ನನ್ನನ್ನು ವಿಲನ್ನಂತೆ ಬಿಂಬಿಸಿದರು, ಆದರೆ ನನಗೆ ಬೇಸರವಿಲ್ಲ: ಸುದೀಪ್
ಕೆಲವು ತಿಂಗಳುಗಳ ಹಿಂದಿನಿಂದ ಸುದೀಪ್ ವಿರುದ್ಧ ಅಹೋರಾತ್ರ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಒಂದನ್ನು ನಡೆಸುತ್ತಿದ್ದಾರೆ. ಸುದೀಪ್, ಜೂಜಿಗೆ ಉತ್ತೇಜನ ನೀಡುವ ಜಾಹೀರಾತಿನಲ್ಲಿ ನಟಿಸಿದ್ದಾರೆ ಎಂಬುದು ಅವರ ಆಕ್ಷೇಪಣೆ.
ಇಷ್ಟು ದಿನ ಈ ಬಗ್ಗೆ ಮಾತನಾಡದಿದ್ದ ಸುದೀಪ್, ಇದೀಗ ಯಾರೊಬ್ಬರ ಹೆಸರು ಹೇಳದೆ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಮಾಧ್ಯಮದೊಟ್ಟಿಗೆ ಕೊರೊನಾ ಸಂಕಷ್ಟದ ಬಗ್ಗೆ ಮಾತನಾಡುತ್ತಾ, 'ನಾವು ಹಲವಾರು ಮಂದಿಗೆ ಸಹಾಯ ಮಾಡಬೇಕು ಎಂದುಕೊಂಡಿರುತ್ತೇವೆ. ಆದರೆ ನಮಗೂ ಸಹ ಒಮ್ಮೊಮ್ಮೆ ಆರ್ಥಿಕ ಸಮಸ್ಯೆಗಳು ಎದುರಾಗಿಬಿಡುತ್ತವೆ. ನಮಗೆ ಹಣ ನೀಡಬೇಕಾದವರನ್ನು ಸಹ ಹಣ ಕೇಳದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ' ಎಂದಿದ್ದಾರೆ ಸುದೀಪ್.

ನನ್ನ ಸ್ವಂತ ಹಣದಿಂದಲೇ ಸಹಾಯ: ಸುದೀಪ್
'ನಾನು ನನ್ನ ಸ್ವಂತ ಹಣದಿಂದಷ್ಟೆ ಜನರಿಗೆ ಸಹಾಯ ಮಾಡುತ್ತಿದ್ದೇನೆ. ನನ್ನ ಚಾರಿಟಿ ಟ್ರಸ್ಟ್ಗಳು ಸಹ ನನ್ನ ಸ್ವಂತ ಹಣದಿಂದಷ್ಟೆ ನಡೆಯುತ್ತವೆ. ಯಾರ ಬಳಿಯೂ ನಾವು ಹಣ ಪಡೆಯುವುದಿಲ್ಲ. ಹಣ ಪಡೆವ ಸಂಪ್ರದಾಯ ನಮ್ಮ ಬಳಿ ಇಲ್ಲ' ಎಂದಿದ್ದಾರೆ ಸುದೀಪ್.

ಜನರಿಗೆ ಕೈಲಾದ ಸಹಾಯ ಮಾಡುತ್ತಿದ್ದೇವೆ: ಸುದೀಪ್
'ನಾನು ಯಾವುದೋ ಜಾಹೀರಾತು ಮಾಡಿ ಬಂದ ಹಣ. ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಬಂದ ಹಣ. ರಿಯಾಲಿಟಿ ಶೋ ನಿಂದ ಬಂದ ಹಣ ಇಂಥಹಾ ಹಣವನ್ನು ಬಳಸಿ ನಾನು ಜನರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇನೆ' ಎಂದರು ಸುದೀಪ್.

ಜಾಹೀರಾತಿನಲ್ಲಿ ಅಭಿನಯಿಸಿದ್ದಕ್ಕೆ ವಿಷಾದವಿಲ್ಲ: ಸುದೀಪ್
'ನನಗೆ ಜಾಹೀರಾತುಗಳನ್ನು ಮಾಡಿರುವ ಬಗ್ಗೆ ಯಾವುದೇ ವಿಷಾದವಿಲ್ಲ. ಕೆಲವರು ನನ್ನ ವಿರುದ್ಧ ಬಹಳ ಟೀಕೆ ಮಾಡಿದರು. ನಾನೊಬ್ಬನೇ ಸಮಾಜದಲ್ಲಿ ವಿಲನ್ ಎಂಬ ರೀತಿಯಲ್ಲಿ ತೋರ್ಪಡಿಸುವ ಯತ್ನ ಮಾಡಿದರು. ಫೇಸ್ಬುಕ್ ಲೈವ್ಗಳನ್ನು ಯಾವ ಹಂತದ ವರೆಗೆ ಬಳಸಬೇಕಾಗಿತ್ತೊ ಆ ಹಂತಕ್ಕೆ ಬಳಸಿದರು. ಆದರೆ ಇದರ ಬಗ್ಗೆ ನನಗೆ ಬೇಸರವೇನೂ ಇಲ್ಲ. ಆ ಹಣ ಬಂದಿರದೇ ಇರದಿದ್ದರೆ ನಾನು ಇಷ್ಟು ಜನಕ್ಕೆ ಸಹಾಯ ಮಾಡಲು ಆಗುತ್ತಿರಲಿಲ್ಲ' ಎಂದಿದ್ದಾರೆ ಸುದೀಪ್.
Recommended Video

ಸಂಕಷ್ಟಕ್ಕೆ ನೆರವಾದ ಸುದೀಪ್
ನಟ ಸುದೀಪ್ ಅವರು ತಮ್ಮ ಚಾರಿಟಿ ಟ್ರಸ್ಟ್ ಕಡೆಯಿಂದ ಕೋವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಉಚಿತ ಆಹಾರ ವಿತರಣೆ. ಆಮ್ಲಜನಕ ಕಾನ್ಸನ್ಟ್ರೇಟರ್ ವಿತರಣೆಗಳನ್ನು ಸುದೀಪ್ ಅವರ ಅಭಿಮಾನಿಗಳು ಮಾಡಿದ್ದಾರೆ. ಸ್ವತಃ ಸುದೀಪ್ ಸಹ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದರು. ಇದೀಗ ಅವರು ಗುಣಮುಖರಾಗಿ ಆರೋಗ್ಯವಾಗಿದ್ದಾರೆ.


Click it and Unblock the Notifications











