ಪುನೀತ್ ಸಾವನ್ನೂ ಲಾಭಕ್ಕೆ ಬಳಸಿದ ದುರುಳರು
ಪುನೀತ್ ಸಾವಿನಿಂದ ಇಡೀ ರಾಜ್ಯವೇ ಶೋಕಕ್ಕೆ ನೂಕಲ್ಪಟ್ಟಿದೆ. ಆದರೆ ಕೆಲವರು ಪುನೀತ್ ಸಾವಿನಲ್ಲೂ ಲಾಭ ಹುಡುಕುತ್ತಿದ್ದಾರೆ.
ಪುನೀತ್ ಸಾವನ್ನೇ ಬಂಡವಾಳ ಮಾಡಿಕೊಂಡು ಕೆಲವು ಲ್ಯಾಬೊರೇಟರಿಗಳು ಆಸ್ಪತ್ರೆಗಳು ಹೃದಯ ತಪಾಸಣೆ ಜಾಹೀರಾತುಗಳನ್ನು ನೀಡುತ್ತಿವೆ, ವಿಶೇಷ ರಿಯಾಯಿತಿಗಳನ್ನು ಘೋಷಿಸಿ ರೋಗಿಗಳನ್ನು ಸೆಳೆಯುವ ಯತ್ನ ಮಾಡುತ್ತಿವೆ.
ಕ್ರೆಡೆಂಟ್ನವರು ಪುನೀತ್ ಚಿತ್ರ ಬಳಸಿಕೊಂಡು ತಮ್ಮ ಪ್ರಾಡೆಕ್ಟ್ ಮಾರಾಟ ಮಾಡಲು ಹಾಕಿರುವ ಜಾಹೀರಾತು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಪುನೀತ್ ಚಿತ್ರವುಳ್ಳ ಜಾಹೀರಾತು ಹಾಕಿರುವ ಕ್ರೆಡೆಂಟ್, ''ಪುನೀತ್ ರಾಜ್ಕುಮಾರ್ ಸಾವು ನಮಗೆ ಹೃದಯದ ಬಗ್ಗೆ ಜಾಗೃತರಾಗಿಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ನಾವು ಸಹ ಹೃದಯ ಆರೋಗ್ಯದ ಬಗ್ಗೆ ಜಾಗ್ರತೆ ಮೂಡಿಸಲು ಭಾನುವಾರ (ಅಕ್ಟೋಬರ್ 31) ಶಿಬಿರ ಆಯೋಜಿಸಿದ್ದು, ಇಸಿಜಿ, ಆರ್ಬಿಎಸ್, ಬಿಪಿ, ಕ್ರಿಟಾನಿನ್, ಕೊಲೆಸ್ಟ್ರಾಲ್ ಚೆಕ್ ಅನ್ನು ಕೇವಲ 300 ರುಪಾಯಿಗೆ ಮಾಡುತ್ತೇವೆ'' ಎಂದಿದೆ.

ಕ್ರೆಡೆಂಟ್ ನೀಡಿರುವ ಜಾಹೀರಾತಿನ ಬಗ್ಗೆ ಪುನೀತ್ ಅಭಿಮಾನಿಗಳು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾಹೀರಾತಿನಲ್ಲಿ ಹಾಕಲಾಗಿರುವ ಫೋನ್ ನಂಬರ್ಗೆ ಕರೆ ಮಾಡಿ ಕೆಲವು ಪುನೀತ್ ಅಭಿಮಾನಿಗಳು ಬೈದಿದ್ದಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ತಮ್ಮ 46 ನೇ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಆರೋಗ್ಯದ ಬಗ್ಗೆ ಪುನೀತ್ ಅತಿಯಾದ ಕಾಳಜಿವಹಿಸಿದ್ದರು, ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರು, ಹಾಗಿದ್ದರೂ ಸಹ ಪುನೀತ್ಗೆ ಹೃದಯಾಘಾತವಾಗಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ಪುನೀತ್ ಸಾವಿನ ಬಳಿಕ ಹಲವು ಹೃದ್ರೋಗ ತಜ್ಞರು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಮಾತನಾಡಿ ಹೃದಯ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಕೆಲವು ಅವಕಾಶವಾದಿಗಳು ಈ ಸಂದರ್ಭವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಯತ್ನವನ್ನೂ ನಡೆಸಿದ್ದಾರೆ.
ಪುನೀತ್ ಅಗಲಿಕೆಯ ನೆನಪಿನಲ್ಲಿ ಕೆಲವರು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದಾರೆ ಅದರಲ್ಲಿಯೂ ಹೃದಯ ಸಂಬಂಧಿ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಉಚಿತವಾಗಿ ಆಯೋಜಿಸಿದ್ದಾರೆ. ಕನ್ನಡದ ನಟಿ ಪ್ರಣಿತಾ ಸುಭಾಶ್ ಸಹ ಪುನೀತ್ ನೆನಪಿನಲ್ಲಿ ಇಂದು (ನವೆಂಬರ್ 03) ಜಯನಗರ 9ನೇ ಬ್ಲಾಕ್ನ ಅಂಬೇಡ್ಕರ್ ಭವನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಎಸ್ಟಾರ್ ಆಸ್ಪತ್ರೆ ಪರವಾಗಿ ಆಯೋಜಿಸಿದ್ದಾರೆ.


Click it and Unblock the Notifications











