ಬಾಬು ಚಿತ್ರದ ಈ ಹಾಡು ಓಂ ಶಾಂತಿಯನ್ನೂ ಮೀರಿಸಲಿ!
ಇತ್ತೀಚೆಗೆ ಬಿಡುಗಡೆಯಾದ 'ಓಂ ಶಾಂತಿ ಓಂ'ಹಿಂದಿ ಚಿತ್ರದ ಹಾಡೊಂದರಲ್ಲಿ 30ಪ್ಲಸ್ ನಟನಟಿಯರು ಕುಣಿದಿರುವ ಸಂಗತಿ ನಿಮಗೆ ಗೊತ್ತಿದೆ. ಹೀಗೆ ಬಾಲಿವುಡ್ ತಾರೆಯರ ಒಂದೆಡೆ ಕೂಡಿಹಾಕಿದ್ದು ಚಿತ್ರದ ನಿರ್ದೇಶಕಿ; ಫರ್ಹಾ ಖಾನ್. ಅವರಿಗಿಂತ ನಾವೇನು ಕಡಿಮೆಯಿಲ್ಲ ಎಂಬಂತೆ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಗಡ್ಡ ಕೆರೆದುಕೊಂಡು ಎದ್ದು ಕೂತಿದ್ದಾರೆ.
ಬಾಬು ಅವರ ಹೊಸ ಚಿತ್ರ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರದಲ್ಲಿ ಹೊಸಬರು ಹಳಬರು ಸೇರಿದಂತೆ ಅನೇಕ ನಟನಟಿಯರು ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಹೀಗೆ ಪಟ್ಟಿ ಬೆಳೆದಿದೆ. ಇವರನ್ನೆಲ್ಲ ಒಂದೇ ಪರದೆಯಲ್ಲಿ ನೋಡೋದು ನಿಜಕ್ಕೂ ಪ್ರೇಕ್ಷಕರಿಗೆ ಖುಷಿಯ ಸಂಗತಿ.
ಕನ್ನಡ ಚಿತ್ರರಂಗದ ನಟ,ನಟಿಯರನ್ನು ಮಾತ್ರವಲ್ಲದೇ, ನಿರ್ದೇಶಕರು, ತಂತ್ರಜ್ಞರು, ಸಂಗೀತ ನಿರ್ದೇಶಕರು, ಗೀತ ರಚನೆಗಾರರು ಹೀಗೆ ಎಲ್ಲರನ್ನೂ ಒಂದೇ ಚಿತ್ರದಲ್ಲಿ ಸೇರಿಸಲು ಕನಸುಗಾರ ರವಿಚಂದ್ರನ್ ಮುಂದೆ ಬಂದಿದ್ದರು. ಆ ಚಿತ್ರಕ್ಕೆ'ಮದುವೆ ಮನೆ'ಎಂದು ಹೆಸರಿಡಲಾಗಿತ್ತು. ಈ ಚಿತ್ರ ನಭೂತೋ ನಭವಿಷ್ಯತೆ ಆಗಲಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದ್ಯಾಕೋ ಆ ಬಗೆಗಿನ ಪ್ರಯತ್ನ ನಡೆಯಲೇ ಇಲ್ಲ.
ಇನ್ನು ಈ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್'ಚಿತ್ರದಲ್ಲಿ ಉಪೇಂದ್ರ ನಾಯಕ. ಚಿತ್ರದ ತುಂಬ ಮಕ್ಕಳೇ ಕಾಣಿಸಲಿದ್ದು, ಉಪ್ಪಿಗೆ ಸ್ಟೆಂಟ್ ಮಾಸ್ಟರ್ ಪಾತ್ರ. ಇದು ಸಂಪೂರ್ಣ ಮಕ್ಕಳ ಚಿತ್ರ. ನಾಗರಹೊಳೆ ನಂತರ ಒಂದು ಒಳ್ಳೆ ಮಕ್ಕಳ ಚಿತ್ರ ಮಾಡುತ್ತಿದ್ದೇನೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಚಿತ್ರದ ನಾಯಕಿ ರಮ್ಯಾ.
(ದಟ್ಸ್ ಕನ್ನಡ ಸಿನಿವಾರ್ತೆ)
ಹೊಸ ಚಿತ್ರಗಳ ವಿಮರ್ಶೆ :
ಸ್ನೇಹಾಂಜಲಿಯ 'ಧ್ರುವ'ತಾರೆ!
ಕಾಡುತ್ತಲೇ ಇರುತ್ತವೆ'ಆ ದಿನಗಳು'


Click it and Unblock the Notifications