ಡಾ.ವಿಷ್ಣು ಸ್ಮಾರಕಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು
ಡಾ.ವಿಷ್ಣು ಅವರ ಸ್ಮಾರಕಕ್ಕೆ ಗುದ್ದಲಿ ಪೂಜೆ ಎಂಬ ಸಂಭ್ರಮ ಎಲ್ಲೆಡೆ..!! ಆದ್ರೆ ಡಾ.ವಿಷ್ಣು ಅವರನ್ನು ಸ್ಥಳಾಂತರಿಸಲಾಗುತ್ತದೆ ಎಂಬ ವಿಷಯ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕೊನೆಗೂ ಸ್ಮಾರಕ ನಿರ್ಮಾಣವಾಗುತ್ತಿದೆ ಎಂಬ ಖುಷಿಯಲ್ಲಿ ಅಮಾಯಕ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸ್ಥಳಾಂತರ ಎಂಬುದು ಭಾವನಾತ್ಮಕ ವಿಷಯ ಎಂಬುದನ್ನು ಯಾರೂ ಯಾಕೆ ಯೋಚಿಸುತ್ತಿಲ್ಲ?
ಹೇಗೋ ಮುಗಿದರೆ ಸಾಕು ಎಂಬಂತೆ ಯಾಕೆ ಎಲ್ಲರೂ ಯೋಚಿಸುತ್ತಿದ್ದಾರೆ. ಜೀವನಪೂರ್ತಿ ನೋವುಂಡ ವ್ಯಕ್ತಿಗೆ ಬದುಕಿದ್ದಷ್ಟೂ ಕಾಲವೂ ಪ್ರಶಸ್ತಿಗಳಿಲ್ಲ, ಗೌರವಗಳಿಲ್ಲ, ನೆಮ್ಮದಿಯಂತೂ ಸಿಗಲೇ ಇಲ್ಲ. ಸಾವಿನಲ್ಲೂ ನೆಮ್ಮದಿ ಇಲ್ಲವೇ? [ನವೆಂಬರ್ 6ರಂದು ವಿಷ್ಣು ಸ್ಮಾರಕಕ್ಕೆ ಶಂಕುಸ್ಥಾಪನೆ]

ಕರುನಾಡಿನ ಸಾಂಸ್ಕೃತಿಕ ರಾಯಭಾರಿ ಡಾ.ವಿಷ್ಣುವಿಗಾಗಿ ಒಂದು ಕುಟುಂಬದ ಜಗಳವನ್ನು ಪರಿಹರಿಸಲು ಸಾಧ್ಯವಾಗದ ಸ್ಥಿತಿಗೆ ನಮ್ಮ ಸರ್ಕಾರ ತಲುಪಿಬಿಟ್ಟಿತೆ? ಕೌಟುಂಬಿಕ ಜಗಳಕ್ಕೆ ಪರಿಹಾರ ಕೊಡಲಾಗದ ಸರ್ಕಾರದಿಂದ ಪ್ರಜೆಗಳು ಏನನ್ನು ನಿರೀಕ್ಷಿಸಬಹುದು?
ತನ್ನ ಗೆಳೆಯನ ಸಮಾಧಿಗೆ ಇಂತಹ ದುಃಸ್ಥಿತಿ ಬಂದರೂ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿರುವ ಸಚಿವ ಮತ್ತು ಕುಚುಕು ಅಂಬಿಯವರನ್ನು ಗೌರವಿಸುವುದೆಂತು? ತನಗೆ ಎಲ್ಲವೂ ಡಾ.ವಿಷ್ಣು ಅವರೇ ಎಂದು ಹೇಳಿಕೊಳ್ಳುವ ಸುದೀಪ್ ಅವರು ಈ ವಿಷಯದ ಬಗ್ಗೆ ತಾಳಿರುವ ನಿಲುವೇನು?
ಡಾ.ವಿಷ್ಣು ವಿಷಯದಲ್ಲಿ ಅಭಿಮಾನಿಗಳನ್ನು ದೂರವಿಟ್ಟು "ಡಾ.ವಿಷ್ಣು ಕರುನಾಡಿನ ಆಸ್ತಿಯಲ್ಲ, ಕೇವಲ ಕುಟುಂಬದ ಆಸ್ತಿ ಎಂಬಂತೆ ಬಿಂಬಿಸುತ್ತಿರುವವ ಭಾರತಿ ಅಮ್ಮನವರ ಉದ್ದೇಶವೇನು? ಡಾ.ವಿಷ್ಣು ಅವರ ಮತ್ತು ಅವರ ಚಿತ್ರಗಳ ಹೆಸರುಗಳನ್ನು ಬಳಸಿಕೊಳ್ಳುತ್ತಿರುವ ಯಶ್, ಹೊಸಬರಾದ ಖೈದಿ ಮತ್ತು ದಾದಾ ಚಿತ್ರತಂಡಗಳು ಈ ವಿಷಯದಲ್ಲಿ ಏನೆನ್ನುತ್ತಾರೆ?
ಡಾ.ವಿಷ್ಣು ವಿಷಯದಲ್ಲಿ ಸದಾ ಮಲತಾಯಿ ಧೋರಣೆ ತಾಳುವ "ಕನ್ನಡ ಚಲನಚಿತ್ರ (ಕೆಲವರ) ವಾಣಿಜ್ಯ ಮಂಡಳಿಗೆ ಈಗ ಖುಷಿಯಾಗುತ್ತಿದೆಯೇ? (ಲೇಖಕರು ಹವ್ಯಾಸಿ ಬರಹಗಾರರು ಮತ್ತು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪುನಗರ)


Click it and Unblock the Notifications











