ಅವರೆಲ್ಲ ನನ್ನ ಎಕ್ಕಡಕ್ಕೂ ಸಮ ಇಲ್ಲ, ಕನ್ನಡ ಚಿತ್ರರಂಗದ ಕಥೆ ಅಷ್ಟೇ ಮುಗೀತು ಎಂದು ಹೇಳಿದ್ದ ನಟಿ ಮತ್ತೆ ಧಗಧಗ..!
ಸೌಮ್ಯ ರಾವ್.. ಒಂದ್ಕಾಲದಲ್ಲಿ ಸಮಯ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಲೇ, ಕನ್ನಡದ ಕಿರುತೆರೆಯತ್ತ ಮುಖ ಮಾಡಿದವರು. ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಸೌಮ್ಯಾ ಸದ್ಯಕ್ಕೆ ಕನ್ನಡದ ಕಿರುತೆರೆಯಿಂದ ಕಾಣೆಯಾಗಿದ್ದಾರೆ. ಪಕ್ಕದ ಆಂಧ್ರ ಮತ್ತು ಚೆನ್ನೈಗೆ ವಲಸೆ ಹೋಗಿ ಅಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯೂ ಆಗಿರುವ ಸೌಮ್ಯ, ಇಲ್ಲಿಯವರೆಗೆ ತಮಿಳಿನಲ್ಲಿ ರೋಜಾ ಸೇರಿ ಮೂರ್ನಾಲ್ಕು ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಶ್ರೀಮಂತಡು ಎಂಬ ಧಾರಾವಾಹಿಯಲ್ಲಿ ಅಭಿನಯಿಸುವುದಲ್ಲದೇ ಅಲ್ಲಿನ ಜಬರದಸ್ತ್ ಎಂಬ ಖ್ಯಾತ ಕಾರ್ಯಕ್ರಮದ ನಿರೂಪಣೆಯನ್ನು ಒಂದು ವರ್ಷಗಳ ಕಾಲ ಮಾಡಿ ಸೈ ಅನಿಸಿಕೊಂಡಿದ್ದಾರೆ.
ಇಂಥಾ ಸೌಮ್ಯ ರಾವ್ ಈ ವರ್ಷದ ಆರಂಭದಲ್ಲಿ ತೆಲುಗಿನಲ್ಲಿ ಸಂದರ್ಶನವೊಂದನ್ನು ನೀಡಿದ್ದರು. ಕನ್ನಡ ಚಿತ್ರರಂಗದ ಬಗ್ಗೆ ನನಗೆ ನಯಾ ಪೈಸಾ ಅಭಿಮಾನ ಇಲ್ಲ ಎಂದಿದ್ದ ಸೌಮ್ಯ ಅಲ್ಲಿ ಪ್ರತಿಭಾವಂತರನ್ನು ಬೆಳೆಸುವುದಿಲ್ಲ, ಆ ಇಂಡಸ್ಟ್ರೀ ತುಂಬಾ ಚಿಕ್ಕದಾಗಿ ಇರಲು ಇದೇ ಕಾರಣವೆಂದು ಹೇಳಿದ್ದರು. ತೆಲುಗು ಚಿತ್ರರಂಗದವರು ವಿಶಾಲ ಹೃದಯದವರು ಎಲ್ಲರನ್ನೂ ಇಷ್ಟ ಪಡುತ್ತಾರೆ, ಪ್ರತಿಭೆಗೆ ಮಣೆ ಹಾಕುತ್ತಾರೆ ಎಂದು ಹೇಳಿದ್ದ ಸೌಮ್ಯ ರಾವ್ ಪುಷ್ಪ 2 ಕ್ರೇಜ್ ನೋಡಿ ಹೇಗಿದೆ ಅಂತಾ, ಇದೇ ರೀತಿ ತೆಲುಗು ಚಿತ್ರರಂಗ ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋಗುತ್ತೆ ಎಂದು ಹೇಳಿದ್ದರು. ಕೆಜಿಎಫ್, ಕಾಂತಾರ ಆಯ್ತು ಕನ್ನಡ ಚಿತ್ರರಂಗದ ಹಣೆ ಬರಹ ಅಷ್ಟೇ, ಅಲ್ಲಿ ನನಗೆ ತುಂಬಾ ಕಹಿ ಅನುಭವ ಆಗಿದೆ, ಪಾತ್ರಕ್ಕಾಗಿ ಪಲ್ಲಂಗ ಹತ್ತಬೇಕು, ಅದು ಇದು ಎಂಬ ಕರ್ಮ ಇದೆ ಅಲ್ಲಿ ಎಂದು ಹೇಳಿದ್ದರು. ಈ ಮೂಲಕ ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎನ್ನುವ ಉಮೇಧಿಗೆ ಬಿದ್ದವರಂತೆ ಸೌಮ್ಯ ಕಂಡು ಬಂದಿದ್ದರು.ಉಂಡ ಮನೆಗೆ ಸೌಮ್ಯ ರಾವ್ ಎರಡು ಬಗೆದರು ಎಂದು ಅನೇಕರು ಮಾತನಾಡಿಕೊಂಡಿದ್ದರು.

