'ಕಲಾವಿದರಿಗೆ 3 ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ'
''ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಎರಡು ವರ್ಷದಿಂದ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ. ಈಗ ಕಲಾವಿದರಿಗೆ 3 ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ'' ಎಂದು ಬಳ್ಳಾರಿ ಮೂಲದ ರಂಗಕಲಾವಿದ ಪುರುಷೋತ್ತಮ್ ರಂಗ ಆಕ್ರೋಶ ಹೊರಹಾಕಿದ್ದಾರೆ.
''ನಿಮ್ಮ ಲೆಕ್ಕದಲ್ಲಿ ಕೋಟ್ಯಾಂತರ ರೂಪಾಯಿ ತೋರಿಸುತ್ತೀರಾ. ಮೂರು ಸಾವಿರ ಯಾರಿಗೂ ಸಾಕಾಗಲ್ಲ. ದಯವಿಟ್ಟು ಅದನ್ನು ಕೊಡಬೇಡಿ. ಒಂದೊತ್ತಿನ ಊಟಕ್ಕೆ ಆಗಲ್ಲ ಆ ಹಣ' ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಪರಿಣಾಮ ಸಂಕಷ್ಟದಲ್ಲಿ ಶ್ರಮಿಕ ವರ್ಗಕ್ಕೆ ಇಂದು ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಇದರಲ್ಲಿ ಕಲಾವಿದರಿಗೆ ಹಾಗೂ ಕಲಾತಂಡಗಳಿಗೆ ತಲಾ ಮೂರು ಸಾವಿರ ಘೋಷಣೆ ಮಾಡಲಾಯಿತು. ಈ ಹಣ ಕಲಾವಿದರ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಸಹಕಾರಿಯಾಗಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಮುಂದೆ ಓದಿ...

ಆಟೋ ಡ್ರೈವರ್ಗೆ ಕೊಟ್ಟಂತೆ ಕೊಡಬೇಡಿ
''ಆಟೋ ಡ್ರೈವರ್ಗೆ ಕೊಟ್ಟಂತೆ ಒಂದು ಕಲಾತಂಡಕ್ಕೆ 3 ಸಾವಿರ ಹಣ ಕೊಟ್ಟರೆ ಯಾರಿಗೆ ಸಾಲುತ್ತೆ. ಒಂದು ಕಲಾತಂಡದಲ್ಲಿ ಇಪತ್ತು ಜನರು ಇರ್ತಾರೆ, ಕೆಲವೊಂದು ತಂಡದಲ್ಲಿ ಮೂವತ್ತು ಜನ ಇರ್ತಾರೆ. ಯಾರಿಗೆ ಹಂಚುವುದು, ಯಾರಿಗೆ ಸಹಾಯವಾಗುತ್ತೆ. ಮೂರು ಸಾವಿರ ಯಾರಿಗೆ ಸಾಕಾಗುತ್ತೆ'' ಎಂದು ಪ್ರಶ್ನಿಸಿದ್ದಾರೆ.

ಕಲಾವಿದರು ಕಣ್ಣೀರು ಹಾಕಿದ್ರೆ ಸರ್ಕಾರಕ್ಕೆ ಒಳ್ಳೆಯದಲ್ಲ
ಟಿವಿ ಮಾಧ್ಯಮವೊಂದರ ಜೊತೆ ಮಾತನಾಡಿದ ಪುರುಷೋತ್ತಮ್ ರಂಗ ''ಕಲಾವಿದರಿಗೆ ಕಣ್ಣೀರು ಹಾಕಿಸಿದರೆ ಸರ್ಕಾರಕ್ಕೆ ಒಳ್ಳೆಯದಾಗಲ್ಲ. ಕಲಾವಿದನಿಗೆ ಕನಿಷ್ಠ ಅಂದ್ರೆ 5 ಸಾವಿರ ಕೊಡಬೇಕು. ಒಂದು ಕಲಾತಂಡಕ್ಕೆ ಕನಿಷ್ಠ ಅಂದ್ರೆ 10 ಸಾವಿರ ರೂಪಾಯಿ ಕೊಡಬೇಕು. ಕಳೆದ ಎರಡು ವರ್ಷದಿಂದ ಹೇಗೆ ಬದುಕುತ್ತಿದ್ದಾರೆ ಎಂದು ಅವರಿಗೆ ಗೊತ್ತಿದೆ. ಅದನ್ನು ಹೇಳುವುದಕ್ಕೂ ಸಾಧ್ಯವಿಲ್ಲ'' ಎಂದು ಭಾವುಕರಾದರು.

ಈ ಸಲ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ
'ಕಳೆದ ವರ್ಷ ಕೊರೊನಾ ಇದ್ದ ಸಂದರ್ಭದಲ್ಲಿ ಕೆಲವು ದಿನಸಿ ಕಿಟ್ ಕೊಟ್ಟರು, ಕೆಲವರು ದುಡ್ಡು ಕೊಟ್ಟರು, ಮಠ, ಸ್ವಾಮೀಜಿಗಳು ಸಹಾಯ ಮಾಡಿದ್ದರು. ಈ ಸಲ ರಾಜಕಾರಣಿಗಳಂತೂ ಕಾಣಿಸೇ ಇಲ್ಲ. ಏಕಂದ್ರೆ ಯಾವುದು ಚುನಾವಣೆ ಇಲ್ಲ ಅಲ್ವಾ' ಎಂದು ಟೀಕಿಸಿದ್ದಾರೆ.
Recommended Video

ಸರ್ಕಾರದ ಯೋಜನೆ ತಲುಪಿಸಲು ಕಲಾವಿದರು ಬೇಕು
''ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕಲಾವಿದರು ಬೇಕು. ಸರ್ಕಾರದ ಘನತೆಗಳನ್ನು ಎತ್ತಿ ತೋರಿಸಬೇಕು. ಕಲಾವಿದರು ಇಲ್ಲ ಅಂದ್ರೆ ದೇಶದ ಸಂಸ್ಕೃತಿಯನ್ನು ಎತ್ತಿ ತೋರಿಸಲು ಸಾಧ್ಯವಿಲ್ಲ. ಅದನ್ನು ತಿಳಿದು ಕಲಾತಂಡಕ್ಕೆ ಹತ್ತು ಸಾವಿರ ಹಾಗೂ ಕಲಾವಿದರಿಗೆ ಐದು ಸಾವಿರ ತಲುಪಿಸುವ ಕೆಲಸ ಮಾಡಿ'' ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


Click it and Unblock the Notifications











