ಆ ಫ್ಲೈಓವರ್ ಮೇಲೆ ಸೌಂದರ್ಯ ಆತ್ಮ ಇದೆ ; ಸೌಂದರ್ಯ ಅತ್ತಿಗೆ ನಿರ್ಮಲಾ ಅವರ ಭಾವುಕ ಸಂದರ್ಶನ..!
ಸೌಂದರ್ಯ ಇಂದು ನಮ್ಮ ನಡುವೆ ಇಲ್ಲ. ಆದರೆ ಅವರ ನೆನಪುಗಳು ಇನ್ನು ಜೀವಂತವಾಗಿವೆ. ಯಾಕೆಂದರೆ ಸೌಂದರ್ಯ ಸಾಧನೆಯೇ ಅಂತಹದ್ದು. 'ಗಂಧರ್ವ' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ಸೌಂದರ್ಯ ಆ ನಂತರ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಕೂಡ ಅಭಿನಯಿಸಿದ್ದರು. ಆ ಕಾಲದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದರು. ಕೇವಲ ಹನ್ನೆರಡೇ ವರ್ಷ ಕಲಾಸೇವೆಯನ್ನು
ಮಾಡಿದ ಸೌಂದರ್ಯ 85ಕ್ಕೂ ಅಧಿಕ ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ಡಾ.ವಿಷ್ಣುವರ್ಧನ್.. ಅಮಿತಾಬ್ ಬಚ್ಚನ್.. ಚಿರಂಜೀವಿ.. ವಿಕ್ಟರಿ ವೆಂಕಟೇಶ್.. ನಾಗಾರ್ಜುನ.. ಮೋಹನ್ ಬಾಬು.. ಹೀಗೆ ಅನೇಕ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಕೆಲಸವನ್ನು ಮಾಡಿದ್ದರು. ತಮ್ಮ ಅಭಿನಯದಿಂದ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ದರು.

ಪಾತ್ರಗಳ ಆಯ್ಕೆಯಲ್ಲಿ ಹಲವರನ್ನು ಅಚ್ಚರಿಗೆ ದೂಡುತ್ತಿದ್ದ ಸೌಂದರ್ಯ ಅವರಿಗೆ ಹತ್ತು ಹಲವು ಪ್ರಶಸ್ತಿಗಳು ಕೂಡ ಸಿಕ್ಕಿದ್ದವು. ಎರಡು ಬಾರಿ ತೆಲುಗು ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಯಾದ ನಂದಿ ಅವಾರ್ಡ್ ಮುಡಿಗೇರಿಸಿಕೊಂಡಿದ್ದ ಸೌಂದರ್ಯ ತಮ್ಮ ಹನ್ನೆರಡು ವರ್ಷಗಳ ಚಿತ್ರ ಜೀವನದಲ್ಲಿ ಆರು ಬಾರಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದಿದ್ದರು.
ಕರ್ನಾಟಕ ಸರ್ಕಾರ ನೀಡುವ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯು ಕೂಡ ಸೌಂದರ್ಯಗೆ ಸಿಕ್ಕಿತ್ತು. ಇಂಥಾ ಸೌಂದರ್ಯ 2004ರ ಏಪ್ರಿಲ್ 17ರಂದು ವಿಮಾನ ಅಪಘಾತದಲ್ಲಿ ಸೌಂದರ್ಯಾ ಅವರು ನಿಧನರಾದರು.
