Spandana Death: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ, ಬ್ಯಾಂಕಾಕ್ ಪ್ರವಾಸದ ವೇಳೆ ದುರ್ಘಟನೆ
ಬೆಂಗಳೂರು, ಆಗಸ್ಟ್. 07: ಚಂದನವನದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಅವರು ವಿದೇಶ ಪ್ರವಾಸದಲ್ಲಿದ್ದ ವೇಳೆ ಹೃದಯಾಘಾತದಿಂಧ ನಿಧನರಾಗಿದ್ದಾರೆ. ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ಲೋಬಿಪಿಯಾಗಿದ್ದು, ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಈ ದಂಪತಿಗೆ 14 ವರ್ಷದ ಮಗನಿದ್ದಾನೆ.
ವಾರ ಶುರುವಾಗುವ ಮೊದಲ ದಿನವೇ ಸ್ಯಾಂಡಲ್ವುಡ್ಗೆ ಬರಸಿಡಿಲು ಬಡಿಯುವ ಸುದ್ದಿ ಬಂದಿದೆ. ಸಿನಿರಂಗದ ಚಿನ್ನಾರಿಮುತ್ತ ನಟ ವಿಜಯ ರಾಘವೇಂದ್ರ ಅವರು ಮುದ್ದಿನ ಮಡದಿ ಸ್ಪಂದನಾ ಅವರನ್ನು ಕಳೆದುಕೊಂಡಿದ್ದಾರೆ. ಇಡೀ ಚಿತ್ರರಂಗಕ್ಕೆ ಆಘಾತ ನೀಡಿರುವ ಸುದ್ದಿ ವಿದೇಶದಿಂದ ಬಂದಿದೆ. ವಿಜಯ್ ರಾಘವೇಂದ್ರ ಜೊತೆಗೆ ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಪಂದನಾ ಅವರು ಅಲ್ಲಿಯೇ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.

ಆಘಾತಕಾರಿ ಸುದ್ದಿ ಬೆನ್ನಲ್ಲೇ ಸ್ಪಂದನಾ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಸಹೋದರ ಬ್ಯಾಂಕಾಕ್ಗೆ ತೆರಳಿದ್ದಾರೆ. ವಿಜಯ ರಾಘವೇಂದ್ರ ಸಹೋದರ ನಟ ಶ್ರೀಮುರುಳಿ, ರಾಜ್ ಕುಟುಂಬದ ರಾಘವೇಂದ್ರ ರಾಜ್ಕುಮಾರ್ ಬ್ಯಾಂಕಾಕ್ ಕಡೆ ಪ್ರಯಾಣ ಬೆಳಸಿದ್ದಾರೆ. ನಾಳೆ (ಮಂಗಳವಾರ) ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ತರುವ ಸಾಧ್ಯತೆಯಿದೆ.
ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನ 2007ರ ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ನಿರ್ಮಾಪಕ ಚಿನ್ನೇಗೌಡರ ಸೊಸೆಯಗಿದ್ದ ಸ್ಪಂದನಾ, ನಟ ರವಿಚಂದ್ರನ್ ನಟನೆ, ನಿರ್ದೇಶನದ 'ಅಪೂರ್ವ' ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದಲ್ಲಿ ವಿಜಯರಾಘವೇಂದ್ರ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇನ್ನೂ ವಿಜಯ್ ರಾಘವೇಂದ್ರ ಅಭಿನಯದ ಕೆಲ ಸಿನಿಮಾದಲ್ಲಿ ಕೂಡ ನಿರ್ಮಾಪಕಿ ಆಗಿ ಕಾರ್ಯನಿರ್ವಹಿಸಿದರು.

ಮೃತ ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಂ ಇತ್ತೀಚೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣಾ ವೇಳೆ ಸಹೋದರನ ಪರ ಸ್ಪಂದನಾ ಪ್ರಚಾರ ನಡೆಸಿದ್ದರು.
ಸಿನಿರಂಗದ ಮುದ್ದಾದ ಜೋಡಿಯ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇದೆ. ಇವರ ವಿವಾಹ ವಾರ್ಷಿಕೋತ್ಸವದ ತಯಾರಿಯಲ್ಲಿದ್ದ ಕುಟುಂಬದವರಿಗೆ ಸ್ಪಂದನಾ ಸಾವು ಭಾರಿ ಆಘಾತ ನೀಡಿದೆ. ಸ್ಪಂದನಾ ಹಠಾತ್ ಸಾವಿಗೆ ಗಣ್ಯರು ಸೇರಿದಂತೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.


Click it and Unblock the Notifications











