ಚಿರಂಜೀವಿ-ಪವನ್ ಕಲ್ಯಾಣ್ ಅಭಿಮಾನಿಗಳು ಕೇಳಲೇಬೇಕಾದ ವಿಷ್ಯವಿದು.!
ತೆಲುಗು ಇಂಡಸ್ಟ್ರಿಯಲ್ಲಿ ಏನಾಗ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ದಿನಕ್ಕೊಂದು ಬೆಳವಣಿಗೆ, ದಿನಕ್ಕೊಂದು ವಿವಾದ, ದಿನಕೊಬ್ಬ ನಟರ ವಿರುದ್ಧ ವಾಗ್ದಾಳಿಗಳು ನಡೆಯುತ್ತಲೇ ಇದೆ.
ಅದರಲ್ಲೂ ಮೆಗಾಸ್ಟಾರ್ ಫ್ಯಾಮಿಲಿ ಟಾಲಿವುಡ್ ನ ಕೇಂದ್ರ ಬಿಂದು ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. 'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ತೆಲುಗು ನಟಿಯರು ಹೋರಾಟ ನಡೆಸುತ್ತಿದ್ದು, ಸ್ಟಾರ್ ನಟರ ವಿರುದ್ಧ ಹೇಳಿಕೆಗಳನ್ನ ನೀಡುತ್ತಿದ್ದಾರೆ.
ಇದೀಗ, ನಟ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಬಗ್ಗೆ ನಟಿ ಶ್ರೀರೆಡ್ಡಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ ಪುಟಗಟ್ಟಲೇ ಬರೆದುಕೊಂಡಿರುವ ಶ್ರೀರೆಡ್ಡಿ ಎಲ್ಲಿಯೂ ಹೆಸರು ಬಳಸದೇ ಪರೋಕ್ಷವಾಗಿ ಮೆಗಾಬ್ರದರ್ಸ್ ಮೇಲೆ ಕಿಡಿಕಾರಿದ್ದಾರೆ. ಹಾಗಿದ್ರೆ, ಶ್ರೀರೆಡ್ಡಿ ಚಿರು-ಪವನ್ ಬಗ್ಗೆ ಆರೋಪ ಮಾಡ್ತಿರೋದೇನು.? ಮುಂದೆ ಓದಿ....

ಹುಚ್ಚು ಭ್ರಮೆಯಲ್ಲಿ ಬದುಕುತ್ತಿದ್ದೀರಾ.!
''ಆ ಒಂದು ಕುಟುಂಬ ಚೆನ್ನಾಗಿದ್ದರೇ ನಾವೆಲ್ಲ ಚೆನ್ನಾಗಿರುತ್ತೇವೆ ಎಂಬ ಹುಚ್ಚು ಭಾವನೆಯಿಂದ ಬದುಕುತ್ತಿದ್ದೀರಾ. ನಮ್ಮ ಕುಲದಲ್ಲಿ ಒಬ್ಬ ದೊಡ್ಡ ಹೀರೋ ಇದ್ದಾನೆ. ಬೇರೆ ವರ್ಗದ ಹೀರೋಗೆ ಪೈಪೋಟಿ ನೀಡುತ್ತಿದ್ದಾನೆ. ನಮ್ಮ ಗೌರವ ಉಳಿಸಿದ್ದಾನೆ ಎಂದುಕೊಂಡು ಮೈಮೇಲೆ ಬಟ್ಟೆ ಮತ್ತು ಕಾಲಿಗೆ ಚಪ್ಪಲಿ ಇದೆಯಾ ಇಲ್ವಾ ಅಂತ ನೋಡಿಕೊಳ್ಳದೇ 30 ವರ್ಷದಿಂದ ಆ ಕುಟುಂಬವನ್ನ ಸಾಕುತ್ತಿದ್ದೀರಾ. ನಿಮಗೆ ಏನು ಸಿಕ್ಕಿದೆ''.

ಅವರ ಮಕ್ಕಳು ಹೀರೋ ಆದ್ರು, ನಿಮಗೆ ಏನು ಸಿಕ್ತು.?
''ಆ ಕುಟುಂಬ ರಾಜಭವನ ರೀತಿಯ ಮನೆಗಳನ್ನ ಕಟ್ಟಿಕೊಂಡು, ಅವರನ್ನ ಹೆಗಲ ಮೇಲೆ ಎತ್ತುಕೊಂಡಿರುವವ ನಿಮ್ಮನ್ನು ಗೇಟ್ ಮುಂದೆಯೇ ನಿಲ್ಲಿಸಿಬಿಟ್ಟರು. ಅದರಲ್ಲಿ ನಿಮಗೆ ಸಿಕ್ಕಿದ್ದು, ನಮ್ಮ ಕುಲದಲ್ಲಿ ಒಬ್ಬ ದೊಡ್ಡ ಹೀರೋ ಆಗಿದ್ದಾನೆ ಎಂಬ ಜಾತಿಪ್ರೇಮ. ಈ ಜಾತಿಪ್ರೇಮವನ್ನ ಬಳಸಿಕೊಂಡ ಈ ಕುಟುಂಬ ಇಲ್ಲಿಯವರೆಗೂ 8 ಜನರನ್ನ ಹೀರೋಗಳನ್ನಾಗಿಸಿ ನಿಮ್ಮ ಮೇಲೆ ಬಿಟ್ಟಿದ್ದಾರೆ. ನಿಮಗೆ ಏನ್ ಬಂತು ಅದರಿಂದ.?''

