ಚಿರು ಹುಟ್ಟುಹಬ್ಬಕ್ಕೆ ಸರ್ಜಾ ಕುಟುಂಬ ಮಾಡಿರುವ ಈ ಕೆಲಸಕ್ಕೆ ಅಭಿಮಾನಿಗಳ ಪ್ರಶಂಸೆ
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಣೆ ಮಾಡಲಾಗಿದೆ. ಚಿರು ಇಲ್ಲ ಎನ್ನುವ ನೋವಿನಲ್ಲೇ ಇಡೀ ಕುಟುಂಬ ಫೋಟೋ ಇಟ್ಟು ಪೂಜೆ ಮಾಡಿ ಜನ್ಮದಿನ ಆಚರಣೆ ಮಾಡಿದೆ. ಜನ್ಮ ದಿನದ ವಿಶೇಷವಾಗಿ ಚಿರು ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿದೆ, ಜೊತೆಗೆ ರಾಜಮಾರ್ತಾಂಡ ಸಿನಿಮಾದ ಇಂಟ್ರೋ ಸಾಂಗ್ ಸಹ ರಿಲೀಸ್ ಆಗಿದೆ.
ಈ ಎಲ್ಲಾ ವಿಚಾರಗಳು ಎಲ್ಲರಿಗೂ ಗೊತ್ತಿರುವುದೆ. ಆದರೆ ಅಣ್ಣನ ಹುಟ್ಟುಹಬ್ಬದ ದಿನ ತಮ್ಮ ಧ್ರುವ ಸರ್ಜಾ ಮಾಡಿರುವ ಕೆಲಸ ನಿಜಕ್ಕು ಅಚ್ಚರಿ ಮೂಡಿಸುತ್ತೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಹಾಗೆ ಸರ್ಜಾ ಕುಟುಂಬ ಮಾಡುವ ಸಾಮಾಜಿಕ ಕಾರ್ಯ ಸಹ ಯಾರಿಗೂ ಗೊತ್ತಾಗುವುದಿಲ್ಲ.
ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಸಮೀಪವಿರುವ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡಿ, ಅನಾಥ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಅಣ್ಣನ ಹುಟ್ಟುಹಬ್ಬಕ್ಕೆ ಧ್ರುವ ಸರ್ಜಾ ಕರ್ನಾಟಕದ ಅನೇಕ ಅನಾಥಾಶ್ರಮಗಳಿಗೆ ವಿಶೇಷವಾದ ಊಟದ ವ್ಯವಸ್ಥೆ ಮಾಡಿಸಿದ್ದಾರೆ.

ಸುಮಾರು 25 ರಿಂದ 30 ಸಾವಿರ ಜನರಿಗೆ ಅನ್ನದಾನ ಮಾಡಿದ್ದಾರೆ. ಧ್ರುವ ಸರ್ಜಾ ಈ ಕೆಲಸಕ್ಕೆ ಅನಾಥಾಶ್ರಮದ ಮಕ್ಕಳು, ವೃದ್ಧಾಶ್ರಮದಲ್ಲಿರುವವರು ಸಂತಸ ಪಟ್ಟಿದ್ದಾರೆ. ಜೊತೆಗೆ ಚಿರು ಸರ್ಜಾ ಹೆಸರಿನಲ್ಲಿ ಕೇಕ್ ಕತ್ತರಿಸಿ, ಚಿರುಗೆ ವಿಶ್ ಮಾಡಿದ್ದಾರೆ. ನಾವು ಅನಾಥರಲ್ಲ, ಸರ್ಜಾ ಕುಟುಂಬ ನಮಗೆ ಅನ್ನದಾನ ಮಾಡಿದ್ದಾರೆ ಎಂದು ಭಾವುಕರಾಗಿದ್ದಾರೆ.

ನೋವಿನಲ್ಲೂ ಇನ್ನೊಬ್ಬರ ಹೊಟ್ಟೆ ತುಂಬಿಸೊ ಸರ್ಜಾ ಕುಟುಂಬದ ಈ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದುಬರುತ್ತಿದೆ. ಸರ್ಜಾ ಕುಟುಂಬಕ್ಕೆ ದೇವರು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ. ಎಂಥ ಒಳ್ಳೆಯ ಕಾರ್ಯಮಾಡಿದ್ದಾರೆ ಎಂದು ಹೊಗಳುತ್ತಿದ್ದಾರೆ. ಅನಾಥಾಶ್ರಮಕ್ಕೆ ವಿಶೇಷ ಊಟದ ವ್ಯವಸ್ಥೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Click it and Unblock the Notifications