ಸೌಮ್ಯ ರಾವ್ ಅವರ ಈ ಹೇಳಿಕೆಗೆ ಕರುನಾಡಿನೆಲ್ಲೆಡೆ ಆಗ ಆಕ್ರೋಶ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸೌಮ್ಯ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಈಗ ಇದೆಲ್ಲವೂ ಆಗಿ ಒಂದೆರಡ್ಮೂರು ವಾರದ ನಂತರ ಸೌಮ್ಯ ರಾವ್ ಮತ್ತೊಮ್ಮೆ ರಾಜೇಶ್ ಗೌಡ ಅವರ ಮುಂದೆ ಬಂದು ಕುಂತಿದ್ದಾರೆ. ಇನ್ನೊಂದು ಸಂದರ್ಶನವನ್ನು ಕೂಡ ನೀಡಿದ್ದಾರೆ.
ನಾನು ಆ ವಿವಾದದ ಕುರಿತು ನನ್ನ ಇನ್ಸ್ಟಾಗ್ರಾಮ್ನಲ್ಲಿ ಕುರಿತು ಸ್ಪಷ್ಟನೆಯನ್ನು ನೀಡಬೇಕೆಂದುಕೊಂಡಿದ್ದೇ ಆದರೆ ಅಲ್ಲಿ ನನಗೆ ಇರುವವರಲ್ಲಿ ಬಹುತೇಕ ತೆಲುಗಿನವರೇ ಈ ಕಾರಣಕ್ಕೆ ಒಂದೊಳ್ಳೆ ವೇದಿಕೆಯನ್ನು ಹುಡುಕುತ್ತಿದ್ದೆ ಈ ಸಂದರ್ಭದಲ್ಲಿ ನಿಮ್ಮ ವೇದಿಕೆಯೇ ಸೂಕ್ತ ಎಂಬ ಭಾವನೆ ನನಗೆ ಬಂತು ಹೀಗಾಗಿಯೇ ಇಲ್ಲಿಯೇ ಮತ್ತೆ ಬಂದೆ ಎಂದು ಹೇಳಿರುವ ಸೌಮ್ಯ ರಾವ್ ತೆಲುಗಿನ ಆ ಸಂದರ್ಶನದಲ್ಲಿ ನಾನು ಕನ್ನಡದ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದೇನೆ, ಕನ್ನಡದ ಬಗ್ಗೆ ನಾನು ಮಾತನಾಡುತ್ತಿಲ್ಲ ಕನ್ನಡ ಚಿತ್ರರಂಗದ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದೇನೆ ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಕುರಿತು ಹೇಳಿ ಎಂದಾಗ ನನಗೆ ಕನ್ನಡ ಚಿತ್ರರಂಗದ ಮೇಲೆ ಅಷ್ಟಾಗಿ ಒಲವು ಇಲ್ಲ ಯಾಕೆಂದರೆ ಅವರು ನನ್ನ ಕೈ ಹಿಡಿಯಲಿಲ್ಲ. ಪ್ರತಿಭೆ ಇದ್ದರೂ ನೆರವಾಗಲಿಲ್ಲ ಎನ್ನುವ ಉತ್ತರವನ್ನು ನೀಡಿದ್ದೇ ಎಂದು ಹೇಳಿದ್ದಾರೆ.