ರಾಜಕೀಯದಲ್ಲಿ ದುಡ್ಡು ಮಾಡಿದ್ರು, ನಿಮಗೇನು ಬಂತು.?
''ಆಮೇಲೆ ರಾಜಕೀಯಕ್ಕೆ ಬಂದು, ನಿಮ್ಮ ಭುಜದ ಮೇಲೆ ನಿಂತು ದ್ವಜ ಇಟ್ಟು, ಪಾರ್ಟಿ ಸ್ಥಾಪನೆ ಮಾಡಿದ್ರು. ಪಾರ್ಟಿ ನಿಮ್ಮ ಹೆಸರಲ್ಲಿಟ್ಟು, ಟಿಕೆಟ್ ಮಾರಿಕೊಂಡು ದುಡ್ಡು ಮಾಡಿದ್ರು. ಮಗನಿಗೆ ದುಬಾರಿ ಕಾರ್ ಕೊಡಿಸಿದ್ರು. ನಿಮಗೇನು ಮಾಡಿದ್ರು.? ಚೆನ್ನಾಗಿ ದುಡ್ಡು ಮಾಡ್ಕೊಂಡು, ಪಾರ್ಟಿ ಮುಚ್ಚಿ, ನನಗೆ ಅನ್ಯಾಯ ಮಾಡಿದ್ರು ಅಂತ ಮೊಸಳೆ ಕಣ್ಣೀರಿಟ್ಟರು''.

ಅವರ ತಮ್ಮ ಅದೇ ಮಾಡ್ತಿದ್ದಾನೆ, ನಿಮಗೇನು ಬಂತು.?
''ಇವತ್ತು ತಮ್ಮ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಪಕ್ಷ ಅಸ್ತಿತ್ವಕ್ಕೆ ಬಂದೇ ಇಲ್ಲ. ಆಗಲೇ ಟೇಬಲ್ ಕೆಳಗೆ ಕಮಿಷನ್ ತಗೊಳ್ತಿದ್ದಾರೆ. ಯುವತಿಯೊಬ್ಬಳು ಅವರನ್ನ ಬೈದ್ರೆ, ನಾಲ್ಕು ದಿನದ ನಂತರ ನಮ್ಮ ಅಮ್ಮನಿಗೆ ಬೈದ್ರು ಅಂತ ಹೇಳಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ, ಅದರಿಂದ ಸ್ವಲ್ಪ ಪಬ್ಲಿಸಿಟಿ ತಗೊಂಡು ತಾನು ಸ್ಥಾಪನೆ ಮಾಡಲಿರುವ ಹೊಸ ಚಾನಲ್ ಗೆ ಅಡಿಪಾಯ ಹಾಕ್ತಿದ್ದಾರೆ''.

ನಿಮಗೊಂದು ನನ್ನ ನೇರ ಪ್ರಶ್ನೆ.?
''ಸುಮಾರು 30 ವರ್ಷಗಳ ಕಾಲ ನಂಬರ್ 1 ಹೀರೋ ಆಗಿದ್ದುಕೊಂಡು, ಚಿತ್ರಮಂದಿರಗಳನ್ನೆಲ್ಲ ನಿಯಂತ್ರಣ ಮಾಡ್ಕೊಂಡು, ಸಿನಿಮಾ ಇಂಡಸ್ಟ್ರಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಆ ದೊಡ್ಡ ಮನುಷ್ಯ. ನಿಮ್ಮ ಕುಲದಿಂದ ಯಾರನ್ನಾದರೂ ಒಬ್ಬರನ್ನ ಹೀರೋ ಮಾಡಿದ್ದಾರೆ. ಅಥವಾ ಬೇರೆ ಯಾರನ್ನಾದರೂ ಬೆಳಸಿದ್ದಾರಾ.? ಒಂದು ಡಜನ್ ಹೀರೋಗಳು ಅವರ ಕುಟುಂಬದಿಂದ ಬಂದಿದ್ದಾರೆ.?''

ಇನ್ಮುಂದೆ ಆದ್ರೂ ನಿಮ್ಮ ಬಗ್ಗೆ ಯೋಚನೆ ಮಾಡು
''ನಿಮಗೆ ಮಾಡಿದ್ದು ಏನೂ ಇಲ್ಲ. ನಿಮ್ಮಿಂದಲೇ ಎಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮ್ಮ ಚಪ್ಪಲಿ, ನಿಮ್ಮ ಬಟ್ಟೆ ಚೆನ್ನಾಗಿದೆಯಾ ನೋಡಿಕೊಳ್ಳಿ. ನಮ್ಮ ಕುಲ ಎಂದು ಬೆಳಸಿದ್ದು ಸಾಕು. ನಿಮಗೆ ಏನಾದರೂ ಆದ್ರೆ, ಅವರು ಯಾರೂ ಬರಲ್ಲ. ಹೇಳಬೇಕಿದ್ದು ಹೇಳಿದ್ದೇನೆ. ಇನ್ನು ನಿಮ್ಮಿಷ್ಟ....'' - ಶ್ರೀರೆಡ್ಡಿ, ನಟಿ


Click it and Unblock the Notifications











