ಸಾಯಿಪ್ರಕಾಶ್ 'ಶ್ರೀಕ್ಷೇತ್ರ ಆದಿಚುಂಚನಗಿರಿ' ಬಿಡುಗಡೆ

ಆದಿಚುಂಚನಗಿರಿ ಶ್ರೀ ಕ್ಷೇತ್ರದ ಮಹಿಮೆಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಶೃತಿ, ಹಿರಿಯ ನಟಿ ಜಯಂತಿ, ಅನು ಪ್ರಭಾಕರ್, ಶ್ರೀ ಮುರಳಿ, ರಾಮ್ ಕುಮಾರ್, ಶಿವಕುಮಾರ್ ಸೇರಿದಂತೆ ಇನ್ನೂ ಅನೇಕ ಖ್ಯಾತ ಹಾಗೂ ಹಿರಿಯ ಕಲಾವಿದರು ನಟಿಸಿದ್ದಾರೆ.
ಸಂಗೀತ ನಿರ್ದೇಶಕ ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಮೊದಲ ಬಾರಿಗೆ ರಾಜ್ಯದ ಅನೇಕ ಗಣ್ಯಾತಿಗಣ್ಯರು, ಸಚಿವರುಗಳು, ಸಂಸದರು ಮತ್ತು ಶಾಸಕರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಯಾರು? ಯಾವ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದನ್ನು ತೆರೆಯ ಮೇಲೆ ನೋಡಿ.
ಆದಿ ಚುಂಚನಗಿರಿ ಕ್ಷೇತ್ರ ಹೇಗೆ ಸ್ಥಾಪನೆಗೊಂಡಿತು, ಅದರ ಸ್ಥಾಪಕರು ಯಾರು, ಅಲ್ಲಿ ನಡೆದ ಪವಾಡಗಳೇನು ಇತ್ಯಾದಿ ಸತ್ಯ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಪೌರಾಣಿಕ ಮತ್ತು ಐತಿಹಾಸಿಕ ಚಿತ್ರವನ್ನು ನಿರ್ದೇಶಿಸಿದ್ದಾರೆ ಸಾಯಿ ಪ್ರಕಾಶ್. ಈ ಚಿತ್ರ ಸಾಕಷ್ಟು ಮೊದಲೇ ಚಿತ್ರೀಕರಣವಾಗಿದ್ದರೂ ಅನಿವಾರ್ಯ ಕಾರಣಗಳಿಂದ ತೀರಾ ತಡವಾಗಿ ತೆರೆಗೆ ಬರುತ್ತಿದೆ.
ಈ ಮೊದಲೂ ಕೂಡ ಸಾಕಷ್ಟು ಪೌರಾಣಿಕ ಚಿತ್ರಗಳನ್ನು ತೆರೆಗೆ ತಂದಿದ್ದ ನಿರ್ದೇಶಕ ಸಾಯಿಪ್ರಕಾಶ್, ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾಗಿ ಹೇಳಿದ್ದಾರೆ. ಮಹಾನ್ ದೈವ ಭಕ್ತರಾಗಿರುವ ಸಾಯಿಪ್ರಕಾಶ್ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಸದ್ಯದಲ್ಲೇ ತಿಳಿದುಬರಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











