ಜನವರಿ 10ರಂದು ಸಂಜು ವೆಡ್ಸ್ ಗೀತಾ 2 ಬಿಡುಗಡೆ, 'ಹುಬ್ಬಳ್ಳಿ'ಯಲ್ಲಿ ಚಿತ್ರತಂಡ ಹೇಳಿದ್ದೇನು ?
ಹುಬ್ಬಳ್ಳಿ : ಆ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿಯಾಗುವುದಲ್ಲದೇ.. ಬಾಕ್ಸಾಫೀಸ್ನಲ್ಲಿಯೂ ಗೆದ್ದ ಸಿನಿಮಾ ಸಂಜು ವೆಡ್ಸ್ ಗೀತಾ. ಈ ಚಿತ್ರದ ಹಾಡು ಹಾಗೂ ಚಿತ್ರದಲ್ಲಿ ರಮ್ಯಾ ಅನುಭವಿಸಿದ್ದ ಪಾಡು ಇವತ್ತು ಕೂಡ ಅನೇಕರ ಮನದಲ್ಲಿ ಹಸಿರಾಗಿಯೇ ಇದೆ. ಹೀಗಿರುವಾಗ ಇದೀಗ ಸಂಜು ವೆಡ್ಸ್ ಗೀತಾ ಚಿತ್ರದ ಭಾಗ ಎರಡು ಬಿಡುಗಡೆಗೆ ಸಿದ್ಧವಾಗಿದೆ. ಇದೇ ಜನವರಿ ಹತ್ತರಂದು ಚಿತ್ರ ಕರುನಾಡಿನೆಲ್ಲೆಡೆ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಚಿತ್ರತಂಡ ಈಗ ಹುಬ್ಬಳ್ಳಿಯಲ್ಲಿ ತಮ್ಮ ಚಿತ್ರದ ಕುರಿತು ಮಾತನಾಡಿದೆ. ಚಿತ್ರದ ಪ್ರಚಾರವನ್ನು ಮಾಡಿದೆ.
ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಯ ಪ್ರಕಾರ ಸಂಜು ವೆಡ್ಸ್ ಗೀತಾ ಅವರ ಪ್ರಕಾರ ಈ ಚಿತ್ರ ಮತ್ತೊಂದು ಅದ್ಭುತ ಪ್ರೇಮಕಾವ್ಯವಾಗಲಿದೆ. ಇವರ ಈ ವಿಶ್ವಾಸವನ್ನು ಚಿತ್ರದ ಹಾಡುಗಳು ಈಗಾಗಲೇ ಹೆಚ್ಚಿಸಿವೆ. ಅವನು ಸಂಜು ಅವಳು ಗೀತಾ ಹಾಡು ಸೇರಿದಂತೆ ಚಿತ್ರದ ಉಳಿದ ಹಾಡುಗಳಿಗೆ ಕನ್ನಡಿಗರು ತೋರಿಸಿರುವ ಪ್ರೀತಿಯಿಂದ ನಿರಾಳವಾಗಿರುವ ಕಿಟ್ಟಪ್ಪ ಚಿತ್ರವನ್ನು ಹುಬ್ಬಳ್ಳಿಯಲ್ಲಿರುವ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ಎಂಬ ಮನವಿಯನ್ನು ಮಾಡಿದ್ದಾರೆ. ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಮೊದಲನೇ ಭಾಗದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನ ಕೊಟ್ಟಿದ್ದ ನಾಗಶೇಖರ್, ಇಲ್ಲಿಯೂ ಚೆಂದದ ಆಡಿಯೋ ಹೂ ಗುಚ್ಛವನ್ನ ಕೊಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ನಾಗಶೇಖರ್ ಈ ಚಿತ್ರದ ಮೂಲಕ ರೇಶ್ಮೆ ಬೆಳೆಗಾರರ ಕಥೆಯ ಜೊತೆ ನವೀರಾದ ಪ್ರೇಮಕಥೆಯನ್ನು ಹೇಳುವ ಪ್ರಯತ್ನವನ್ನು ಮಾಡಿರುವುದಾಗಿ ಹೇಳಿದ್ದಾರೆ. ಶಿಡ್ಲಘಟ್ಟದಿಂದ ಸ್ವಿಜರ್ಲ್ಯಾಂಡ್ವರೆಗೆ ತಮ್ಮ ಕಥೆಯನ್ನುಸಾಗುತ್ತೆ ಎಂದು ಹೇಳಿದ್ದಾರೆ. ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶಕರಾಗಿ ಇವರ ಈ ಪ್ರಯಾಣದಲ್ಲಿ ಜೊತೆಯಾಗಿದ್ದರೆ, ಸಂಗೀತಾ ರವೀಂದ್ರನಾಥ್ ಅವರು ಮಳೆಯಂತೆ ಹಾಡಿಗೆ ಧ್ವನಿಯಾಗಿದ್ದಾರೆ.