ಸೌಂದರ್ಯ ಅಗಲಿ 21 ವರ್ಷವಾದರೂ ಕೂಡ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಸೌಂದರ್ಯ ಸಾವಿನ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆ 'ನಿಮ್ಮ' 'ಫಿಲ್ಮಿಬೀಟ್ ಕನ್ನಡ'ಗೆ ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಅಮರನಾಥ್ ''ಎಕ್ಸ್ಕ್ಲೂಸಿವ್'' ಸಂದರ್ಶನ ನೀಡಿದ್ದಾರೆ. ಸೌಂದರ್ಯ ಕುರಿತು ಮಾತನಾಡಿದ್ದಾರೆ. ಸೌಂದರ್ಯ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಮತ್ತು ಅದೇ ವಿಮಾನ ಅಪಘಾತದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡ ಅಮರನಾಥ್ ಅವರನ್ನು ನೆನೆದು ಭಾವುಕರಾಗಿದ್ದಾರೆ. ಹಾಗಿದ್ದರೆ ನಿರ್ಮಲಾ ಅಮರ್ ನಾಥ್ ಸೌಂದರ್ಯ ಕುರಿತು ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಸೌಂದರ್ಯ ಅಗಲಿ 21 ವರ್ಷ
''ಎರಡು ತರ ಬದುಕನ್ನು ನಾವು ಬದುಕುತ್ತೇವೆ, ಸತ್ತಂತೆ ಬದುಕೋದು, ಸತ್ತ ಮೇಲೆ ಬದುಕೋದು, ಕೆಲವರು ಸತ್ತಂತೆ ಬದುಕುತ್ತಿರುತ್ತಾರೆ ಇನ್ನು ಕೆಲವರು ಸತ್ತ ಮೇಲೆ ಕೂಡ ಬದುಕುತ್ತಾರೆ, ಸೌಮ್ಯನ { ಸೌಂದರ್ಯ } ನಾನು ಪ್ರತಿ ಬಾರಿ ನೆನಪು ಮಾಡಿಕೊಂಡಾಗ ನನಗೆ ಅದೇ ಅನ್ಸುತ್ತೆ , ಯಾಕೆಂದರೆ ಸೌಂದರ್ಯ ನಮ್ಮನ್ನು ಅಗಲಿ 21 ವರ್ಷವಾದರೂ ಕೂಡ ನನಗೆ ಅವರ ಫ್ಯಾನ್ಸ್ ಫೋನ್ ಮಾಡ್ತಾರೆ, ನಿಮ್ಮ ಹತ್ರ ಮಾತನಾಡಿದರೆ ನಮಗೆ ಅವರ ಜೊತೆ ಮಾತನಾಡಿದ ಭಾವನೆ ಬರುತ್ತೆ, ಸಮಾಧಾನವಾಗುತ್ತೆ ಎಂದು ಹೇಳ್ತಾರೆ, ಹೇಗಿದ್ದೀರಾ ಎಂದು ಕೇಳ್ತಾರೆ. ಇಷ್ಟು ದೊಡ್ಡ ಹೆಸರು ಮಾಡುವುದು ಸುಲಭ ಅಲ್ಲ. ಹೀಗಾಗಿ ನನಗೆ ಯಾವತ್ತು ಅಮರ್ ಆಗಲಿ ಸೌಮ್ಯ ಆಗಲಿ ಇಲ್ಲ ಎಂಬ ಭಾವನೆಯೇ ಬಂದಿಲ್ಲ, ಅಮರ್ ಮತ್ತು ಸೌಮ್ಯ ಜೊತೆಯಲ್ಲಿಯೇ ನಾವೆಲ್ಲ ಇದ್ದೇವೆ'' ಎಂದು ಹೇಳಿದ್ದಾರೆ. ಅವರಿಬ್ಬರು ಯಾವಾಗಲೂ ಅಮರ ಎಂದು ಹೇಳಿದ್ದಾರೆ.
ಅತ್ತಿಗೆ ಮತ್ತು ನಾದಿನಿ ಬಾಂಡಿಂಗ್ ಹೇಗಿತ್ತು ?
''ನಾವೆಲ್ಲ ಒಂದೇ ಕಡೆ ಇದ್ದಿದ್ದರಿಂದ, ಅಲ್ಲೇ ಪಕ್ಕದ ರಸ್ತೆಯಲ್ಲಿ ಅವರು ಇದ್ದಿದ್ದರಿಂದ, ನನಗೆ ಸೌಂದರ್ಯ ಚಿಕ್ಕ ವಯಸ್ಸಿಂದನೇ ಗೊತ್ತು, ನಾವೆಲ್ಲ ಜೊತೆಯಲ್ಲಿಯೇ ಬೆಳೆದವರು, ಅವರ ಸಂಬಂಧಿ ಪದ್ಮಾ ನನ್ನ ಕ್ಲಾಸ್ಮೇಟ್, ನಾವು ಇಬ್ಬರು ಜೊತೆಯಲ್ಲೇ ಕಾಲೇಜ್ಗೆ ಹೋಗ್ತಿದ್ವಿ, ಹೀಗಾಗಿ ನಾನು ಅವರ ಮನೆಗೆ ಹೋಗ್ತಿದ್ದೇ, ಅವಳು ನನ್ನ ಮನೆಗೆ ಬರ್ತಿದ್ದಳು, ಈ ಕಾರಣಕ್ಕೆ ಆಗಲೇ ಪರಿಚಯ ಇತ್ತು ಆದರೆ ಅವರ ಮನೆಗೆ ಸೊಸೆಯಾಗಿ ಮುಂದೆ ಒಂದು ಹೋಗ್ತೇನೆ ಎನ್ನುವ ಕಲ್ಪನೆ ನನಗೆ ಇರಲಿಲ್ಲ'' ಎಂದು ನಿರ್ಮಲಾ ಹೇಳಿದ್ದಾರೆ. ಹೀಗಾಗಿ ಮದುವೆಯಾಗಿ ಮನೆಗೆ ಬಂದ ಮೇಲೆ ನನಗ್ಯಾರು ಹೊಸಬರು ಎಂದು ಅನಿಸಿರಲಿಲ್ಲ ಎಂದು ಕೂಡ ಹೇಳಿದ್ದಾರೆ.