ಮುಂದುವರೆದು ನಾನು ಹಳೆಯ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿಲ್ಲ, ಪ್ರಸ್ತುತ ಕನ್ನಡ ಚಿತ್ರರಂಗದ ಬಗ್ಗೆ ಆ ಸಂದರ್ಶನದಲ್ಲಿ ಮಾತನಾಡಿದ್ದೆ ಎಂದಿರುವ ಸೌಮ್ಯಾ ರಾವ್, ಸದ್ಯದ ಚಿತ್ರರಂಗ ಚಿಕ್ಕದಾಗುತ್ತಿದೆ, ಪ್ರತಿಭಾ ಪಲಾಯನಗಳು ನಡೆಯುತ್ತಿವೆ, ಸರಿಯಾದ ಅವಕಾಶಗಳು ಸಿಕ್ತಿಲ್ಲ, ಕಾಸ್ಟಿಂಗ್ ಕೌಚ್ ಎಂಬ ಭೂತ ಕನ್ನಡ ಚಿತ್ರರಂಗದಲ್ಲಿದೆ, ಸುಮಾರು ಜನಕ್ಕೆ ಸಿಗಬೇಕಾದ ಸಂಭಾವನೆ ಸಿಕ್ತಿಲ್ಲ, ಅವಕಾಶಗಳು ಸಿಕ್ತಿಲ್ಲ, ಕೆಟ್ಟ ಹುಳುಗಳು ಕನ್ನಡ ಚಿತ್ರರಂಗದಲ್ಲಿ ಜಾಸ್ತಿಯಾಗಿವೆ, ಇಂತಹವರಿಂದ ಕನ್ನಡ ಇಂಡಸ್ಟ್ರೀ ಚಿಕ್ಕದಾಗುತ್ತಿದೆ ಎಂದು ನಾನು ಹೇಳಿದ್ದು ಎಂದಿದ್ದಾರೆ. ಇಂಡಸ್ಟ್ರೀ ಸಣ್ಣ ಇದೆ, ಇಂಡಸ್ಟ್ರೀ ಗಲೀಜು ಎಂದು ನಾನು ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ.
ಇನ್ನು, ಕೆಜಿಎಫ್ ಮತ್ತು ಕಾಂತಾರ ನಂತರ ಯಾವ ಒಳ್ಳೆಯ ಚಿತ್ರ ಬಂದಿಲ್ಲ ಎಂದು ನಾನು ಹೇಳಿದಾಗ ಮ್ಯಾಕ್ಸ್ ಮತ್ತು ಯುಐ ಚಿತ್ರಗಳು ಇನ್ನೂ ಬಂದಿರಲಿಲ್ಲ ಎಂದಿರುವ ಸೌಮ್ಯಾ ರಾವ್, ನನ್ನ ಆ ಸಂದರ್ಶನವನ್ನು ಎರಡು ತಿಂಗಳ ಹಿಂದೆಯೇ ರೆಕಾರ್ಡ್ ಮಾಡಲಾಗಿತ್ತು. ಆದರೆ ಆ ನಂತರ ಈಗ ಹದಿನೈದು ಇಪ್ಪತ್ತು ದಿನದ ನಂತರ ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಕೆಜಿಎಫ್, ಕಾಂತಾರ ಮೀರಿಸುವಂತಹ ಚಿತ್ರಗಳನ್ನು ನಿರ್ಮಾಣ ಮಾಡುವ ಶಕ್ತಿ ಕನ್ನಡ ಚಿತ್ರರಂಗಕ್ಕೆ ಇದೆ, ಕನ್ನಡದ ಬರಹಗಾರರಿಗೆ ಇದೆ ಆದರೆ ಇಲ್ಲಿರುವ ಕೆಲ ಗುಂಪುಗಳು ಅದಕ್ಕೆ ಅವಕಾಶ ಮಾಡಿಕೊಡ್ತಿಲ್ಲ ಎಂದು ಹೇಳಿದ್ದಾರೆ. ಇದೆಲ್ಲದರಿಂದ ಹೊರ ಬಂದರೆ ಕನ್ನಡ ಚಿತ್ರರಂಗ ಇನ್ನು ಬೆಳೆಯುತ್ತೆ, ವಿಶಾಲವಾಗುತ್ತೆ ಎನ್ನುವ ಮನಸ್ಥಿತಿಯಲ್ಲಿ ನಾನು ಆ ಮಾತುಗಳನ್ನಾಡಿದ್ದೆ ಹೊರತು ಬೇರೆ ಯಾವ ಕೆಟ್ಟ ಉದ್ದೇಶದಿಂದ ನಾನು ಮಾತನಾಡಿಲ್ಲ ಎಂದಿದ್ದಾರೆ.
