ಅಪ್ಪು ಸಮಾಧಿ ಮುಂದೆ 'ಬನಾರಸ್' ಟೈಟಲ್ ಲಾಂಚ್ ಮಾಡ್ಬೇಡ ಒಳ್ಳೆದಾಗಲ್ಲ ಅಂದಿದ್ರು: ಝೈದ್ ಖಾನ್
ನಿರ್ದೇಶಕ ಜಯತೀರ್ಥ ನಿರ್ದೇಶನದ ಹಾಗೂ ಝೈದ್ ಖಾನ್ ಮತ್ತು ಸೋನಲ್ ಮೊಂಥೆರೊ ಅಭಿನಯದ ಬನಾರಸ್ ಚಿತ್ರ ನಿನ್ನೆ ( ನವೆಂಬರ್ 4 ) ತೆರೆ ಕಂಡಿದೆ. ಒಂದೊಳ್ಳೆ ಪ್ರೇಮಕತೆಯನ್ನು ಟೈಮ್ ಟ್ರಾವೆಲ್ ಕಾನ್ಸೆಪ್ಟ್ನೊಂದಿಗೆ ಹೇಳಿರುವ ಜಯತೀರ್ಥ ಈ ಬಾರಿಯೂ ಕನ್ನಡ ಸಿನಿರಸಿಕರಿಗೆ ಹೊಸದೊಂದು ಚಿತ್ರವನ್ನು ನೀಡಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಬಿಲ್ಡಪ್ ಹಾಗೂ ಗಿಮಿಕ್ಗಳಿಂದ ವೈರಲ್ ಆಗಬೇಕು ಎನ್ನುವ ಕಡೆ ಮುಖಮಾಡದ ಝೈದ್ ಖಾನ್ ಪಕ್ಕಾ ಕಂಟೆಂಟ್ ಇರುವ ಚಿತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಖುಷಿಯ ವಿಚಾರಗಳಲ್ಲಿ ಒಂದು.
ಇನ್ನು ಚಿತ್ರ ವೀಕ್ಷಿಸಿದ ಸಿನಿ ರಸಿಕರು ಒಳ್ಳೆಯ ಸಿನಿಮಾ, ಇಂತಹ ವಿಭಿನ್ನ ಚಿತ್ರಗಳು ಹಾಗೂ ಪ್ರಯತ್ನ ಕನ್ನಡ ಚಿತ್ರರಂಗಕ್ಕೆ ಅಗತ್ಯವಾದದ್ದು ಎಂಬ ಅಭಿಪ್ರಾಯಗಳನ್ನು ವ್ಯಕ್ರಪಡಿಸಿದ್ದಾರೆ. ಇನ್ನು ಝೈದ್ ಖಾನ್ ಅನುಭವವಿರುವ ನಟನ ಹಾಗೆ ಅಭಿನಯಿಸಿದ್ದು ಎಲ್ಲಿಯೂ ಸಹ ಇದು ಆತನ ಪ್ರಥಮ ಚಿತ್ರ ಎನಿಸುವುದೇ ಇಲ್ಲ. ನಟನೆ ಜತೆಗೆ ಡಾನ್ಸ್ ಹಾಗೂ ಆಕ್ಷನ್ ಕೂಡ ಅಚ್ಚುಕಟ್ಟಾಗಿ ಮಾಡಿರುವ ಝೈದ್ ಖಾನ್ ಚಂದನವನದ ಭರವಸೆಯ ನಟ ಎನಿಸಿಕೊಂಡಿದ್ದಾರೆ.
ಹೀಗೆ ಎಲ್ಲೆಡೆ ಪ್ರಶಂಸೆ ಪಡೆದುಕೊಳ್ಳುತ್ತಿರುವ ಝೈದ್ ಖಾನ್ ಚಿತ್ರ ಬಿಡುಗಡೆ ಮುನ್ನ ನಮ್ಮ ಫಿಲ್ಮಿಬೀಟ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ಚಿತ್ರದ ಬಗ್ಗೆ ಹಾಗೂ ತಮಗೆ ಕನ್ನಡ ನಟರು ಯಾವ ರೀತಿ ಬೆಂಬಲ ನೀಡಿದ್ರು ಎಂಬುದರ ಬಗ್ಗೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿಯೂ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಝೈದ್ ಖಾನ್ ಆಡಿದ ಮಾತುಗಳು ವಿಶೇಷವಾಗಿವೆ.

ಜಗಳ ಮಾಡಿ ಟೈಟಲ್ ಲಾಂಚ್ ಮಾಡಿಸ್ತಿದ್ದೆ
'ನಮ್ಮ ಚಿತ್ರದ ಶೀರ್ಷಿಕೆ ರೆಡಿಯಾದಾಗ ಯಾರ ಬಳಿ ಲಾಂಚ್ ಮಾಡಿಸಬೇಕು ಎಂಬ ಪ್ರಶ್ನೆ ಎದ್ದಿತ್ತು. ಆಗ ನಾನು ಪುನೀತ್ ಸರ್ ಅವರ ಕೈಯಲ್ಲಿ ಲಾಂಚ್ ಮಾಡಿಸಲೇಬೇಕು ಎಂದು ಎಂದಿದ್ದೆ. ನಿರ್ದೇಶಕರು ಅಪ್ಪು ಸರ್ ಮಾಡ್ತಾರಾ ಎಂದಿದ್ರು, ಯಾಕ್ ಮಾಡಲ್ಲ ಅವರ ಮನೆಗೆ ಹೋಗಿ ಜಗಳ ಮಾಡಿ ಬೇಕದ್ರೂ ಮಾಡಿಸ್ತೀನಿ ಅಷ್ಟು ಸಲುಗೆ ಇದೆ ನನಗೆ' ಎಂದು ಝೈದ್ ಖಾನ್ ತಿಳಿಸಿದರು.

