ಕನ್ನಡದಲ್ಲಿ ಇನ್ಮುಂದೆ ಹಾಡಬಹುದು ಸೋನು ನಿಗಮ್, ಹೇರಿದ್ದ ನಿರ್ಬಂಧ ವಾಪಸ್ ಪಡೆದ ಕನ್ನಡ ಚಿತ್ರರಂಗ
ಹೆಚ್ಚೇನು ಇಲ್ಲ. ಮೂರು ತಿಂಗಳ ಹಿಂದೆ ಕನ್ನಡ .. ಕನ್ನಡ .. ಕನ್ನಡ .. ಎಂದು ಕನ್ನಡಿಗರನ್ನು ಕೆಣಕಿದ್ದವರು ಸೋನು ನಿಗಮ್. ಕನ್ನಡ ಚಿತ್ರರಂಗದ ಕುರಿತು ಅಭಿಮಾನದ ಮಾತುಗಳನ್ನಾಡುತ್ತಿದ್ದ, ಕಾಲ .. ಕಾಲಕ್ಕೆ .. ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡುತ್ತಿದ್ದ ಸೋನು ನಿಗಂ ಮಾತನಾಡುವಾಗ ಕನ್ನಡಿಗರ ಕನ್ನಡಾಭಿಮಾನವನ್ನು ಕಾಶ್ಮೀರದಲ್ಲಿ ಆದ ಘಟನೆಗೆ ಹೋಲಿಸಿದ್ದರು. ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಮಾತನಾಡಿದ್ದರು.
ಕನ್ನಡಿಗರನ್ನು ಕೆರಳಿಸಿದ್ದರು. ಕರುನಾಡಿನೆಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದ್ದರು. ಆದರೂ ತಾವಾಡಿದ ಮಾತುಗಳಿಗೆ ಸೋನು ನಿಗಮ್ ಅವರಲ್ಲಿ ಪಶ್ಚಾತಾಪ ಇರಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕ್ಷಮೆಯನ್ನು ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಕನ್ನಡಿಗರ ಆಕ್ರೋಶವನ್ನು ಇನ್ನೂ ಹೆಚ್ಚಿಸಿದ್ದರು ಸೋನು ನಿಗಮ್.

ಈ ಹಿನ್ನೆಲೆ ಕನ್ನಡ ಚಿತ್ರರಂಗದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸೋನು ನಿಗಮ್ ವಿರುದ್ಧ ನಿಗಿ ನಿಗಿ ಕೆಂಡ ಕಾರಿತ್ತು. ಸೋನು ನಿಗಮ್ ವಿರುದ್ಧ ಅಸಹಕಾರ ಚಳುವಳಿಯನ್ನು ಶುರು ಮಾಡಿತ್ತು. ಕನ್ನಡಿಗರ ಕೋಪ-ತಾಪ ಕಡಿಮೆಯಾದ ಕಾರಣ ಕೊನೆಗೆ ಮನಸಿಲ್ಲದ ಮನಸಿಂದ ಆ ನಂತರ ಸೋನು ನಿಗಮ್ ಕ್ಷಮೆಯನ್ನು ಕೇಳಿದ್ದರು. ಕ್ಷಮಿಸಿ ಕರ್ನಾಟಕ ನನ್ನ ಅಂಹಕಾರಕ್ಕಿಂತ ನಿಮ್ಮ ಮೇಲಿನ ಪ್ರೀತಿ ದೊಡ್ಡದು ಎಂದು ಹೇಳಿದ್ದರು.
ಆದರೂ ಕೂಡ .. ಸೋನು ನಿಗಮ್ ಅವರನ್ನು ಕನ್ನಡಿಗರು ಅಂದು ಕ್ಷಮಿಸಿರಲಿಲ್ಲ. ಇಂದು ಕೂಡ ಕ್ಷಮಿಸಿರಲಿಕ್ಕಿಲ್ಲ. ಆದರೆ.. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಸಹಕಾರ ಚಳುವಳಿ ಸದ್ಯಕ್ಕೆ ಮುಕ್ತಾಯವಾಗಿದೆ. ಸೋನು ನಿಗಮ್ ಮೇಲೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆಯಲಾಗಿದೆ.
ಹೌದು, ಅಸಲಿಗೆ ಕನ್ನಡಿಗರನ್ನು ಕೆಣಕುವ ಮುನ್ನ ಸೋನು ನಿಗಮ್ ''ನಿದ್ರಾದೇವಿ NEXT ಡೋರ್'' ಎಂಬ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದರು. ''ಕನ್ನಡಪರ ಹೋರಾಟಗಾರ'' ಪ್ರವೀಣ್ ಶೆಟ್ಟಿ ಅವರ ಸುಪುತ್ರ ಪ್ರವೀರ್ ಶೆಟ್ಟಿ ಅಭಿನಯದ ಚಿತ್ರ ಇದು.
ಇನ್ನೇನೂ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಸೋನು ನಿಗಮ್ ಹಾಡಿರುವ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕಾ ? ಅಥವಾ ತೆಗೆದು ಹಾಕಬೇಕಾ ? ಎಂಬ ಗೊಂದಲದಲ್ಲಿ ಈ ಚಿತ್ರತಂಡ ಇತ್ತೀಚೆಗೆ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು.

ಈ ಸಮಯದಲ್ಲಿ ಹಾಡನ್ನು ಹಾಗೇ ಉಳಿಸಿಕೊಳ್ಳಲು ಅನುಮತಿಯನ್ನು ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ''ಅಧ್ಯಕ್ಷ'' ಎಂ ನರಸಿಂಹಲು ಸೋನು ನಿಗಮ್ ಅವರಿಂದ ಇನ್ಮುಂದೆ ಹಾಡನ್ನು ಹಾಡಿಸಲು ಬಯಸುವವರಿಗೆ ಈಗಾಗಲೇ ಹಾಡನ್ನು ಹಾಡಿಸಿರುವವರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಾವೇ ಹೇರಿದ್ದ ಅಘೋಷಿತ ಬ್ಯಾನ್ನ್ನು ತೆರವುಗೊಳಿಸಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬಹಿರಂಗವಾಗಿ ಕ್ಷಮೆ ಕೇಳಿದ್ದರು ಹೀಗಾಗಿ ಈ ನಿರ್ಧಾರ ಎಂದು ಹೇಳಿದ್ದಾರೆ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಉಮೇಶ್ ಬಣಕಾರ್, ''ಸದ್ಯ ತೆರೆಗೆ ಬರಲು ಸಿದ್ಧವಾಗಿರುವ ''ನಿದ್ರಾದೇವಿ NEXT ಡೋರ್'' ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕರು ಮತ್ತು ನಿರ್ದೇಶಕರು ಬಂದಿದ್ದರು. ಈ ವಿವಾದ ಆಗುವ ಮುನ್ನವೇ ನಾವು ಸೋನು ನಿಗಮ್ ಅವರಿಂದ ಹಾಡು ಹಾಡಿಸಿದೀವಿ, ಇವಾಗ ಏನು ಮಾಡೋದು, ನೀವು ಹಾಡನ್ನು ತೆಗೆದುಬಿಡಿ ಅಂದರೆ ತೆಗೆದು ಬಿಡ್ತೀವಿ ಎಂದು ಹೇಳಿದರು. ಅದು ನಮ್ಮ ''ಕರ್ನಾಟಕ ರಕ್ಷಣಾ ವೇದಿಕೆ'' ಪ್ರವೀಣ್ ಶೆಟ್ಟಿ ಅವರ ಮಗನ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ಆ ರೀತಿ ಬಹಿರಂಗವಾಗಿ ಕ್ಷಮೆ ಕೇಳಿದರೂ ಕೂಡ ಒಬ್ಬ ಕಲಾವಿದನನ್ನು ಹತ್ತಿಕುವುದು ಅಕ್ಷಮ್ಯ ಅಪರಾಧ, ಗೊತ್ತೋ ಗೊತ್ತಿಲ್ಲದೇ ಮಾತನಾಡಿದ್ದರು. ಈಗ ತಪ್ಪಿನ ಅರಿವು ಆಗಿದೆ. ಬಹಿರಂಗವಾಗಿ ಕ್ಷಮೆ ಕೂಡ ಕೇಳಿದರು. ಬಹಿರಂಗವಾಗಿ ಕ್ಷಮೆ ಕೇಳಿದರೂ ಕೂಡ ತಿರುಗಿ ನಾವು ಅವರ ಮೇಲೆ ಸವಾರಿ ಮಾಡುವುದು ಸಮಂಜಸವಲ್ಲ'' ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸೋನು ನಿಗಮ್ ಅವರ ಮೇಲೆ ಹೇರಿದ್ದ ನಿರ್ಬಂಧ ವಾಪಸು ಪಡೆಯಲಾಗಿದೆ. ಯಾರು ಬೇಕಾದರೂ ಕೂಡ ಅವರಿಂದ ಈಗ ಮುಕ್ತವಾಗಿ ಹಾಡನ್ನು ಹಾಡಿಸಬಹುದು ಎಂದು ಕೂಡ ಉಮೇಶ್ ಬಣಕಾರ್ ಹೇಳಿದ್ದಾರೆ.