ಆದರೆ ಇದನ್ನರಿಯದ ಅನೇಕರು ಕೈಯಲ್ಲಿ ಮೊಬೈಲ್ ಇದೆ, ಬಿಟ್ಟಿ ಕರೆನ್ಸಿ ಇದೆ ಅಂತ ಬಾಯಿಗೆ ಬಂದಂತೆ ಕಾಮೆಂಟ್ಗಳನ್ನು ಮಾಡಿದ್ದಾರೆ ಎಂದಿರುವ ಸೌಮ್ಯಾ ನನ್ನ ಆ ಹೇಳಿಕೆಯನ್ನು ತುಂಬಾ ಜನ ಸಮರ್ಥನೆ ಮಾಡಿಕೊಂಡವರು ಇದ್ದಾರೆ ಎಂದು ಹೇಳಿದ್ದಾರೆ. ಡಾ.ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡಿಕೊಂಡು ಬೆಳೆದವಳು ನಾನು, ನನ್ನ ಆರಾಧ್ಯ ದೈವ ಅವರು ನಮಗೆ ಇಲ್ಲಿ ಅವಕಾಶ ಸಿಕ್ತಿಲ್ಲ ಎನ್ನುವ ಕೊರಗು ನನಗೆ ಇದೆ ಎಂದು ಹೇಳಿರುವ ಸೌಮ್ಯ ಅಲ್ಲೇ ಬಿದ್ದು ಸಾಯಿ ಅಂತ ಹೇಳ್ತಾರೆ ಇವರು ಯಾರು ನನಗೆ ಹೇಳೋಕೆ ಎನ್ನುವ ಪ್ರಶ್ನೆ ಮಾಡಿದ್ದಾರೆ. ಗಲೀಜು ಗಲೀಜು ಕಾಮೆಂಟ್ಗಳನ್ನು ಮಾಡ್ತಾರೆ ನಾಚಿಕೆಯಾಗಲ್ವಾ ಅವರಿಗೆಲ್ಲ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ ಎಂದು ಕಿಡಿ ಕಾರಿದ್ದಾರೆ. ಪೂರ್ತಿ ವಿಡಿಯೋವನ್ನು ನೋಡದೇ ಮನ ಬಂದಂತೆ ವಿಡಿಯೋಗಳನ್ನು ತಿರುಚಿ ಕೆಲವರು ಹಾಕಿದ್ದಾರೆ, ಆ ವಿಡಿಯೋಗಳನ್ನು ನೋಡಿ ಕೆಟ್ಟದಾಗಿ ಮಾತನಾಡುವುದು ಸರೀನಾ ಎಂದು ಪ್ರಶ್ನಿಸಿರುವ ಸೌಮ್ಯಾ ಕೆಟ್ಟಾ ಕೊಳಕು ಕಾಮೆಂಟ್ ಹಾಕುವರು ನನ್ನ ಕಾಲಿನ ಎಕ್ಕಡಕ್ಕೂ ಸಮ ಇಲ್ಲ ಎಂದು ಕೆಂಡ ಕಾರಿದ್ದಾರೆ. ಕನ್ನಡದ ಬಗ್ಗೆ ಹತ್ತು ಹಲವು ವಿಚಾರಗಳನ್ನು ಮಾತನಾಡಿ ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ. ನನ್ನ ತಾಯಿಯಷ್ಟೇ ಕನ್ನಡ ನನಗೆ ಇಷ್ಟ ಎಂದು ಹೇಳಿದ್ದಾರೆ. ಕಾಮೆಂಟ್ ಮಾಡೋ ಮಕ್ಕಳಿಗೆಲ್ಲ ಅದೇನ್ ಬಂದಿದೆಯೋ ಗೊತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