ಅಪ್ಪು ಸರ್ಗೆ ಕಾಲ್ ಮಾಡಿ ಮಾತಾಡಿದ್ದೆ
ಮಾತು ಮುಂದುವರಿಸಿದ ಝೈದ್ ಖಾನ್ ಈ ಕುರಿತಾಗಿ ಅಪ್ಪು ಸರ್ಗೆ ಸಂಜೆ ಕರೆ ಮಾಡಿದ್ದೆ, ಮೊದಲಿಗೆ ಅವರು ಕರೆ ಸ್ವೀಕರಿಸಲಿಲ್ಲ, ನಂತರ ಅವರೇ ಕರೆ ಮಾಡಿ ಮಾತನಾಡಿದರು ಆಗ ನೀವೇ ಟೈಟಲ್ ಲಾಂಚ್ ಮಾಡಬೇಕು ಎಂದಿದ್ದೆ, ಅವರೂ ಸಹ ಸಮ್ಮತಿಸಿದ್ದರು, ಆದರೆ ದುರಾದೃಷ್ಷ ನಾನು ಮಾತಾನಾಡಿದ ಮರುದಿನವೇ ಅವರು ನಮ್ಮನ್ನೆಲ್ಲಾ ಬಿಟ್ಟು ಹೋದರು ಎಂದು ಬೇಸರ ಹೊರಹಾಕಿದರು.

ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಿದೆ, ಹಲವರು ಬೇಡ ಅಂದಿದ್ರು
ಅಪ್ಪು ಸರ್ ಕೈನಲ್ಲೇ ಬನಾರಸ್ ಚಿತ್ರದ ಟೈಟಲ್ ಲಾಂಚ್ ಮಾಡಿಸಬೇಕು ಎಂದಿದ್ದೆ, ಅವರು ಹೋದಮೇಲೂ ಆ ಹಠವನ್ನು ನಾನು ಬಿಡಲಿಲ್ಲ ಎಂದ ಝೈದ್ ಖಾನ್ ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಿದೆವು ಎಂದು ತಿಳಿಸಿದರು. ಇನ್ನು ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಬೇಡ, ಸಮಾಧಿ ಮುಂದೆ ಮಾಡಿದರೆ ನೆಗೆಟಿವ್ ಆಗುತ್ತೆ, ಯಾರೂ ಸಹ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಲ್ಲ ಎಂದು ಹಲವರು ಹೇಳಿದರು, ಆದರೆ ನಾನು ಯಾರ ಮಾತನ್ನೂ ಕೇಳದೇ ಅಲ್ಲಿಯೇ ಹೋಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ ಎಂದು ಝೈದ್ ಖಾನ್ ತಿಳಿಸಿದರು. ಅಲ್ಲಿ ಲಾಂಚ್ ಮಾಡಿದ್ರೆ ಒಳ್ಳೆದಾಗಲ್ಲ ಅಂದ್ರು, ನಂತರ ಆ ಸ್ಥಳದಲ್ಲೇ ಮದುವೆ ರೀತಿಯ ಶುಭ ಕಾರ್ಯಗಳೇ ನಡೆಯಲಿಲ್ವಾ ಎಂದು ಝೈದ್ ಖಾನ್ ಹೇಳಿದರು.

ಟ್ರೈಲರ್ ನೋಡಿ ಕರೆ ಮಾಡಿದ್ರು ಶಿವಣ್ಣ
ಇನ್ನು ಇದೇ ಸಂದರ್ಶನದಲ್ಲಿ ಶಿವ ರಾಜ್ಕುಮಾರ್ ಸಹ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಝೈದ್ ಖಾನ್ ಹಂಚಿಕೊಂಡರು. ಟ್ರೈಲರ್ ನೋಡಿದ ಬಳಿಕ ಕರೆಮಾಡಿದ್ದ ಶಿವಣ್ಣ ಸಖತ್ತಾಗಿದೆ, ಕುತೂಹಲಕಾರಿಯಾಗಿದೆ, ನಾನೇನೋ ನೀನು ಮಚ್ಚು ಹಿಡ್ಕೊಂಡು ಬರ್ತಿಯ ಅನ್ಕೊಂಡಿದ್ದೆ ಆದರೆ ಈ ರೀತಿ ಕಂಟೆಂಟ್ ಓರಿಯೆಂಟೆಡ್ ಚಿತ್ರ ಮಾಡಿದ್ದು ನಿಜಕ್ಕೂ ಗಮನ ಸೆಳೆದಿದೆ ಎಂದು ಹೊಗಳಿದರು ಎಂದು ಝೈದ್ ಖಾನ್ ಹೇಳಿದರು.


Click it and Unblock the Notifications