ವಿಪರ್ಯಾಸ ಅಂದರೆ ಇದೇ ''ನಿದ್ರಾದೇವಿ NEXT ಡೋರ್'' ಹಾಡೊಂದನ್ನು ಕಳೆದ ಜುಲೈನಲ್ಲಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್, ಇದೇ ಸೋನು ನಿಗಂ ಹಾಡಿರುವ ''ನೀ ನನ್ನ'' ಹಾಡು ಬಿಡುಗಡೆ ಮಾಡಿದ್ದರು. ಈ ಸಮಯದಲ್ಲಿ ಮಾತನಾಡಿದ್ದ ಗಣೇಶ್ ''ನಮ್ಮಿಂದ ಅಲ್ಲ ಭಾಷೆ. ಭಾಷೆಯಿಂದ ನಾವು. ಭಾಷೆ ಉಳಿದರಷ್ಟೇ ನಾವು ಉಳಿಯೋದು. ಭಾಷೆನೇ ಇಲ್ಲಾ ಅಂದರೆ ನಾವು ಏನು ಮಾಡುವುದಕ್ಕೆ ಆಗುತ್ತೆ. ನಮ್ಮ ಭಾಷೆಗೆ ಎಷ್ಟು ದೊಡ್ಡ ಇತಿಹಾಸವಿದೆ. ಅದರಿಂದ ನಾವು ಅಷ್ಟೇ. ನಮ್ಮಂತಹವರು ಸಾವಿರಾರು ಜನ ಬಂದು ಹೋಗುತ್ತಾರೆ. ಉಳಿಯೋದು ಭಾಷೆ ಒಂದೇನೆ. ಭಾಷೆಯನ್ನು ಬೆಳೆಸುತ್ತೇವೆ ಅನ್ನೋದು ಅಲ್ಲ. ಇರೋ ಭಾಷೆಯನ್ನು ಉಳಿಸಿದರೆ, ಅದೇ ಧನ್ಯ. ಹಾಗಾಗಿ ನಿರ್ಮಾಪಕರು ಹಾಡು ತೆಗೆಯುವುದು ಬಿಡುವುದರ ಕುರಿತು ಯೋಚನೆ ಮಾಡುತ್ತೇವೆ ಅಂತ ಹೇಳಿದರು. ಆದರೆ ಯೋಚನೆ ಏನಿಲ್ಲ. ಚೇಂಜ್ ಮಾಡುತ್ತೇವೆ ಅಂತ ನೀವು ಪಟ್ ಅಂತ ಹೇಳಿಬಿಡಬೇಕು.ಯಾಕೆಂದರೆ ಭಾಷೆ ಮುಖ್ಯ ಎಂದು ಹೇಳಿದ್ದರು. ಆದರೆ ಈಗ ಇದೇ ಹಾಡು ಸೋನು ನಿಗಮ್ ಅವರ ಮೇಲಿದ್ದ ಅಘೋಷಿತ ಬ್ಯಾನ್ನ ತೆರೆವುಗೊಳಿಸಿದೆ.


Click it and Unblock the Notifications











