ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ: ವಿಜಯರಾಘವೇಂದ್ರ ಮತ್ತು ಸ್ಪಂದನಾ ವಿವಾಹ ವಾರ್ಷಿಕೋತ್ಸವದ ಖುಷಿ ಕದ್ದ ಜವರಾಯ
ಬೆಂಗಳೂರು, ಆಗಸ್ಟ್. 07: ಜವರಾಯನ ಅಟ್ಟಹಾಸಕ್ಕೆ ಸ್ಯಾಂಡಲ್ವುಡ್ ಬೆಚ್ಚಿಬಿದ್ದಿದೆ. ಬೆಳ್ಳಂಬೆಳಗ್ಗೆ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನವಾರ್ತೆ ಬರಸಿಡಿಲಿನಂತೆ ಬಡಿದಿದೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಅವರು ಅಲ್ಲಿಯೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ. ಪತಿ ವಿಜಯರಾಘವೇಂದ್ರ, ಮಗ ಶೌರ್ಯ, ಕುಟುಂಬಸ್ಥರನ್ನು ಅಗಲಿದ್ದಾರೆ.
ನಟ ವಿಜಯರಾಘವೇಂದ್ರ ಮತ್ತು ಸ್ಪಂದನಾ ಅವರು 2007ರ ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದವರು. ಪ್ರೀತಿಯ ಮಡದಿ ಮೇಲೆ ಸಮುದ್ರದಷ್ಟು ಪ್ರೀತಿಯಿಟ್ಟುಕೊಂಡವರು ವಿಜಯ ರಾಘವೇಂದ್ರ. ನೋಡಿದ ಕ್ಷಣದಲ್ಲೇ ಅವರೆಡೆಗೆ ಆಕರ್ಷಿತರಾಗಿ, ಅದು ಜಗಳದಲ್ಲಿ ಆರಂಭವಾಗಿ ಪ್ರೀತಿಗೆ ತಿರುಗಿ ಒಂದು ತಿಂಗಳಲ್ಲೇ ಮದುವೆಯ ಹಂತಕ್ಕೆ ಬಂದ ಅಪರೂಪದ ಪ್ರೇಮಕಥೆ ಈ ಜೋಡಿಯದ್ದು.

ಇಷ್ಟು ಪ್ರೀತಿಸುತ್ತಿದ್ದ ಈ ಜೋಡಿ ಇನ್ನೇನು ತಮ್ಮ 16ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದರು. ಆದರೆ, ವಿಧಿ ಎಷ್ಟು ಕ್ರೂರಿ ನೋಡಿ. ಸಮಾರಂಭಕ್ಕೆ ಕೇವಲ 19 ದಿನಗಳು ಬಾಕಿ ಇರುವಾಗಲೇ ಮನೆಯಲ್ಲಿ ಸೂತಕದ ವಾತಾವರಣವನ್ನು ತಂದಿದೆ. ಸಂಭ್ರಮದಿಂದ ಕಳೆಗಟ್ಟಬೇಕಿದ್ದ ಸುಂದರ ಮನೆಯಲ್ಲಿ ಸೂತಕದ ವಾತಾವರಣವಿದೆ. ಸ್ಮಶಾನ ಮೌನ ಎಲ್ಲೆಡೆ ಆವರಿಸಿದೆ.
ಇನ್ನು, ತನ್ನ ಅತ್ತಿಗೆ ಸಾವಿನ ಬಗ್ಗೆ ಮಾತನಾಡಿರುವ ನಟ ಶ್ರೀಮುರುಳಿ, "ಸ್ಪಂದನಾ ರಾಘವೇಂದ್ರ ಅವರು ನಿಧನರಾಗಿರುವುದು ಹೌದು. ಅಣ್ಣ ಕರೆ ಮಾಡಿ ಹೇಳಿದರು. ಅತ್ತಿಗೆ ಅವರ ಕುಟುಂಬಸ್ಥರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ರಾತ್ರಿ ಮಲಗಿದ್ದ ಅವರು ಮತ್ತೆ ಏಳಲೇ ಇಲ್ಲ. ಸದ್ಯಕ್ಕೆ ನಾವು ಲೋ ಬಿ.ಪಿ ಎಂದುಕೊಂಡಿದ್ದೇವೆ. ನಾಳೆ ಮೃತದೇಹ ಬೆಂಗಳೂರಿಗೆ ಬರಲಿದೆ. ಬಂದ ಮೇಲೆ ಉಳಿದ ವಿಚಾರ ತಿಳಿಯುತ್ತದೆ. ಇನ್ನು ಮುಂದಿನ ವಿಚಾರಗಳು ಏನು ಎಂದು ತಿಳಿದಿಲ್ಲ. ನಾಳೆ ಬಂದ ಮೇಲೆ ಉಳಿದ ವಿಚಾರಗಳ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಅವರು ನಮ್ಮನ್ನು ಅಗಲಿರುವುದಂತೂ ಹೌದು" ಎಂದು ಮೌನಕ್ಕೆ ಜಾರಿದ್ದಾರೆ.

ವಿದೇಶದಲ್ಲಿ ಮೃತಪಟ್ಟಿರುವ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ನಲ್ಲೇ ನಡೆಯಲಿದೆ. ನಾಳೆ (ಆಗಸ್ಟ್ 8) ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ. ಖ್ಯಾತ ನಿರ್ಮಾಪಕ ಚಿನ್ನೇಗೌಡರ ಸೊಸೆಯಗಿದ್ದ ಸ್ಪಂದನಾ, ನಟ ರವಿಚಂದ್ರನ್ ನಟನೆ, ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದರ ಜೊತೆಗೆ ವಿಜಯ ರಾಘವೇಂದ್ರ ಅಭಿನಯದ ಕೆಲ ಸಿನಿಮಾದಲ್ಲಿ ಕೂಡ ನಿರ್ಮಾಪಕಿಯಾಗಿದ್ದರು.


Click it and Unblock the Notifications











