರು.


Click it and Unblock the Notifications











