'ಮದಗಜ' ಚಿತ್ರೀಕರಣ ಮುಗಿಸಿದ ಶ್ರೀಮುರಳಿ: ಸೆಟ್ನಲ್ಲಿ ಸಂಭ್ರಮ ಜೋರು
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಮದಗಜ' ಚಿತ್ರೀಕರಣ ಮುಕ್ತಾಯವಾಗಿದೆ. ಸುಮಾರು 74 ದಿನಗಳ ಕಾಲ ದೇಶದ ಹಲವು ಕಡೆ ಶೂಟಿಂಗ್ ಮಾಡಿರುವ ಚಿತ್ರತಂಡ ಈಗ ಕುಂಬಳಕಾಯಿ ಹೊಡೆದು ಅಧಿಕೃತವಾಗಿ ಚಿತ್ರೀಕರಣ ಮುಗಿಸಿದೆ.
ಕೊನೆಯ ದಿನ ಶೂಟಿಂಗ್ ಮುಗಿಸಿದ ಖುಷಿಯನ್ನು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಚಿತ್ರತಂಡ ಸಂಭ್ರಮಿಸಿದೆ. ಈ ವೇಳೆ ಚಿತ್ರದ ನಟ ಶ್ರೀಮುರಳಿ, ನಾಯಕಿ ಆಶಿಕಾ ರಂಗನಾಥ್, ನಿರ್ದೇಶಕ ಮಹೇಶ್ ಸೇರಿದಂತೆ ತಾಂತ್ರಿಕ ಹಾಗೂ ಕಾರ್ಮಿಕ ವರ್ಗ ಭಾಗಿಯಾಗಿತ್ತು. ಮದಗಜ ಆರಂಭ ದಿನದಿಂದ ಇಲ್ಲಿಯವರೆಗೂ ಪಯಣದ ಅನುಭವಗಳ ವಿಡಿಯೋವೊಂದನ್ನು ಮಹೇಶ್ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ಎರಡನೇ ಲಾಕ್ಡೌನ್ ಮುಂಚೆಯೇ ಮದಗಜ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿತ್ತು. ಬಾಕಿ ಉಳಿದಿದ ಚಿತ್ರೀಕರಣವನ್ನು ಜುಲೈ ಕೊನೆಯ ವಾರದಲ್ಲಿ ಆರಂಭಿಸಿದ್ದರು. ಕೊರೊನಾ ಭೀತಿಯ ನಡುವೆಯೇ ಜುಲೈ 22 ರಿಂದ ಶೂಟಿಂಗ್ ಶುರು ಮಾಡಿದ್ದರು. ಇದೀಗ ಯಶಸ್ವಿಯಾಗಿ ಮುಗಿದಿದೆ. ಮುಂದೆ ಓದಿ...

ಶ್ರೀಮುರಳಿ-ಆಶಿಕಾ ಕಾಂಬಿನೇಷನ್
'ಮದಗಜ' ಸಿನಿಮಾ ಪಕ್ಕಾ ಫ್ಯಾಮಿಲಿ ಆಕ್ಷನ್ ಡ್ರಾಮಾ ಆಗಿದ್ದು, ರೋರಿಂಗ್ ಸ್ಟಾರ್ಗೆ ನಟಿ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಲುಕ್ನಲ್ಲಿ ಆಶಿಕಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆಶಿಕಾ ಲುಕ್ ಸಹ ಬಿಡುಗಡೆಯಾಗಿತ್ತು. ಶ್ರೀಮುರಳಿ ಮತ್ತು ಆಶಿಕಾ ಕಾಂಬಿನೇಷನ್ ಸಹ ಮದಗಜ ಚಿತ್ರದ ಪ್ರಮುಖ ಆಕರ್ಷಣೆಯೂ ಆಗಿದೆ.

ಜಗಪತಿ ಬಾಬು ಖದರ್
ಮದಗಜ ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಸದ್ಯ ದಕ್ಷಿಣ ಭಾರತದ ಖ್ಯಾತ ವಿಲನ್ ಎನಿಸಿಕೊಂಡಿರುವ ಜಗಪತಿ ಬಾಬು ಎಂಟ್ರಿ ಈ ಚಿತ್ರಕ್ಕೆ ಮತ್ತಷ್ಟು ಧಮ್ ಹೆಚ್ಚಿಸಿದೆ. ಈಗಾಗಲೇ ಜಗಪತಿ ಬಾಬು ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಟೀಸರ್ ಸಹ ರಿಲೀಸ್ ಆಗಿದ್ದು, ಥ್ರಿಲ್ ಹೆಚ್ಚಿಸಿದೆ. ವಿಶೇಷ ಅಂದ್ರೆ ಸುಮಾರು 20 ವರ್ಷದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ 'ಮದಗಜ' ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ದೇವಯಾನಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. 1999ರಲ್ಲಿ ಡಾ ವಿಷ್ಣುವರ್ಧನ್ ಅಭಿಯಿಸಿದ್ದ 'ಪ್ರೇಮೋತ್ಸವ' ಚಿತ್ರದಲ್ಲಿ ದೇವಯಾನಿ ಅಭಿನಯಿಸಿದ್ದರು. ಅದಾದ ಮೇಲೆ ಮದಗಜ ಚಿತ್ರಕ್ಕೆ ಎಂಟ್ರಿಯಾಗಿದ್ದಾರೆ.

ಬಿಡುಗಡೆ ಯಾವಾಗ ಎನ್ನುವುದು ಕುತೂಹಲ
ಇನ್ನು ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ. ಅದಾಗಲೇ ಮೂರು ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು, ಸೌತ್ ಇಂಡಿಯಾದಲ್ಲಿ ಸದ್ದು ಮಾಡ್ತಿದೆ. ಹೆಬ್ಬುಲಿ, ರಾಬರ್ಟ್ ಚಿತ್ರಗಳಿಗೆ ಬಂಡವಾಳ ಹಾಕಿದ್ದ ಉಮಾಪತಿ ಶ್ರೀನಿವಾಸ್ ಈ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಮದಗಜ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಸದ್ಯಕ್ಕೆ ಕುತೂಹಲ.

ಕಾರ್ಮಿಕನಿಗೆ ಚಿಕಿತ್ಸೆ ಕೊಡಿಸಿದ ನಟ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮದಗಜ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಪುಟ್ಟಸ್ವಾಮಿ ಎಂಬ ಜೂನಿಯರ್ ಕಲಾವಿದ ಕಾಲಿಗೆ ಗಾಯವಾಗಿದೆ. ಕಾಲು ನೋವಿನಿಂದ ಅಲ್ಲೇ ಸೆಟ್ನಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಶ್ರೀಮುರಳಿ ಆ ಜೂನಿಯರ್ ಕಲಾವಿದನ ಬಳಿ ಹೋಗಿ, ಸ್ವತಃ ಅವರೇ ಕಾಲು ಮುಟ್ಟಿ ಗಾಯದ ತೀವ್ರತೆ ಪರೀಕ್ಷಿಸಿದ್ದಾರೆ. ನಂತರ ಅವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೋರಿಂಗ್ ಸ್ಟಾರ್ ನಡೆಗೆ ಮಚ್ಚುಗೆ ವ್ಯಕ್ತವಾಗಿತ್ತು. 'ಮದಗಜ' ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಕೂಡ ಶ್ರೀಮುರಳಿ ಅವರ ಮಾನವೀಯತೆ ಕೆಲಸಕ್ಕೆ ಅಭಿನಂದಿಸಿದ್ದರು.


Click it and Unblock the Notifications