ಸೌಮ್ಯ ಸೌಂದರ್ಯ ಆಗಿದ್ದು ಯಾವಾಗ ?
''ನನಗೆ ನೆನಪಿರುವಂತೆ ಸೌಮ್ಯಳನ್ನು ಹಂಸಲೇಖಾ ಸರ್ ಚಿತ್ರರಂಗಕ್ಕೆ ಪರಿಚಯಿಸಿದ್ದು, ಆಗ ಅದ್ಯಾವ ಕಾರಣಕ್ಕೆ ಎನ್ನುವುದು ನನಗೆ ನೆನಪಿಲ್ಲ ಆದರೆ ಅವರು ಆಗ ಸೌಂದರ್ಯ ಅಂತ ಮರು ನಾಮಕರಣ ಮಾಡಿದರು, ಅವಳದ್ದು ಸಹಜ ಸೌಂದರ್ಯವಾಗಿತ್ತು, ಚಿತ್ರೀಕರಣ ಇದ್ದಾಗ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಬೇಕಾದಾಗ ಮಾತ್ರ ಸೌಂದರ್ಯ ಮೇಕಪ್ ಮಾಡಿಕೊಳ್ತಿದ್ದಳು ಇಲ್ಲದಿದ್ದರೆ ಹಾಗೆಯೇ ಓಡಾಡಿಕೊಂಡು ಇರುತ್ತಿದ್ದಳು ಆದರೆ ಅವಳಿಗೆ ಬಟ್ಟೆಗಳು ಅಂದರೆ ಪಂಚಪ್ರಾಣ, ಫುಲ್ ವಾರ್ಡ್ರೋಬ್ ತುಂಬಾ ಬರೀ ಬಟ್ಟೆಗಳೇ ಇರುತ್ತಿದ್ದವು ಆದರೂ ಕೂಡ ಅವಳಿಗೆ ಸಮಾಧಾನ ಆಗ್ತಿರಲಿಲ್ಲ, ಎಷ್ಟೋ ಸಲ ಹೊರಗಡೆ ಹೋಗಬೇಕಾದರೆ ಅಣ್ಣ ಬಟ್ಟೆ ಇಲ್ಲ ಎಂದು ಹೇಳುತ್ತಿದ್ದಳು, ತುಂಬಾನೇ ಮುದ್ದಾಗಿ ಬೆಳೆದಿದ್ದ ಮಗು ಅದು'' ಎಂದು ಹೇಳಿದ್ದಾರೆ.
ಅಂದ್ಹಾಗೇ ಸೌಂದರ್ಯ ಇಹಲೋಕ ತ್ಯಜಿಸಿದಾಗ ಅನೇಕರು ಅನೇಕ ರೀತಿಯ ಮಾತುಗಳನ್ನಾಡಿದ್ದರು. ಸೌಂದರ್ಯ ಆಪ್ತಮಿತ್ರ ಚಿತ್ರ ಮಾಡಬಾರದಿತ್ತು. ಸೌಂದರ್ಯ ಸಾವಿಗೆ ನಾಗವಲ್ಲಿಯೇ ಕಾರಣ ಎಂದು ಪುಕಾರು ಹಬ್ಬಿಸಿದ್ದರು. ಇನ್ನು ಕೆಲವರು ಫ್ಲೈ ಓವರ್ ಮೇಲೆ ಸೌಂದರ್ಯ ಆತ್ಮ ಇದೆ ಎಂದು ಕೂಡ ಹುಯಿಲೆಬ್ಬಿಸಿದ್ದರು. ಈ ವಿಚಾರದ ಕುರಿತು ಕೂಡ ನಿರ್ಮಲಾ ಅಮರ್ನಾಥ್ ಮಾತನಾಡಿದ್ದಾರೆ. ಹಾಗಿದ್ದರೆ ಸೌಂದರ್ಯ ಸಾವಿಗೆ ಮತ್ತು ನಾಗವಲ್ಲಿಗೆ ಸಂಬಂಧ ಇದೆಯಾ ? ನಿರ್ಮಲಾ ಅವರು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣಾನಾ ?
