ಕೊರೊನಾ ವಿರುದ್ಧ ಹೋರಾಟ: ದಕ್ಷಿಣ ಭಾರತದ ನಟರ ಅನುಕರಣೀಯ ನಡೆ
ಕೊರೊನಾ ವೈರಸ್ ನಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಪ್ರತಿ ವಲಯಗಳೂ ಕಳೆದ ದಶಕದಲ್ಲೇ ಕಂಡಿರದಂತಹಾ ನಷ್ಟದ ಕಡೆ ಸಾಗಿವೆ.
ಸಿನಿಮಾ ಉದ್ಯಮವಂತೂ ತಲ್ಲಣಿಸಿ ಹೋಗಿದೆ. ಸಿನಿಮಾಗಳು ತಯಾರಾಗಿ ಡಬ್ಬದಲ್ಲಿ ಕೂತಿವೆ. ಸಿನಿಮಾ ಮಾಡಲು ಪಡೆದಿದ್ದ ಸಾಲದ ಬಡ್ಡಿಗಳು ಏರುತ್ತಲೇ ಇವೆ. ಚಿತ್ರೀಕರಣವನ್ನೂ ಮಾಡಲಾಗುತ್ತಿಲ್ಲ.
ಇನ್ನು ಸಿನಿಮಾವನ್ನೇ ನಂಬಿಕೊಂಡಿದ್ದ ಅಸಂಖ್ಯ ದಿನಗೂಲಿ ನೌಕರರು, ಜ್ಯೂನಿಯರ್ ಆರ್ಟಿಸ್ಟ್ಗಳು, ಸಿನಿಮಾಕ್ಕೆ ಪರೋಕ್ಷವಾಗಿ ಕೆಲಸ ಮಾಡುವ ದಿನಗೂಲಿ ಪಡೆವ ಡಿ ವರ್ಗದ ಸಿಬ್ಬಂದಿ ಜೀವನ ನಡೆಸುವುದು ಹೇಗೆಂದು ತಲೆಯ ಮೇಲೆ ಕೈಹೊತ್ತು ಕೂತಿದ್ದಾರೆ. ಆದರೆ ಇಂಥಹವರ ಸಹಾಯಕ್ಕೆ ಸ್ಟಾರ್ ನಾಯಕರು ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಾರೆ.

ಹತ್ತು ಲಕ್ಷ ನೀಡಿದ ನಟ ಸೂರ್ಯ
ತಮಿಳಿನ ಖ್ಯಾತ ನಟ ಸೂರ್ಯ ಅವರು ಹತ್ತು ಲಕ್ಷ ರೂಪಾಯಿಯನ್ನು ಸಿನಿಮಾ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಿದ್ದಾರೆ. ಸುಮಾರು ಎರಡು ವಾರದಿಂದಲೂ ಚಿತ್ರೀಕರಣ ಬಂದ್ ಆಗಿದ್ದು, ಸಿನಿಮಾ ಕಾರ್ಮಿಕರ ಕಲ್ಯಾಣಕ್ಕೆ ಈ ಹಣ ಉಪಯೋಗವಾಗಲಿದೆ.

ಇಪ್ಪತ್ತು ಲಕ್ಷ ಹಣ ನೀಡಿದ ನಿತಿನ್
ತೆಲುಗಿನ ಖ್ಯಾತ ನಟ ನಿತಿನ್ ಅವರು ಮುಖ್ಯಮಂತ್ರಿಗಳ ಸಹಾಯ ನಿಧಿಗೆ 20 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಕೊರೊನಾ ವಿರುದ್ಧ ಹೋರಾಡಲೆಂದು ಅವರು ಈ ಧನ ಸಹಾಯ ಮಾಡಿದ್ದಾರೆ.

ಗಮನ ಸೆಳೆದ ನಿರ್ದೇಶಕ ಪವನ್ ಪ್ರಯತ್ನ
ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರು ಸಹ ಸಿನಿಮಾ ದಿನಗೂಲಿ ಕಾರ್ಮಿಕರ ಸಹಾಯಕ್ಕೆಂದು ಭಾನುವಾರದಂದು ಕೆಲ ಆನ್ಲೈನ್ ಕಾರ್ಯಕ್ರಮಗಳನ್ನು ಮಾಡಿ ಹಣ ಒಟ್ಟುಗೂಡಿಸಿ, ತಾವೂ ಹಣ ಹಾಕಿ ಕಲ್ಯಾಣ ನಿಧಿಗೆ ನೀಡಿದ್ದಾರೆ.

ಸ್ಟಾರ್ ನಟರುಗಳು ಮುಂದೆ ಬಂದಿದ್ದಾರೆ
ಸ್ಟಾರ್ ನಟರುಗಳು ಒಬ್ಬರಾಗಿ ಸಿನಿ ಕಾರ್ಮಿಕರ ಸಹಾಯಕ್ಕೆ ಮುಂದೆ ಬರುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ನಟುರಗಳೇ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ.

ನಟರಿಗೆ ಮನವಿ ಮಾಡಿದ ಫೆಡರೇಶನ್
ಎಫ್ಇಎಫ್ಎಸ್ಐ (ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ) ದೇಣಿಗೆ ನೀಡಬಲ್ಲ ನಟರು ಸಿನಿ ಕಾರ್ಮಿಕರ ಕಲ್ಯಾಣಕ್ಕೆ ಸಹಾಯ ಮಾಡುವಂತೆ ದಕ್ಷಿಣ ಸಿನಿಮಾರಂಗದ ನಟರಿಗೆ ಮನವಿ ಮಾಡಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ನಟರು ಸಹಾಯ ಮಾಡಬಹುದು.


Click it and Unblock the Notifications