ಸಂಜು ವೆಡ್ಸ್ ಗೀತಾ ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಅವರ ವೃತ್ತಿ ಬದುಕಿನಲ್ಲಿ ತುಂಬಾ ವಿಶೇಷವಾದ ಚಿತ್ರ. ಆದರೆ ಇಲ್ಲಿ ರಮ್ಯಾ ಬದಲು ರಚಿತಾ ರಾಮ್ ಇದ್ದಾರೆ. ಗೀತಾ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಇನ್ನು ಚಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರಾಗಿ ಇದು ಇವರಿಗೆ ಎರಡನೇ ಪ್ರಯತ್ನ. ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಲವಾದಿ ಕುಮಾರ್ ನಾಗಶೇಖರ್ ನನಗೆ ಕಥೆ ಹೇಳಿದಾಗ ತುಂಬಾನೇ ಇಷ್ಟವಾಯ್ತು ಎಂದು ಹೇಳಿದ್ಧಾರೆ. ನವಿರಾದ ಪ್ರೇಮ ಕಥೆಯ ಜೊತೆ ಇಲ್ಲಿ ರೈತರ ಕಥೆ-ವ್ಯಥೆ ಕೂಡ ಹೇಳುವ ಪ್ರಯತ್ನವನ್ನು ಮಾಡಿದ್ದೇವೆ ಎನ್ನುವ ಚಲವಾದಿ ಕುಮಾರ್ ಡಾ.ರಾಜ್ ಕುಮಾರ್ ಅಭಿನಯದ ಎವರ್ ಗ್ರೀನ್ ಚಿತ್ರ ಬಂಗಾರದ ಮನುಷ್ಯ ಚಿತ್ರವನ್ನು ನಮ್ಮ ಸಂಜು ವೆಡ್ಸ್ ಗೀತಾ 2 ಚಿತ್ರ ನೆನಪಿಸುತ್ತೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಭಾಗಕ್ಕೆ ಕತ್ತರಿಯನ್ನು ಹಾಕುವಂತೆ ಸೂಚಿಸದೇ ಚಿತ್ರಕ್ಕೆ ಯು ಸರ್ಟಿಫಿಕೆಟ್ ನೀಡಿರುವುದರಿಂದ ಗೆಲ್ಲುವ ಭರವಸೆ ನಿರ್ಮಾಪಕ ಚಲವಾದಿ ಕುಮಾರ್ ಅವರಲ್ಲಿ ಹೆಚ್ಚಿದೆ.
ಇನ್ನುಳಿದಂತೆ ಚಿತ್ರದಲ್ಲಿನ ಐದು ಹಾಡುಗಳನ್ನ ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ಇನ್ನೂ ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರದಲ್ಲಿದ್ದಾರೆ. ಸದ್ಯ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಚಿತ್ರದ ಪ್ರಚಾರವನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡುತ್ತಿದ್ದು ಚಿತ್ರ ಈ ಜನವರಿ ಹತ್ತರಂದು ಬಿಡುಗಡೆಯಾಗಲಿದೆ.


Click it and Unblock the Notifications