''ಆಪ್ತಮಿತ್ರ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸೌಂದರ್ಯಗೆ ಯಾವುದೇ ಅಹಿತಕರ ಅನುಭವ ಆಗಿರಲಿಲ್ಲ, ನನಗೆ ಇವತ್ತು ಕೂಡ ಚೆನ್ನಾಗಿ ನೆನಪಿದೆ ಯಾಕೆಂದರೆ ಆ ಚಿತ್ರದ ಚಿತ್ರೀಕರಣ ಇಲ್ಲೇ ಪ್ಯಾಲೇಸ್ನಲ್ಲಿ ನಡೆಯುತ್ತಿತ್ತು ನಾನು ಸುಮಾರು ಸಲ ಆ ಚಿತ್ರದ ಚಿತ್ರೀಕರಣ ನಡೆಯುವಾಗ ಹೋಗಿದ್ದೇ, ರಾ ರಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ಕೂಡ ನಾನು ಅಲ್ಲಿಯೇ ಇದ್ದೇ ಯಾವತ್ತು ಯಾವ ಕೆಟ್ಟ ಘಟನೆ ಕೂಡ ಆಗಿಲ್ಲ'' ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.
ಫ್ಲೈಓವರ್ ಮೇಲೆ ಸೌಂದರ್ಯ ಅವರ ಆತ್ಮ ಎಲ್ಲ ಇದೆ ಎಂದು ಹೇಳಿದರು
''ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯ ಅಭಿನಯಿಸಿದ್ದು, ಆ ನಂತರ ದುರಂತ ಅಂತ್ಯ ಕಂಡಿದ್ದು ಎಲ್ಲ ಕಾಕತಾಳೀಯ ಅಷ್ಟೇ, ಆಪ್ತಮಿತ್ರದ ಮೂಲ ಚಿತ್ರ ಮಣಿಚಿತ್ತಿರತ್ತಾಳ್ ನಲ್ಲಿ ಅಭಿನಯಿಸಿದ್ದ ಶೋಭನಾ ಅವರು ಇನ್ನು ಇದ್ದಾರಲ್ವಾ, ಈ ಮಾತುಗಳಲ್ಲಿ ವಾದದಲ್ಲಿ ನನಗೆ ನಂಬಿಕೆ ಇಲ್ಲ, ಅದೆಲ್ಲ ಸುಳ್ಳು'' ಎಂದು ಹೇಳಿದ್ದಾರೆ.
ಮುಂದುವರೆದು ''ಆದರೆ ಆ ಸಮಯದಲ್ಲಿ ನನಗೆ ತುಂಬಾ ನೋವಾಗಿತ್ತು, ಯಾಕೆಂದರೆ ಸುಮಾರು ಮಾಧ್ಯಮದವರು ಆಗ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು, ಆ ಫ್ಲೈ ಓವರ್ ಮೇಲೆ ಅದಾಗುತ್ತಿದೆ, ಇದಾಗುತ್ತಿದೆ, ಸೌಂದರ್ಯ ಆತ್ಮ ಅಲೆದಾಡುತ್ತಿದೆ ಎಂದೆಲ್ಲ ಹೇಳಿದರು, ಆಗ ನನ್ನ ಹೊಟ್ಟೆಯೆಲ್ಲ ಕಲುಕುವುದು, ಇದೆಲ್ಲ ನೋಡಿದಾಗ ಇದ್ಯಾಕೇ ಹೀಗೆ ಮಾತನಾಡ್ತಿದ್ದಾರೆ, ಇವರಿಗೆಲ್ಲ ಹೇಗಾದರೂ ಮನಸು ಬರುತ್ತೆ ಎಂದು ನನಗೆ ಅನ್ಸಿತ್ತು ಎಂದು ಹೇಳಿದ್ದಾರೆ. ಫ್ಲೈ ಓವರ್ ಮೇಲೆ ಆತ್ಮ ಇದೆ ಎಂಬ ಸುದ್ದಿಯೆಲ್ಲ ಸುಳ್ಳು ಎಂದು ಕೂಡ ನಿರ್ಮಲಾ ಅಮರ್ನಾಥ್ ಫಿಲ್ಮಿ ಬೀಟ್ ಕನ್ನಡಗೆ ನೀಡಿದ ಈ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











