ಜೈಲಿನಲ್ಲಿ ಜಾಲಿ ಮಾಡೋಕೆ ಹೋಗಿ ಸಂಕಷ್ಟ; ಮತ್ತೆ ಪೊಲೀಸರ ವಶಕ್ಕೆ ದರ್ಶನ್?
ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ರೌಡಿಗಳ ಜೊತೆ ಬಿಂದಾಸ್ ಆಗಿ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ದರ್ಶನ್ ಕಾಣಿಸಿಕೊಂಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಜೈಲಿನ ನಿಯಮಗಳನ್ನು ಉಲ್ಲಂಘಿಸಿ ನಟೋರಿಸ್ ರೌಡಿಗಳ ಜೊತೆ ಕಾಣಿಸಿಕೊಂಡಿದ್ದಕ್ಕೆ ದರ್ಶನ್ ವಿರುದ್ಧ 3 ಎಫ್ಐಆರ್ ದಾಖಲಾಗಿದೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ದರ್ಶನ್ಗೆ ಹೊಸ ಪ್ರಕರಣಗಳು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಆ ಪೈಕಿ ಎರಡು ಕೇಸ್ಗಳಲ್ಲಿ ದರ್ಶನ್ A1 ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಹೋದಮೇಲೆ ದರ್ಶನ್ ಬದಲಾಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯಾಕೋ ಹಾಗೆ ಕಾಣುತ್ತಿಲ್ಲ.

ಜೈಲಿನೊಳಗೆ ದುಡ್ಡಿದ್ದವರಿಗೆ ಎಲ್ಲಾ ಸೌಕರ್ಯಗಳು ಸಿಗುತ್ತದೆ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತಿದೆ. ಇದೀಗ ವಿಲ್ಸನ್ ಗಾರ್ಡನ್ ನಾಗ ರೀತಿಯ ರೌಡಿಗಳು ಜೈಲಿನಲ್ಲಿದ್ದುಕೊಂಡೇ ಆಪ್ತರ ಮೂಲಕ ದರ್ಶನ್ಗೆ ಸಿಗರೇಟ್, ಮದ್ಯ, ಬಿರಿಯಾನಿ ಸಪ್ಲೇ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಮೊಬೈಲ್ ಬಳಸುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ ನಟ ದರ್ಶನ್ ವೀಡಿಯೋ ಕಾಲ್ ಮಾಡಿ ಹೊರಗಡೆ ಇರುವವರ ಜೊತೆ ಮಾತನಾಡಿರುವ ವೀಡಿಯೋ ಸಹ ವೈರಲ್ ಆಗಿದೆ.
ಜೈಲಿನಲ್ಲಿದ್ದುಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಕುಳ್ಳ ಸೀನಾ, ವಿಲ್ಸನ್ ಗಾರ್ಡನ್ ನಾಗ, ಧರ್ಮ, ಸತ್ಯ ಸೇರಿದಂತೆ ಕೆಲ ರೌಡಿಗಳ ಜೊತೆ ದರ್ಶನ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದರ್ಶನ್ ಕೇಂದ್ರ ಕಾರಾಗೃಹದಲ್ಲಿ ಇದ್ದಾರೋ ರೆಸಾರ್ಟ್ನಲ್ಲಿ ಇದ್ದಾರೋ ಎಂದು ಭಾರೀ ಚರ್ಚೆ ನಡೆಯುತ್ತಿದೆ. ಸರ್ಕಾರ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ಈಗಾಗಲೇ ಜೈಲಿನ 7 ಜನ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಗೃಹ ಸಚಿವರು ಆದೇಶ ನೀಡಿದ್ದಾರೆ. ದರ್ಶನ್ ಜೈಲು ರಾಜಾತಿಥ್ಯದ ಪ್ರಕರಣದ ಕೂಡ ಗಂಭೀರ ಸ್ವರೂಪ ಪಡೆಯಲಿದೆ. ಪ್ರಕರಣ ಸಂಬಂಧ ಪೊಲೀಸರು ಮತ್ತೆ ದರ್ಶನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ಹಿಂದೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 15 ದಿನಗಳ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಕೈವಾಡ ಇದೆ ಎನ್ನುವ ಅನುಮಾನ ಬರುತ್ತಿದ್ದಂತೆ ಪೊಲೀಸರು ಮೈಸೂರಿಗೆ ತೆರಳಿ ವಶಕ್ಕೆ ಪಡೆದಿದ್ದರು. ಬಳಿಕ ನೇರವಾಗಿ ಬೆಂಗಳೂರಿಗೆ ಕರೆ ತಂದಿದ್ದರು. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ನಡೆಯಿತು. ಬಳಿಕ ಪಟ್ಟಣಗೆರೆ ಶೆಡ್ ಬಳಿಗೂ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿತ್ತು.
ಜೂನ್ 22ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರತಿ 14 ದಿನಕ್ಕೆ ಆರೋಪಿಗಳನ್ನು ವೀಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗುತ್ತಿದ್ದಾರೆ. ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ನಾಳೆ(ಆಗಸ್ಟ್ 28) ಮತ್ತೆ ಆರೋಪಿಗಳು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.
ಮತ್ತೊಂದು ಕಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೊನೆ ಹಂತಕ್ಕೆ ತಲುಪಿದೆ. ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಎಲ್ಲಾ ಸಾಕ್ಷಾಧಾರಗಳನ್ನು ಕೆಲ ಹಾಕಿದ್ದು ದರ್ಶನ್ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಅಷ್ಟರಲ್ಲೇ ದರ್ಶನ್ & ಗ್ಯಾಂಗ್ ಜೈಲು ರಾಜಾತಿಥ್ಯದ ಫೋಟೊ, ವೀಡಿಯೋ ಹೊರಬಂದು ಸುದ್ದಿಯಾಗಿದೆ. ಈ ಬಾರಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ದರ್ಶನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅದಕ್ಕಾಗಿ ಬಾಡಿ ವಾರೆಂಟ್ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದು ಕಡೆ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.


Click it and Unblock the Notifications











